ಅಲೋಪಥಿ ವೈದ್ಯಕೀಯ ಪದ್ಧತಿಗೆ ಅವಮಾನ ಆರೋಪ :ಸುಪ್ರೀಮ್ ಮೆಟ್ಟಿಲೇರಿದ ಯೋಗ ಗುರು ಬಾಬಾ ರಾಮ್ ದೇವ್

ನವದೆಹಲಿ,ಜೂ.23: ಅಲೋಪಥಿ ವೈದ್ಯಕೀಯ ಪದ್ಧತಿಯನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿ ಯೋಗ ಗುರು ಬಾಬಾ ರಾಮ್​ ದೇವ್ ವಿರುದ್ಧ ಹಲವು ಅಲೋಪಥಿಕ್​ ವೈದ್ಯರು, ಸಂಘಟನೆಗಳು ನೀಡಿದ ದೂರಿನ ಅನ್ವಯ ವಿವಿಧ ರಾಜ್ಯಗಳಲ್ಲಿ ಎಫ್​ಐಆರ್ ದಾಖಲಾಗಿದೆ. ಹೀಗೆ ತಮ್ಮ ವಿರುದ್ಧ ದಾಖಲಾದ ಎಫ್​​ಐಆರ್​​ಗಳ ವಿರುದ್ಧ ಬಾಬಾ ರಾಮ್​ದೇವ್​ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದಾರೆ.

ಯೋಗ ಗುರು ಬಾಬಾ ರಾಮ್​ದೇವ್ ಅಲೋಪಥಿಕ್​ ವೈದ್ಯಕೀಯ ಪದ್ಧತಿ ಮೂರ್ಖ ಪದ್ಧತಿ. ಇದರಿಂದ ಕೊವಿಡ್ 19 ಸೋಂಕು ಗುಣಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಅದನ್ನು ನೋಡಿದ ಅಲೋಪಥಿಕ ವೈದ್ಯರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಬಾಬಾ ರಾಮ್​ದೇವ್​ ವಿರುದ್ಧ ಪ್ರತಿಭಟನೆಯನ್ನೂ ನಡೆಸಿದ್ದವು.

ಭಾರತೀಯ ವೈದ್ಯಕೀಯ ಸಂಘ ನೀಡಿದ ದೂರಿನ ಅನ್ವಯ ಬಿಹಾರ ಮತ್ತು ಛತ್ತೀಸ್​ಗಢಗಳಲ್ಲಿ ಬಾಬಾ ರಾಮ್​ದೇವ್​ ವಿರುದ್ಧ ಪ್ರಕರಣ ದಾಖಲಾಗಿದೆ. ಅಲೋಪಥಿಕ್​ ವೈದ್ಯಕೀಯ ಪದ್ಧತಿಗೆ ಬಾಬಾ ರಾಮ್​ ದೇವ್​ ಅಗೌರವ ತೋರಿಸಿದ್ದಾರೆ. ಅಲ್ಲದೆ, ಜನರಿಗೆ ತಪ್ಪು ಸಂದೇಶ ರವಾನೆ ಮಾಡುತ್ತಿದ್ದಾರೆ ಎಂದು ಐಎಂಎ ದೂರಿನಲ್ಲಿ ಉಲ್ಲೇಖಿಸಿದೆ.

ಇದೀಗ ಬೇರೆಬೇರೆ ರಾಜ್ಯಗಳಲ್ಲಿ ದಾಖಲಾಗಿರುವ ಎಫ್​ಐಆರ್​ಗಳನ್ನೆಲ್ಲ ಕ್ಲಬ್​ (ಒಂದಾಗಿಸು) ಮಾಡಬೇಕು ಮತ್ತು ಅದನ್ನ ದೆಹಲಿಗೆ ವರ್ಗಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ. ಹಾಗೇ, ಈ ಎಫ್​ಐಆರ್​ಗಳ ವಿಚಾರಣೆಯಿಂದ ಮಧ್ಯಂತರ ತಡೆ ನೀಡಬೇಕು ಎಂದೂ ಕೇಳಿಕೊಂಡಿದ್ದಾರೆ. ಇನ್ನು ಬಾಬಾ ರಾಮ್​ದೇವ್​ ವಿರುದ್ಧ ಸೆಕ್ಷನ್​ 188, 504, 269 ಇತ್ಯಾದಿ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

Exit mobile version