ಗ್ರಾಹಕರೇ, ನಿಮ್ಮ ಹಕ್ಕುಗಳ ಬಗ್ಗೆ ಅರಿತುಕೊಳ್ಳುವುದು ತುಂಬಾ ಮುಖ್ಯ..

ಇಂದು ವಿಶ್ವ ಗ್ರಾಹಕ ದಿನ. ಗ್ರಾಹಕರ ಹಕ್ಕುಗಳನ್ನು ಎತ್ತಿ ಹಿಡಿಯುವ ದಿನವೆಂದು ಪರಿಗಣಿಸಲಾಗುತ್ತದೆ. ಜಾಗತಿಕವಾಗಿ ಗ್ರಾಹಕರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸಲು ವಿವಿಧ ಸಂಘಟನೆಗಳು ಗ್ರಾಹಕ ದಿನವನ್ನು ಆಚರಿಸುತ್ತಿವೆ. ಪ್ರತಿಯೊಬ್ಬ ಗ್ರಾಹಕರಿಗೂ ಅವರದೇ ಆದ ಮೂಲಭೂತ ಹಕ್ಕುಗಳಿರುತ್ತವೆ. ಅವುಗಳನ್ನು ಪಡೆಯುವುದರಿಂದ ಯಾವುದೇ ಗ್ರಾಹಕನೂ ವಂಚಿತನಾಗಬಾರದು ಎಂಬುದೇ ವಿಶ್ವ ಗ್ರಾಹಕ ದಿನ ಆಚರಣೆಯ ಉದ್ದೇಶ. ಅಂದಹಾಗೆ ಭಾರತದಲ್ಲಿ ಮಾತ್ರ ಡಿಸೆಂಬರ್ 24ರಂದು ಗ್ರಾಹಕ ದಿನವನ್ನು ಆಚರಿಸಲಾಗುತ್ತದೆ.

ಅಮೆರಿಕದ ಮಾಜಿ ಅಧ್ಯಕ್ಷ ಜಾನ್‌ ಎಫ್‌ ಕೆನಡಿ. 1962ರ ಮಾರ್ಚ್‌ 15ರಂದು ಅಮೆರಿಕ ಕಾಂಗ್ರೆಸ್‌ ಅನ್ನು ಉದ್ದೇಶಿಸಿ ಮಾತನಾಡುವಾಗ ಗ್ರಾಹಕ ಹಕ್ಕುಗಳು ಎಂದರೇನು ಎಂಬ ವ್ಯಾಖ್ಯಾನವನ್ನು ನೀಡಿದರು ಹಾಗೂ ಗ್ರಾಹಕರ ಹಕ್ಕುಗಳನ್ನೊಳಗೊಂಡ ವಿಧೇಯಕವನ್ನು ಮಂಡಿಸಿದರು. ಹಾಗಾಗಿ ಮಾರ್ಚ್‌ 15 ವಿಶ್ವ ಗ್ರಾಹಕ ಹಕ್ಕುಗಳ ದಿನವನ್ನಾಗಿ ಆಚರಿಸಲಾಗುತ್ತಿದೆ. ಪ್ರಥಮ ವಿಶ್ವಗ್ರಾಹಕ ಹಕ್ಕು ದಿನವನ್ನು 15ನೇ ಮಾರ್ಚ್‌ 1983ರಲ್ಲಿ ಆಚರಿಸಲಾಯಿತು.

