Ayodhya: ರಾಮನೂರು ಅಯೋಧ್ಯೆಯಲ್ಲಿ (Ayodhya) ರಾಮಮಂದಿರ ಉದ್ಘಾಟನೆ ಸಮಾರಂಭಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ. ಜ.22 ರಂದು ಭವ್ಯವಾದ ರಾಮಮಂದಿರ ಉದ್ಘಾಟನೆಯಾಗಲಿದೆ. ಪುಣ್ಯ ಕಾರ್ಯಕ್ಕೆ ಕೋಟ್ಯಾಂತರ ರಾಮಭಕ್ತರು ಕೊಡುಗೈ ದಾನಿಗಳಾಗಿದ್ದಾರೆ. ಇಲ್ಲಿಯವರೆಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಮಂದಿರಕ್ಕಾಗಿ 5,500 ಕೋಟಿ ರೂಪಾಯಿ ದೇಣಿಗೆ ಪಡೆದಿದೆ.
ಇನ್ನು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ (Trust) ನೀಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಮಂದಿರಕ್ಕಾಗಿ 5,500 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ. ಅದರಲ್ಲಿ ಗುಜರಾತಿಗಳೇ ಅತಿಹೆಚ್ಚಿನ ದೇಣಿಗೆ ನೀಡಿದ್ದಾರೆ. ಇನ್ನೊಂದೆಡೆ ಗುಜರಾತ್ನ ಇಬ್ಬರು ವ್ಯಕ್ತಿಗಳು ಕೂಡಾ ಮಂದಿನ ನಿರ್ಮಾಣಕ್ಕೆ ಗರಿಷ್ಠ ದೇಣಿಗೆಯನ್ನೂ ನೀಡಿದ್ದಾರೆ.
ರಾಮಮಂದಿರಕ್ಕೆ (Rama Mandir) ಅತಿ ಹೆಚ್ಚು ದೇಣಿಗೆ ನೀಡಿದವರಲ್ಲಿ ಮೊದಲ ಸ್ಥಾನದಲ್ಲಿರುವುದು ಆಧ್ಯಾತ್ಮಿಕ ಗುರು ಮೊರಾರಿ ಬಾಪು ಅವರು. ಗುಜರಾತ್ ಮೂಲದ ಮೊರಾರಿ ಬಾಪು ಅವರು ರಾಮಮಂದಿರಕ್ಕಾಗಿ 11.3 ಕೋಟಿ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ. ಇನ್ನು ಮೊರಾರಿ ಬಾಪು ಅವರಿಂದ ಸ್ಫೂರ್ತಿ ಪಡೆದ ಅವರ ಅನುಯಾಯಿಗಳು ಅಮೆರಿಕ, ಕೆನಡಾ ಮತ್ತು ಬ್ರಿಟನ್ನಿಂದ (Britain) ಒಟ್ಟು 8 ಕೋಟಿ ರೂಪಾಯಿ ದೇಣಿಗೆ ಕೊಟ್ಟಿದ್ದಾರೆ.
ಮೊರಾರಿ ಬಾಪು ಮೊದಲ ಸ್ಥಾನದಲ್ಲಿದ್ದರೆ, ನಂತರದ ಸ್ಥಾನದಲ್ಲಿ ಅತಿ ಹೆಚ್ಚು ದೇಣಿಗೆ ನೀಡಿದವರು ಗುಜರಾತ್ನ (Gujarat) ವಜ್ರದ ಉದ್ಯಮಿ ಗೋವಿಂದಭಾಯ್ ಧೋಲಾಕಿಯಾ. ಇವರು 11 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಗೋವಿಂದಭಾಯಿ ಧೋಲಾಕಿಯಾ ವಜ್ರ ಕಂಪನಿ ಶ್ರೀರಾಮಕೃಷ್ಣ ಎಕ್ಸ್ಪೋರ್ಟ್ಸ್ನ (Sri Ramakrishna Exports) ಮಾಲೀಕರಾಗಿದ್ದಾರೆ. ರಾಮಭಕ್ತರಾಗಿರುವ ಇವರು ಸಾಕಷ್ಟು ದಾನಗಳನ್ನು ಮಾಡಿದ್ದಾರೆ.
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ದೇಶದ 11 ಕೋಟಿ ಜನರಿಂದ 900 ಕೋಟಿ ರೂಪಾಯಿ ದೇಣಿಗೆ ಸಂಗ್ರಹಿಸುವ ಉದ್ದೇಶ ಹೊಂದಿತ್ತು. ಆದರೆ ಇಲ್ಲಿಯವರೆಗೆ 5,500 ಕೋಟಿ ರೂಪಾಯಿ ದೇಣಿಗೆ ಸಂಗ್ರಹವಾಗಿದೆ. ವಿಶ್ವದಾದ್ಯಂತ ಇರುವ ಸುಮಾರು 18 ಕೋಟಿ ರಾಮಭಕ್ತರು ನ್ಯಾಷನಲ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ನ್ಯಾಷನಲ್ ಬ್ಯಾಂಕ್ ಮತ್ತು ಬ್ಯಾಂಕ್ ಆಫ್ ಬರೋಡಾ (Bank of Baroda) ನಲ್ಲಿ 3,200 ಕೋಟಿ ರೂಪಾಯಿಗಳ ಸಮರ್ಪಣಾ ನಿಧಿಯನ್ನು ಜಮಾ ಮಾಡಿದ್ದಾರೆ. ಈ ದೇಣಿಗೆ ಹಣವನ್ನು ಎಫ್ಡಿ ಮಾಡಲಾಗಿದೆ. ಎಫ್ಡಿಯಿಂದ ಪಡೆದ ಬಡ್ಡಿಯಿಂದಲೇ ರಾಮಮಂದಿರದ ಪ್ರಸ್ತುತ ರೂಪವನ್ನು ನಿರ್ಮಿಸಲಾಗಿದೆ.