ಬೆಂಗಳೂರು,ಜೂ.23: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ಆತಂಕ ಕ್ಷೀಣಿಸುತ್ತಿರುವ ಬೆನ್ನಲ್ಲೇ ಇದೀಗ ಡೆಲ್ಟಾ ವೈರಸ್ ಮೂಲಕ ಮೂರನೇ ಅಲೆ ಸದ್ದಿಲ್ಲದೇ ಅಟ್ಟಹಾಸ ಆರಂಭಿಸಿದೆಯೇ ಎಂಬ ಅನುಮಾನ ಶುರುವಾಗಿದೆ.
ಕೊರೊನಾ ಎರಡನೇ ಅಲೆಯಲ್ಲಿ ರೂಪಾಂತರ ಎನ್ನಲಾಗಿರುವ ಡೆಲ್ಟಾ ವೈರಸ್ ಕಾಟ ದೇಶದ ಜನತೆಯನ್ನು ಬೆಂಬಿಡದೇ ಕಾಡುತ್ತಿದೆ. ರಾಜ್ಯದಲ್ಲಿ ಈಗಾಗಲೇ ಡೆಲ್ಟಾ ವೈರಸ್ ಆತಂಕ ಶುರುವಾಗಿದ್ದು, ಬೆಂಗಳೂರು ಹಾಗೂ ಮೈಸೂರಿನಲ್ಲಿ ಒಂದೊಂದು ಪ್ರಕರಣ ಪತ್ತೆಯಾಗಿದೆ ಎನ್ನಲಾಗಿದೆ.
ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ರಾಜ್ಯದಲ್ಲಿ ಡೆಲ್ಟಾ ವೈರಸ್ ಸೋಂಕು ಪತ್ತೆಯಾಗಿದೆ. ಈ ಬಗ್ಗೆ ಸೂಕ್ಷ್ಮವಾಗಿ ನಿಗಾ ವಹಿಸಲಾಗಿದ್ದು, ಸೋಂಕಿತರಿಗೆ ಯಾವುದೇ ರೋಗ ಲಕ್ಷಣ ಕಂಡು ಬಂದಿಲ್ಲ. ಅಲ್ಲದೇ ಸೋಂಕಿತರ ಸಂಪರ್ಕದಲ್ಲಿದ್ದ ಯಾರಿಗೂ ಸೋಂಕು ಹರಡಿಲ್ಲ. ಆದರೂ ಈ ಬಗ್ಗೆ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದ್ದು, ಅಗತ್ಯ ಲ್ಯಾಬ್ಗಳನ್ನು ಸಹ ಆರಂಭಿಸಲಾಗುತ್ತಿದೆ.