ಹಣವನ್ನು ಕೊಟ್ಟು ಸರಕು ಅಥವಾ ಸೇವೆಗಳನ್ನು ಸ್ವಂತ ಅಥವಾ ಅನ್ಯರ ಉಪಯೋಗಕ್ಕಾಗಿ ಖರೀದಿಸುವವನನ್ನು ಗ್ರಾಹಕ ಎಂದು ಕರೆಯುತ್ತಾರೆ. ಆಧುನಿಕ ಮಾರುಕಟ್ಟೆ ಸಿದ್ಧಾಂತವು ಗ್ರಾಹಕನನ್ನು ಮಾರುಕಟ್ಟೆಯ ‘ರಾಜ’ನೆಂದು ಪರಿಗಣಿಸಿದೆ. ಮಾರುಕಟ್ಟೆಯ ಎಲ್ಲಾ ಕಾರ್ಯಚಟುವಟಿಕೆಗಳು ಗ್ರಾಹಕನ ಅವಶ್ಯಕತೆಗಳು ಮತ್ತು ಅಭಿಲಾಷೆಗಳನ್ನು ತೃಪ್ತಿಪಡಿಸುವ ಉದ್ದೇಶವನ್ನು ಹೊಂದಿದೆ. ಆದರೆ, ವ್ಯವಹಾರ ಸಂಘಟನೆಗಳು ಹೆಚ್ಚುತ್ತಿರುವ ಪೈಪೋಟಿ, ಮಾರಾಟದ ಪ್ರಮಾಣವನ್ನು ಹೆಚ್ಚಿಸಿಕೊಳ್ಳುವ ಹಾಗೂ ಮಾರುಕಟ್ಟೆಯಲ್ಲಿ ತಮ್ಮ ಪಾಲನ್ನು ವೃದ್ಧಿಸಿಕೊಳ್ಳುವ ಉದ್ದೇಶದಿಂದ ಅನುಚಿತ ವ್ಯಾಪಾರ ಪದ್ಧತಿಗಳಾದ ಕಲಬೆರಕೆ, ಕಾಳಸಂತೆ ವ್ಯಾಪಾರ, ತಪ್ಪು ಮಾಹಿತಿ ನೀಡುವ ಜಾಹಿರಾತು ಮುಂತಾದವುಗಳಿಂದ ಗ್ರಾಹಕರನ್ನು ವಂಚಿಸುತ್ತಿದ್ದು, ಅವನ ರಕ್ಷ ಣೆ ಅತ್ಯಗತ್ಯವಾಗಿದೆ. ಗುಣಮಟ್ಟದ ವಸ್ತುವನ್ನು ನ್ಯಾಯಯುತ ಬೆಲೆಗೆ ಪಡೆದುಕೊಳ್ಳುವ ಎಲ್ಲಾ ಹಕ್ಕು ಗ್ರಾಹಕನಿಗಿದೆ. ವಸ್ತುವಿನ ಗುಣಮಟ್ಟದಲ್ಲಿ ಏನಾದರೂ ವ್ಯತ್ಯಯವಾದರೆ ಅದನ್ನು ಪ್ರಶ್ನಿಸುವ ಹಕ್ಕೂ ಆತನಿಗೆ ಇದೆ.

ಹಾಗಾದರೆ ಗ್ರಾಹಕನ ಹಕ್ಕುಗಳು ಯಾವುವು? :

1). ಸುರಕ್ಷತೆಯ ಹಕ್ಕು
2). ಮಾಹಿತಿ ಪಡೆಯುವ ಹಕ್ಕು
3). ಆಯ್ಕೆಯ ಹಕ್ಕು ಮತ್ತು ಆಲಿಸುವ ಹಕ್ಕು
4). ಕುಂದುಕೊರತೆಗಳನ್ನು ಪರಿಹರಿಸುವ ಹಕ್ಕು
5). ಗ್ರಾಹಕರ ಶಿಕ್ಷಣದ ಹಕ್ಕು

