‘ಜಿಯೋ’ ಕೈಯಲ್ಲಿ ನಾವೆಲ್ಲರೂ ‘ಮರೋ’ ಆದಂತೆಯೇ ಅದು ಎಚ್ಚರ: ನಟ ಕಿಶೋರ್

ನನ್ನ ನಾಡ ಪ್ರಜಾಪ್ರಭುಗಳೇ ಎಚ್ಚರ.. ನಮ್ಮ ವ್ಯವಸಾಯ ಎಲ್ಲಿಯವರೆಗೆ ಬಹುಪಾಲು ಸಣ್ಣರೈತನ ಕೈಲಿದೆಯೋ ಅಲ್ಲಿಯವರೆಗೆ ನಾಡಿನ ನೆಲ ಜಲ ಗಾಳಿ ಆಹಾರ ಒಟ್ಟಿನಲ್ಲಿ ನಾವೆಲ್ಲರೂ ಕ್ಷೇಮ. ಧರ್ಮಾಂಧತೆಯಲ್ಲಿ ಕಾರ್ಪೊರೇಟ್ (Corporate) ಗಳ ಕೈಗೆ ವ್ಯವಸಾಯವನ್ನೂ ಕೊಟ್ಟುಬಿಟ್ಟರೆ ಆ ರಾಮನೂ ನಮ್ಮನ್ನು ಕಾಪಾಡಲಾರ. ಕೊಟ್ಟಂತೆ ಕೊಟ್ಟು ಕೊರಳು ಹಿಡಿದು ವಸೂಲಿ ಮಾಡುವ ‘ಜಿಯೋ’ (Jio) ಕೈಯಲ್ಲಿ ನಾವೆಲ್ಲರೂ ‘ಮರೋ’ ಆದಂತೆಯೇ ಅದು.. ಎಚ್ಚರ.. ಎಂದು ನಟ ಕಿಶೋರ್ (Kishore) ಕೇಂದ್ರ ಸರ್ಕಾರದ ವಿರುದ್ದ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ತಮ್ಮ ಫೇಸ್ಬುಕ್ (Facebook) ಮುಖಪುಟದಲ್ಲಿ ಬರೆದುಕೊಂಡಿರುವ ಅವರು, ನಮ್ಮ ಬೆಳೆ ನಮ್ಮ ಬೆಲೆ ; ಇದು ರೈತರ ಹಕ್ಕಲ್ಲವೇ?ಬೆಂಕಿ ಪೊಟ್ಟಣದಿಂದ ಏರೊಪ್ಲೇನಿನವರೆಗೂ ಪ್ರತಿಯೊಂದು ಉದ್ದಿಮೆಗೂ ಆ ಸ್ವಾತಂತ್ರ್ಯ ಇರುವಾಗ ?? ಇದು ಬರೀ ಪಂಜಾಬಿನ ರೈತರ ಅಥವಾ ಬರೀ ರೈತರ ಸಮಸ್ಯೆಯಲ್ಲ .. ಕಾರ್ಪೊರೇಟ್ ಮೋದಿಯ (Modi) ದಮನಕಾರಿ ಅತ್ಯಾಚಾರಿ ಧೋರಣೆಯ, ಪ್ರಜಾಪ್ರಭುತ್ವವನ್ನು ಹೊಸಕಿಹಾಕುವ ಒಂದು ಉದಾಹರಣೆಯಷ್ಟೆ..

ರೈತರ ಶಾಂತಿಯುತ ಪ್ರತಿಭಟನೆ ದೆಹಲಿ (Delhi) ತಲುಪಬಾರದೆಂದು ತಡೆಯಲು ಬೇರಾವ ಪ್ರತಿಭಟನೆಗೂ ಇಲ್ಲದಷ್ಟು ಕಠೋರವಾಗಿ, ಅವರನ್ನು ಕೊಲ್ಲುವ ಹಂತಕ್ಕೆ ಮುಟ್ಟಿದ ಅನಿವಾರ್ಯತೆಯೇನು??ದೇಶದಲ್ಲಿ ರೈತರ ಸಂಖ್ಯೆ 60%. ಭಾರತದ ವ್ಯವಸಾಯ ಯೋಗ್ಯ ಭೂಮಿ ಇದರಲ್ಲಿಯ 98% ಸಣ್ಣರೈತರ ಕೈಯಲ್ಲಿದೆ..ಆ ರೈತನಿಗೆ ಎಂ.ಎಸ್.ಪಿ ಕೊಟ್ಟುಬಿಟ್ಟರೆ ಅವನು ಬಡವನಾಗೇ ಇರುವುದು ಹೇಗೆ??, ಹಳ್ಳಿಯಲ್ಲೇ ಘನತೆಯ ಬದುಕು ಸಿಕ್ಕಿಬಿಟ್ಟರೆ ಕಾರ್ಪೊರೇಟುಗಳಿಗೆ ಜಮೀನು ಮಾರಿಕೊಂಡು ಕೂಲಿಯಾಗಿ ಇವರ ನಗರ ಸೇರುವುದು ಹೇಗೆ.. ಇವರಿಗೆ ಓಟು ಬೀಳುವುದು ಹೇಗೆ?? ಎಂದು ಪ್ರಶ್ನಿಸಿದ್ದಾರೆ.

