ದೇಶಾದ್ಯಂತ ಡಿಜಿಟಲೀಕರಣ ವಾಗುತ್ತಿರುವ ಹಿನ್ನೆಲೆಯಲ್ಲಿ ಭಿಕ್ಷುಕರೂ ಕೂಡ ಡಿಜಿಟಲಿಕರಣದತ್ತ ವಾಲಿದ್ದು, ಭಿಕ್ಷುಕರ ಕೈಯಲ್ಲೂ ಕ್ಯೂ ಆರ್ ಕೋಡ್ ಬಂದಿದೆ. ಇಂತಹ ಒಬ್ಬ ಡಿಜಿಟಲ್ ಭಿಕ್ಷುಕ ಬಿಹಾರದಲ್ಲಿ ಕಾಣಿಸಿಕೊಂಡಿದ್ದು,ಈ ಡಿಜಿಟಲ್ ಭಿಕ್ಷುಕನ ಹೆಸರು ರಾಜು. ಬಿಹಾರದ ಬೆಟ್ಟಿಯಾ ರೈಲ್ವೆ ನಿಲ್ದಾಣದಲ್ಲಿ ಭಿಕ್ಷಾಟನೆ ಮಾಡುತ್ತಿರುತ್ತಾನೆ. ಕೊರಳಿನಲ್ಲಿ ಕ್ಯೂಆರ್ ಕೋಡ್ ಫಲಕ ಮತ್ತು ಟ್ಯಾಬ್ ಹಿಡಿದುಕೊಂಡು ಭಿಕ್ಷಾಟನೆ ಮಾಡುತ್ತಿದ್ದಾನೆ.
ಭಿಕ್ಷೆ ಬೇಡುವುದು ಮಾತ್ರವಲ್ಲದೆ, ಲಾಲು ಪ್ರಸಾದ್ ಯಾದವ್ ಅವರನ್ನು ರಾಜು ಅನುಕರಣೆ ಕೂಡ ಮಾಡುತ್ತಿದ್ದರಂತೆ. ಲಾಲು ಅವರ ಕಾರ್ಯಕ್ರಮಗಳು ಎಲ್ಲೇ ನಡೆದರೂ ರಾಜು ಅಲ್ಲಿ ಹಾಜರಾಗುತ್ತಿದ್ದರಂತೆ. ಈ ವಿಷಯ ತಿಳಿದ ಲಾಲು ಪ್ರಸಾದ್ ಯಾದವ್ ಅವರು ಎರಡು ಹೊತ್ತಿನ ಊಟಕ್ಕೆ ರೈಲ್ವೆ ಕ್ಯಾಂಟೀನ್ನಲ್ಲಿ ಪಾಸ್ ಮಾಡಿಸಿಕೊಟ್ಟಿದ್ದರು ಎಂದು ಡಿಜಿಟಲ್ ಭಿಕ್ಷುಕ ರಾಜು ತಿಳಿಸಿದ್ದಾರೆ.
ಡಿಜಿಟಲ್ ಭಿಕ್ಷುಕನಾದ ಕಥೆ : ರಾಜು ಸುಮಾರು 30 ವರ್ಷಗಳಿಂದ ಭಿಕ್ಷಾಟನೆ ಮಾಡುತ್ತಿದ್ದು ಇತ್ತೀಚಿನ ದಿನಗಳಲ್ಲಿ ಜನರು ‘ಚಿಲ್ಲರೆ ಇಲ್ಲ’ ಎಂದು ಹೇಳಿ ಕಳುಹಿಸುತ್ತಿದ್ದರು. ಇದರಿಂದ ಹಣ ಸಿಗದೇ ತೊಂದರೆಗೀಡಾದ ರಾಜುವಿಗೆ ಡಿಜಿಟಲ್ ಮೊರೆಹೋಗಿದ್ದಾರೆ.
ಬಿಹಾರದ ಬೆಟ್ಟಿಯಾದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಆರಂಭಿಸಲು ಹೋದ ರಾಜುವಿಗೆ ಬ್ಯಾಂಕ್ ಸಿಬ್ಬಂದಿ ಆಧಾರ್, ಪ್ಯಾನ್ ಕಾರ್ಡ್ ಕೇಳಿದ್ದಾರೆ. ಆಧಾರ್ ಹೊಂದಿದ್ದ ರಾಜು 6 ತಿಂಗಳ ಬಳಿಕ ಪ್ಯಾನ್ ಕಾರ್ಡ್ ಮಾಡಿಸಿಕೊಂಡು ಬ್ಯಾಂಕ್ ಖಾತೆ ಪಡೆದುಕೊಂಡಿದ್ದಾರೆ. ಅಲ್ಲದೇ, ಇ-ವ್ಯಾಲೆಟ್(ಕ್ಯೂಆರ್ ಕೋಡ್) ಅನ್ನೂ ಇದೇ ಶಾಖೆಯಿಂದಲೇ ಪಡೆದಿದ್ದಾರೆ.
ಬಳಿಕ ಬೆಟ್ಟಿಯಾ ರೈಲ್ವೆ ನಿಲ್ದಾಣ ಸೇರಿ ಹಲವೆಡೆ ಭಿಕ್ಷಾಟನೆ ಮಾಡುವಾಗ ಯಾರಾದರೂ ಚಿಲ್ಲರೆ ಹಣ ಇಲ್ಲ ಎಂದರೆ ತಮ್ಮಲ್ಲಿರುವ ಕ್ಯೂ ಆರ್ ಕೋಡ್ ಸ್ಕ್ಯಾನ್ ಮಾಡಿ ಹಣವನ್ನು ತಮ್ಮ ಖಾತೆಗೆ ವರ್ಗಾಯಿಸಲು ಕೇಳಿಕೊಳ್ಳುತ್ತಾರಂತೆ. ಮೊದಲಿಗಿಂತಲೂ ‘ಡಿಜಿಟಲ್ ಭಿಕ್ಷೆ’ಯಿಂದಲೇ ಗಳಿಕೆ ಹೆಚ್ಚಿದೆ ಎಂದು ರಾಜು ತಿಳಿಸಿದ್ದಾರೆ.
ಡಿಜಿಟಲ್ ಭಿಕ್ಷುಕ ರಾಜು ಪ್ರಧಾನಿ ನರೇಂದ್ರ ಮೋದಿ, ಬಿಹಾರದ ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ಅವರ ಅಭಿಮಾನಿಯಾಗಿದ್ದಾರೆ. ಕೇಂದ್ರ ಸರ್ಕಾರ ಡಿಜಿಟಲ್ ಇಂಡಿಯಾ ಘೋಷಿಸಿದ ಬಳಿಕ ಎಲ್ಲರಿಗೂ ಬ್ಯಾಂಕ್ ಖಾತೆ ಸಿಕ್ಕಿದ್ದರಿಂದ ನಾನು ಈ ರೀತಿ ಭಿಕ್ಷೆ ಬೇಡಲು ಸಹಾಯವಾಯಿತು ಎಂದು ರಾಜು ಹೇಳಿಕೊಂಡಿದ್ದಾರೆ.