ಮಾಡಿರೋ 3 ಸಿನಿಮಾಗಳಿಗೆ ಹೀಗೆ ಏಗರಾಡೊದು ಸರಿಯಲ್ಲ ; ನಟ ಧನ್ವೀರ್ ವಿರುದ್ಧ ಆಕ್ರೋಶ!

`ಬೈ ಟೂ ಲವ್’ ಸಿನಿಮಾದ ನಾಯಕ ನಟ ಧನ್ವೀರ್ ವಿರುದ್ಧ ಹಲ್ಲೆ ಆರೋಪದಡಿ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಜ್ಯಾದ್ಯಂತ ನಟ ಧನ್ವೀರ್ ಅಭಿನಯದ ಬೈ ಟೂ ಲವ್ ಸಿನಿಮಾ ಬಿಡುಗಡೆಗೊಂಡಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಬೆಂಗಳೂರಿನ ಎಸ್.ಸಿ ರಸ್ತೆಯ ಅನುಪಮಾ ಥಿಯೇಟರ್ ನಲ್ಲಿ ಮೊದಲ ದಿನದ ಮೊದಲ ಶೋ ಹಮ್ಮಿಕೊಂಡಿದ್ದ ಸಿನಿಮಾ ತಂಡ, ಅಭಿಮಾನಿಗಳೊಟ್ಟಿಗೆ ಸಿನಿಮಾ ವೀಕ್ಷಿಸಿ ಸಂಭ್ರಮಿಸಿದೆ. ಇದೇ ಸಂತಸದಲ್ಲಿದ್ದ ನಟ ಧನ್ವೀರ್, ದಿನ ಪೂರ ಅಭಿಮಾನಿಗಳ ಅಭಿಪ್ರಾಯಗಳತ್ತ ಗಮನ ಹರಿಸಿದ್ದಾರೆ.

ಇದಾದ ಬಳಿಕ ತಡರಾತ್ರಿ ಬೈ ಟೂ ಲವ್ ಸಿನಿಮಾದ ಕೊನೆಯ ಪ್ರದರ್ಶನ ಮುಗಿಸಿಕೊಂಡು ತಮ್ಮ ಬೌನ್ಸರ್ ಜೊತೆಗೆ ಕಾರಿನಲ್ಲಿ ಮನೆಯತ್ತ ತೆರಳುತ್ತಿದ್ದ ಧನ್ವೀರ್ ಕಾರು ಮುಂದೆ ಚಲಿಸಿದೆ. ಇದೇ ಸಮಯಕ್ಕೆ ಯುವಕ ಚಂದ್ರಶೇಖರ್ ತನ್ನ ಗೆಳೆಯನ ಜೊತೆಗೆ ಊಟ ಮುಗಿಸಿಕೊಂಡು ಮನೆಗೆ ಹಿಂದಿರುಗುವಾಗ ನಟ ಧನ್ವೀರ್ ಅವರ ಕಾರು ಕಾಣಿಸಿಕೊಂಡಿದೆ. ಇದನ್ನು ಗಮನಿಸಿದ ಚಂದ್ರಶೇಖರ್ ಧನ್ವೀರ್ ಅವರ ಜೊತೆ ಒಂದು ಸೆಲ್ಫಿ ತೆಗೆಸಿಕೊಳ್ಳಬೇಕು ಎಂಬ ಹಂಬಲದಿಂದ ಮುಂದೆ ಹೋಗಿದ್ದಾರೆ. ಸೆಲ್ಫಿಗೆ ನಿರಾಕರಿಸಿದ ಧನ್ವೀರ್ ವಿರುದ್ಧ ಅಸಮಾಧಾನಗೊಂಡ ಯುವಕ ಬೇಸರದಿಂದ ಕೆಲ ಮಾತುಗಳನ್ನು ಹೇಳಿದ್ದಾರೆ.

ಚಂದ್ರಶೇಖರ್ ಮಾತು ಕೇಳುತ್ತಿದ್ದಂತೆ ಕೋಪಗೊಂಡ ಧನ್ವೀರ್ ಮತ್ತು ಅವರ bouncers ಯುವಕ ಚಂದ್ರಶೇಖರ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಹಲ್ಲೆಗೊಳಗಾದ ಚಂದ್ರಶೇಖರ್ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿದೆ. ಚಂದ್ರಶೇಖರ್ ದೇಹದ ಕೆಲ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಈ ಕುರಿತು ಯುವಕ ಚಂದ್ರಶೇಖರ್ ನಟ ಧನ್ವೀರ್ ವಿರುದ್ಧ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

Exit mobile version