ಇನ್ನೊಂದು ಪೋಸ್ಟ್ನಲ್ಲಿ, ಮೋದಿ ಸರ್ಕಾರ ತನ್ನ ಮಿತ್ರ ಕಾರ್ಪೊರೇಟ್ ದೊರೆಗಳಿಗೆ ಮೂರು ಕಾಸಿನ ರೇಟಿಗೆ ದೇಶದ ಸಂಪತ್ತನ್ನೆಲ್ಲಾ ಮಾರಿದ ಹಾಗೆ ಆಹಾರವನ್ನೂ, ಸಣ್ಣ ರೈತರ ಭೂಮಿಯನ್ನೂ ಕಸಿದು ಮಾರಿಬಿಟ್ಟರೆ ಅಲ್ಲಿಗೆ ಮುಗಿಯಿತಲ್ಲ.. ದೇಶದ ಸಂಪೂರ್ಣ ಹಿಡಿತ ಕಾರ್ಪೊರೇಟ್ ಕೈಯಲ್ಲಿ..ವ್ಯವಸಾಯದ ಕನಿಷ್ಟ ಜ್ಞಾನ ಇಲ್ಲದ ಇವರು, ಇವರ ಇಡಿ ಗೂಂಡಾಪಡೆ, ಭಕ್ತಪಡೆ, ಗೋದಿ ಮೀಡಿಯಾ ಹೇಳುವುದು ಎಂ ಎಸ್ ಪಿ ಕೊಟ್ಟರೆ ದೇಶ ದಿವಾಳಿಯಂತೆ.. ಸರಕಾರವೇ ಎಲ್ಲವನ್ನೂ ಕೊಳ್ಳುವಂತೆ..ರೈತರು ಭಯೋತ್ಪಾದಕರಂತೆ… ಶ್ರೀಮಂತರಂತೆ.. ರೈತರೇ ಅಲ್ಲವಂತೆ ಹಾಗಾದರೆ ಇವರು ತಿನ್ನುವುದು ಅನ್ನವೇ ಅಲ್ಲ..

ಲಕ್ಷಾಂತರ ಕೋಟಿ, ಒಬ್ಬ ಅಯೋಗ್ಯ ಭ್ರಷ್ಟ ರಾಜಕಾರಿಣಿಯ ವರ್ಚಸ್ಸು ವರ್ಧಿಸಲು ಸುರಿವಾಗ, ಕಾರ್ಪೊರೇಟ್ ಗಳ ಸಾಲ ಮನ್ನಾ ಮಾಡುವಾಗ ದಿನದಿನವೂ ಸಾಯುತ್ತಿರುವ ರೈತನಿಗೆ ಇನ್ನಾದರೂ ನ್ಯಾಯಯುತ ಬೆಲೆ ಕೊಡಬೇಡವೇ? ರೈತರಿಗೆ ಬೇಕಿರುವುದು (ಇಷ್ಟು ವರ್ಷಗಳ ಶೋಷಣೆಗೆ ತಪ್ಪೊಪ್ಪಿಗೆಯಾಗಿ ಕೊಡಬೇಕಾದ್ದೇ ಆದರೂ ) ಓಟಿಗಾಗಿ ಕೊಡುವ ಸಮ್ಮಾನ್ ನಿಧಿಯ ಭಿಕ್ಷೆಯಲ್ಲ ಸಮ್ಮಾನದ ಬದುಕಿನ ಅವಕಾಶ. ಅದು ನ್ಯಾಯಯುತ ಬೆಲೆಯಿಂದ ಜನರ, ಸರ್ಕಾರದ ಇಂಗಿತದಿಂದ ಖಂಡಿತ ಸಾಧ್ಯ ಎಂದು ಟೀಕಿಸಿದ್ದಾರೆ.

Exit mobile version