ನ್ಯಾಷನಲ್ ಹೆರಾಲ್ಡ್ ಪ್ರಕರಣ : ಕಾಂಗ್ರೆಸ್ ಪ್ರತಿಭಟನೆಯನ್ನುಖಂಡಿಸಿದ ಬಿಜೆಪಿ!

Congress

ನ್ಯಾಷನಲ್ ಹೆರಾಲ್ಡ್(National Herald Case) ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ(Congress Leader) ರಾಹುಲ್ ಗಾಂಧಿ(Rahul Gandhi) ಅವರನ್ನು ಜಾರಿ ನಿರ್ದೇಶನಾಲಯದ(ED) ಅಧಿಕಾರಿಗಳು ದೆಹಲಿ ಕಚೇರಿಯಲ್ಲಿ ವಿಚಾರಣೆಗೆ ಒಳಪಡಿಸಿದ್ದು, ಇದನ್ನು ಖಂಡಿಸಿ ದೇಶಾದ್ಯಂತ ಕಾಂಗ್ರೆಸ್ ನಾಯಕರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಾಂಗ್ರೆಸ್ ಪ್ರತಿಭಟನೆಯನ್ನು ಬಿಜೆಪಿ(BJP) ಖಾರವಾಗಿ ಖಂಡಿಸಿದೆ. ಈ ಮೂಲಕ ಇದೀಗ ರಾಜಕೀಯ ಮೇಲಾಟ ಶುರುವಾಗಿದೆ.

ಭಾರತದ ರಾಜಕೀಯದಲ್ಲಿ ಜಾಮೀನಿನ ಮೇಲಿರುವ ಆರೋಪಿಯೊರ್ವನಿಗೆ ತನಿಖಾಧಿಕಾರಿಗಳು ವಿಚಾರಣೆಗಾಗಿ ಸಮನ್ಸ್(Summons) ನೀಡುವುದು ಕೂಡಾ ಪ್ರತಿಭಟನೆಯ ವಿಷಯವಾಗುತ್ತದೆ. ವಿಚಾರಣೆಯ ನೆಪದಲ್ಲಿ ನೀಡುವ ಕಿರುಕುಳದ ವಿರುದ್ದ ಪ್ರತಿಭಟಿಸಬಹುದು. ಆದರೆ ವಿಚಾರಣೆ ವಿರುದ್ದವೇ ಪ್ರತಿಭಟನೆ ಮಾಡುವುದು ‘ನ್ಯಾಯ’ದ ವಿರುದ್ದದ ಪ್ರತಿಭಟನೆಯಾಗುತ್ತದೆ. ರಾಜಕೀಯ ದ್ವೇಷದಿಂದ ಬಿಜೆಪಿ ಸರ್ಕಾರ(BJP Government) ಈ ರೀತಿಯಾಗಿ ನಮ್ಮ ನಾಯಕರ ಮೇಲೆ ಸುಳ್ಳು ಪ್ರಕರಣಗಳನ್ನು ದಾಖಲಿಸಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದೆ.

ಅದರಲ್ಲಿ ಸತ್ಯವಿರಬಹುದು. ಆದರೆ ಆ ಸತ್ಯವನ್ನು ಕಂಡುಕೊಳ್ಳಲು ವಿಚಾರಣೆ ಅಗತ್ಯವಲ್ಲವೇ..? ಭಾರತದ ನ್ಯಾಯಾಂಗ ವ್ಯವಸ್ಥೆ ಸದೃಡವಾಗಿದ್ದು ಅಂತಿಮವಾಗಿ ಸತ್ಯಕ್ಕೆ ಜಯವಾಗುತ್ತದೆ. ಈ ಹಿಂದೆ ನರೇಂದ್ರ ಮೋದಿ(Narendra Modi) ಮತ್ತು ಅಮಿತ್ ಶಾ(Amit Shah) ಮೇಲೂ ಗಂಭೀರ ಆರೋಪಗಳಿದ್ದವು. ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರನ್ನು ಹಲವಾರು ಗಂಟೆಗಳ ಕಾಲ ವಿಚಾರಣೆ ನಡೆಸಲಾಗಿತ್ತು. ಆದರೆ ದಶಕಗಳ ಕಾನೂನು ಹೋರಾಟದ ನಂತರ ಅವರಿಬ್ಬರೂ ನ್ಯಾಯಾಂಗದ ಮೂಲಕವೇ ಆರೋಪದಿಂದ ಮುಕ್ತರಾದರು.

ಇದೀಗ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ(Sonia Gandhi) ಅವರು ಕೂಡಾ ಕಾನೂನು ಹೋರಾಟ ನಡೆಸಿ, ಆರೋಪದಿಂದ ಮುಕ್ತರಾಗಬೇಕಿದೆ. ಅವರಿಬ್ಬರ ಕಾನೂನು ಹೋರಾಟಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲವಾಗಿ ನಿಲ್ಲಲಿ, ಅದು ಅವರ ಹಕ್ಕು. ಆದರೆ ರಸ್ತೆಗಿಳಿದು ಪ್ರತಿಭಟನೆ ನಡೆಸುವುದು ಬೇಡ. ರಾಜಕೀಯ ದ್ವೇಷದಿಂದ ಬಿಜೆಪಿ ಸರ್ಕಾರ ಕಾಂಗ್ರೆಸ್ ನಾಯಕರ ಮೇಲೆ ಕಾನೂನಿನ ಅಸ್ತ್ರ ಪ್ರಯೋಗಿಸಿದ್ದರೆ, ಕಾಂಗ್ರೆಸ್ ತನ್ನ ಉತ್ತರವನ್ನು ಕಾನೂನಿನ ಮೂಲಕವೇ ನೀಡಬೇಕಿದೆ.

ಕಾಂಗ್ರೆಸ್ ದೇಶಾದ್ಯಂತ ನಡೆಸುತ್ತಿರುವ ಪ್ರತಿಭಟನೆ ಅವರ ನಾಯಕರಿಗೆ ನೈತಿಕ ಬೆಂಬಲವಾಗಲಿ. ಆದರೆ ಸಾರ್ವಜನಿಕರಿಗೆ ತೊಂದರೆಯಾಗದಿರಲಿ.

Exit mobile version