ಕೊಂಕಣ ರೈಲ್ವೆ ತಾಂತ್ರಿಕ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು, ಮಾ. 17: ಜಮ್ಮು ಕಾಶ್ಮೀರದಲ್ಲಿ ಆರಂಭಿಸುತ್ತಿರುವ ಉದಯ್ ಪುರ ಶ್ರೀನಗರ ಬಾರಾಮುಲ್ಲ ರೈಲ್ವೇ (ಯುಎಸ್‌ಬಿಆರ್‌ಎಲ್) ಯೋಜನೆಯನ್ನು ಕೊಂಕಣ ರೈಲ್ವೆ ನಿರ್ವಹಿಸುತ್ತದೆ. ರೈಲ್ವೆ ಕಾರ್ಪೋರೇಷನ್ ಲಿಮಿಟೆಡ್‍ನಲ್ಲಿ (ಕೆಆರ್‍ಸಿಎಲ್) ಖಾಲಿ ಇರುವ 18 ಜೂನಿಯರ್ ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದ್ದು, ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಆಯ್ಕೆಯಾದ ಅಭ್ಯರ್ಥಿಗಳು ಜಮ್ಮು- ಕಾಶ್ಮೀರದಲ್ಲಿ ಕಾರ್ಯನಿರ್ವಹಿಸಲು ಸಿದ್ಧರಿರಬೇಕು. ಆರಂಭದಲ್ಲಿ 2 ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುವುದು. ನಂತರ ಅಭ್ಯರ್ಥಿಗಳ ಕಾರ್ಯಕ್ಷಮತೆ ಆಧರಿಸಿ ಅವಧಿಯನ್ನು ವಿಸ್ತರಿಸಲಾಗುವುದು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಐಸಿಟಿಇಯಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಕಾಲೇಜಿನಿಂದ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಿಕಲ್ ಆಯಂಡ್ ಎಲೆಕ್ಟ್ರಾನಿಕ್ಸ್/ ಎಲೆಕ್ಟ್ರಾನಿಕ್ಸ್ ಆಯಂಡ್ ಟೆಲಿ ಕಮ್ಯುನಿಕೇಷನ್/ ಕಮ್ಯುನಿಕೇಷನ್/ ಇನ್‍ಸ್ಟ್ರುಮೆಂಟೇಷನ್‍ನಲ್ಲಿ ಬಿಇ/ ಬಿ.ಟೆಕ್ ಪದವಿಯಲ್ಲಿ ಕನಿಷ್ಠ ಶೇ.60 ಅಂಕ ಪಡೆದಿರಬೇಕು.

ವಯೋಮಿತಿ: 1.2.2021ಕ್ಕೆ ಅನ್ವಯವಾಗುವಂತೆ ಗರಿಷ್ಠ 25 ವರ್ಷ. ಮೀಸಲಾತಿ ಅಭ್ಯರ್ಥಿಗಳಿಗೆ ಸರ್ಕಾರದ ನಿಯಮದನ್ವಯ ವಯೋಸಡಿಲಿಕೆ ಇದೆ.

ಮೊದಲ ವರ್ಷದ ಮಾಸಿಕ ಸಂಬಳ 30,000 ರೂ. ಇದ್ದು, 2ನೇ ವರ್ಷಕ್ಕೆ ಶೇ.10 ವೇತನ ಹೆಚ್ಚಳವಾಗಲಿದೆ.

ಸಂದರ್ಶನಕ್ಕೆ ಹಾಜರಾಗುವ ಅಭ್ಯರ್ಥಿಗಳು ಅಧಿಸೂಚನೆ ಜತೆ ನೀಡಲಾಗಿರುವ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ತರತಕ್ಕದ್ದು ಅಲ್ಲದೇ ಶೈಕ್ಷಣಿಕ, ವಯಸ್ಸು, ಜಾತಿ ಪ್ರಮಾಣಪತ್ರ ಸೇರಿ ಎಲ್ಲ ದಾಖಲೆಗಳ ಮೂಲ ಪ್ರತಿಯನ್ನು ತರಬೇಕು. ಹಾಗೂ ಅರ್ಜಿ ಜತೆ ದಾಖಲೆಗಳ ಪ್ರತಿಯನ್ನು ಸೇರಿಸಿರಬೇಕು. ಸಂದರ್ಶನಕ್ಕೆ ಬರುವ ಅಭ್ಯರ್ಥಿಗಳು 2-3 ದಿನ ಅಲ್ಲೇ ಉಳಿಯಲು ವ್ಯವಸ್ಥೆ ಮಾಡಿಕೊಂಡು ಬರಬೇಕು ಹಾಗೂ ಕರೊನಾ ಮುನ್ನೆಚ್ಚರಿಕಾ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಲಾಗಿದೆ.

Exit mobile version