ಬೆಂಗಳೂರು, ಮೈಸೂರು ಸೇರಿದಂತೆ ಬೃಹತ್ ನಗರಗಳಲ್ಲಿ ಗ್ರಾಹಕ ರಕ್ಷಣಾ ಒಕ್ಕೂಟಗಳು ಸಕ್ರಿಯವಾಗಿದ್ದು, ಗ್ರಾಹಕ ಹಕ್ಕುಗಳಲ್ಲಿ ಯಾವುದೇ ಕುಂದುಕೊರತೆ ಬಂದಲ್ಲಿ ಜಿಲ್ಲಾ ವ್ಯಾಪ್ತಿಗಳಲ್ಲೂ ಗ್ರಾಹಕರ ಹಿತ ರಕ್ಷಣಾ ವೇದಿಕೆಗಳಿರುತ್ತವೆ. ಇವು ಗ್ರಾಹಕ ರಕ್ಷಣಾ ಒಕ್ಕೂಟಗಳು ಗ್ರಾಹಕರ ಹಿತ ರಕ್ಷಣೆ ಕಾಪಾಡುವ ಹೊಣೆ ಹೊತ್ತಿರುತ್ತವೆ. ಯಾವುದೇ ಒಬ್ಬ ಗ್ರಾಹಕ ಮೋಸ ಹೋಗದಂತೆ ತಡೆಯಲು, ಆತ ಕೊಂಡುಕೊಳ್ಳುವ ವಸ್ತುಗಳ ಬೆಲೆಗೆ ತಕ್ಕನಾಗಿರುವಂತೆ ವಸ್ತು ಅಥವಾ ಸೇವೆಗಳು ದೊರೆಯುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಗ್ರಾಹಕ ಹಕ್ಕುಗಳ ಹಿತ ರಕ್ಷಣಾ ವೇದಿಕೆ ಹೊಂದಿರುತ್ತದೆ. ಯಾವುದೇ ಗ್ರಾಹಕ ತಾನು ಕೊಂಡ ವಸ್ತುವಿನಲ್ಲಿ ದೋಷ ಕಂಡುಬಂದಲ್ಲಿ ಗ್ರಾಹಕ ರಕ್ಷಣಾ ಸಮಿತಿಯ ಮೊರೆ ಹೋಗಬಹುದು.ಜಿಲ್ಲಾ ವೇದಿಕೆಯನ್ನು ಜಿಲ್ಲೆಯಲ್ಲಿ ಗ್ರಾಹಕರ ಹಿತರಕ್ಷಣಾ ಕಾಯ್ದೆ 1989 ರ ಅನ್ವಯ ಸ್ಥಾಪಿಸಲಾಗಿದೆ. ಮತ್ತು ರಾಜ್ಯ ಸರ್ಕಾರ ಇಚ್ಚಿಸಿದಲ್ಲಿ ಹೆಚ್ಚುವರಿ ಜಿಲ್ಲಾ ವೇದಿಕೆಗಳನ್ನು ಪ್ರತಿ ಜಿಲ್ಲೆಯಲ್ಲಿ ಸ್ಥಾಪಿಸಬಹುದಾಗಿದೆ.

ಗ್ರಾಹಕ ಸೇವೆಗಳನ್ನು ಎಲ್ಲಾ ಪ್ರಾದೇಶಿಕ ಭಾಷೆಗಳಲ್ಲೂ ನೀಡಬೇಕು ಎಂಬ ಕೂಗು ಇತ್ತೀಚಿಗೆ ಪ್ರಬಲವಾಗುತ್ತದೆ. ಗ್ರಾಹಕರು ತಮ್ಮ ಮಾತೃಭಾಷೆಗಳಲ್ಲಿ ಗ್ರಾಹಕ ಸೇವೆ ಪಡೆಯಬೇಕು. ಯಾವುದೇ ಗ್ರಾಹಕರೂ ಈ ಸೇವೆಗಳಿಂದ ವಂಚಿತನಾಗಬಾರದು ಎಂಬುದೇ ಈ ಬೇಡಿಕೆಯ ಉದ್ದೇಶವಾಗಿದೆ. ಈ ಕುರಿತು ಸಾಮಾಜಿಕ ಮಾಧ್ಯಮಗಳಲ್ಲಿ ಚರ್ಚೆ ನಡೆಯುತ್ತಲೇ ಇವೆ. ಆದರೆ ಇತ್ತೀಚಿನ ಹೈ-ಫೈ ಸಿಟಿಗಳಲ್ಲಿ ಪ್ರಾದೇಶಿಕ ಭಾಷೆಗಿಂತ ಇತರ ಭಾಷೆಯೇ ರಾರಾಜಿಸುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.

Exit mobile version