ಹೊಸದಿಲ್ಲಿ, ಮೇ. 07: ರಾಜ್ಯಕ್ಕೆ ಅಗತ್ಯವಿರುವ 1200 ಮೆಟ್ರಿಕ್ ಟನ್ ಆಕ್ಸಿಜನ್ ಪೂರೈಕೆ ಮಾಡಬೇಕೆಂಬ ಹೈಕೋರ್ಟ್ ಆದೇಶಕ್ಕೆ ತಡೆಯೊಡ್ಡುವಂತೆ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ನ್ಯಾಯ ಮೂರ್ತಿಗಳಾದ ಡಿವೈ ಚಂದ್ರಚೂಡ್ ಮತ್ತು ಎಂ.ಆರ್. ಶಾ ಅವರ ಪೀಠದ ಮುಂದೆ ಈ ವಿಷಯವನ್ನು ಜನರಲ್ ತುಷಾರ್ ಮೆಹ್ತಾ ಅವರು ಪ್ರಸ್ತಾಪಿಸಿದ್ದರು. ಕರ್ನಾಟಕ ಹೈ ಕೋರ್ಟ್ ಆದೇಶಕ್ಕೆ ತುರ್ತಾಗಿ ತಡೆಯೊಡ್ಡಬೇಕು ಎಂದು ಕೋರಿದ್ದರು.
ಆದರೆ ಮೂರು ದಿನಗಳ ಒಳಗಾಗಿ ಅಗತ್ಯ ಆಮ್ಲಜನಕ ಪೂರೈಸಿ. ಕೋವಿಡ್-19 ರೋಗಿಗಳಿಗಾಗಿ ಪ್ರಸ್ತುತ ನೀಡುತ್ತಿರುವ ಮೆಡಿಕಲ್ ಆಕ್ಸಿಜನ್ ಪ್ರಮಾಣವನ್ನು 965 ಮೆಟ್ರಿಕ್ ಟನ್ನಿಂದ 1200 ಮೆಟ್ರಿಕ್ ಟನ್ಗಳಿಗೆ ಹೆಚ್ಚಿಸಬೇಕೆಂದು ಕರ್ನಾಟಕ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತ್ತು.
ಇದನ್ನು ಒಪ್ಪದ ಕೇಂದ್ರವು, ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿತ್ತು. ಕರ್ನಾಟಕದ ನಾಗರಿಕರು ಪರದಾಡಲು ಬಿಡುವುದಿಲ್ಲ’ಇಂದು ಈ ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಚಂದ್ರಚೂಡ್ ನೇತೃತ್ವದ ನ್ಯಾಯಪೀಠವು, ಹೈಕೋರ್ಟ್ ಆದೇಶದಲ್ಲಿ ನಾವು ಮಧ್ಯಪ್ರವೇಶ ಮಾಡುವುದಿಲ್ಲ.
ಕರ್ನಾಟಕದ ನಾಗರಿಕರು ಪರದಾಡಲು ಬಿಡುವುದಿಲ್ಲ. ರಾಜ್ಯಕ್ಕಿರುವ ಆಮ್ಲಜನಕದ ಬೇಡಿಕೆಯನ್ನು ಹೈಕೋರ್ಟ್ ಸರಿಯಾಗಿಯೇ ಪರಿಶೀಲಿಸಿದೆ. ಕರ್ನಾಟಕಕ್ಕೆ 1200 ಮೆಟ್ರಿಕ್ ಟನ್ ಆಮ್ಲಜನಕ ನೀಡಲೇಬೇಕು ಎಂದು ಕೇಂದ್ರದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾಗೆ ಸೂಚಿಸಿದೆ.