New Delhi: ಲೋಕಸಭಾ ಚುನಾವಣೆಯ ಹೊಸ್ತಿಲಲ್ಲಿ ತಮಿಳುನಾಡಿನಿಂದ (Tamilnadu) ವೀರಪ್ಪನ್ ಪುತ್ರಿ ವಿದ್ಯಾರಾಣಿಗೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ತಮಿಳುನಾಡು ಮತ್ತು ಪುದುಚೇರಿಯ 39 ಕ್ಷೇತ್ರಗಳ ಪೈಕಿ ಯಾವುದಾದರೂ ಒಂದು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ನೀಡುವ ಸಂಭವವಿದೆ ಎನ್ನಲಾಗುತ್ತಿದೆ.
ಇನ್ನು 2021ರಲ್ಲಿ ತಮಿಳುನಾಡು ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ವಿದ್ಯಾರಾಣಿಗೆ (Vidyarani) ಅವಕಾಶವಿದ್ದರೂ, ಅದನ್ನು ಒಪ್ಪಿಕೊಳ್ಳದ ವಿದ್ಯಾರಾಣಿ, ಈಗ ಸಾರ್ವತ್ರಿಕ ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಯಾವ ಕ್ಷೇತ್ರದಿಂದ ಇವರಿಗೆ ಟಿಕೆಟ್ ಸಿಗುತ್ತೆ ಅಥವಾ ಟಿಕೆಟ್ ನೀಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಅಂತಿಮ ನಿರ್ಧಾರ ತೆಗೆದುಕೊಂಡಿದೆಯೋ, ಜೊತೆಗೆ, ಚುನಾವಣೆ ಸ್ಪರ್ಧೆಯ ವಿಚಾರ ಊಹಾಪೋಹವೋ ಎನ್ನುವುದರ ಬಗ್ಗೆ ಸ್ಪಷ್ಟತೆಯಿಲ್ಲ.
ಕ್ರಿಮಿನಲ್ (Criminal) ಹಿನ್ನಲೆ ಹೊಂದಿರುವ ಕುಟುಂಬದಿಂದ ಬಂದವರಾಗಿದ್ದರೂ, ತನ್ನ ಜೀವನವನ್ನು ಕಷ್ಟ ಪಟ್ಟು ರೂಪಿಸಿಕೊಂಡಿರುವ ವಿದ್ಯಾರಾಣಿಗೆ ಬಿಜೆಪಿ ಟಿಕೆಟ್ ನೀಡುವ ಸಾಧ್ಯತೆಯಿದೆ ಎಂದು ಕೆಲವು ಮಾಧ್ಯಮಗಳು ಈಗಾಗಲೇ ವರದಿ ಮಾಡಿವೆ. ಕಾಡುಗಳ್ಳ ವೀರಪ್ಪನ್ (Veerappan) ನನ್ನು ಹೊಡೆದುರುಳಿಸಿದ ನಂತರ ಸಮಾಜದಲ್ಲಿ ಎದುರಾದ ಅವಮಾನವನ್ನು ಮೆಟ್ಟಿನಿಂತು ವಕೀಲ ವೃತ್ತಿಯಲ್ಲಿ ಪದವೀಧರರಾಗಿರುವ ವಿದ್ಯಾರಾಣಿಯನ್ನು ಬಿಜೆಪಿ (BJP), ತಮಿಳುನಾಡು ಘಟಕದ ಹಿಂದುಳಿದ ವರ್ಗದ ಉಪಾಧ್ಯಕ್ಷರನ್ನಾಗಿ ನೇಮಿಸಿತ್ತು.ಇದೀಗ ತಮಗೆ ಬಿಜೆಪಿ ಟಿಕೆಟ್ ಸಿಗುವ ಆಶಾಭಾವನೆಯಲ್ಲಿದ್ದಾರೆ.
ಈಗಾಗಲೇ ತಮಿಳುನಾಡಿನಲ್ಲಿ ಇಂಡಿಯಾ, ಎನ್ಡಿಎ (I.N.D.I.A, NDA) ಮೈತ್ರಿಕೂಟ ಮತ್ತು ಎಐಎಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಪ್ರತ್ಯೇಕವಾಗಿ ಸ್ಪರ್ಧಿಸುತ್ತಿದೆ. ತಮಿಳುನಾಡು ಬಿಜೆಪಿಯ ಘಟಕದ ಅಧ್ಯಕ್ಷ ಅಣ್ಣಾಮಲೈ ಆ ಹುದ್ದೆ ಸ್ವೀಕರಿಸಿದ ನಂತರ ಬಿಜೆಪಿಯ ವೋಟ್ ಬ್ಯಾಂಕಿನಲ್ಲಿ (Vote Banking) ಗಣನೀಯವಾಗಿ ಹೆಚ್ಚಾಗಿದೆ ಮತ್ತು ಕೆಲವು ಸೀಟುಗಳನ್ನು ಗೆಲ್ಲುವ ಸಾಧ್ಯತೆಯೂ ಇದೆ ಎಂದು ಕೂಡ ಹೇಳಲಾಗುತ್ತಿದೆ.