ಬಿಎಸ್‌ವೈ‌, ಕಾಗೇರಿ ಸೇರಿ ಎಲ್ರೂ ತಮ್ಮ ವೈವಾಹಿಕ ಸಂಬಂಧ ಸ್ಪಷ್ಟಪಡಿಸಲಿ: ಸಿದ್ದರಾಮಯ್ಯ ಸವಾಲು

ಬೆಂಗಳೂರು, ಮಾ. 25: ರಾಜ್ಯದ ಯಾವ ಶಾಸಕರೂ ಏಕಪತ್ನಿ ವೃತಸ್ಥರಲ್ಲ ಎಂಬ ಸಚಿವ ಸುಧಾಕರ್‌ ಹೇಳಿಕೆ ಬಿಜೆಪಿ ಶಾಸಕರಿಗೂ ಅನ್ವಯವಾಗುವ ಕಾರಣ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಮತ್ತು ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲರೂ ತಕ್ಷಣ ತಮ್ಮ ವೈವಾಹಿಕ ಸಂಬಂಧವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರಿಗೆ ಸಂಬಂಧಿಸಿದ್ದು ಎನ್ನಲಾದ ಸಿ.ಡಿ ಪ್ರಕರಣ ಕುರಿತು ಸುಧಾಕರ್‌ ಹೇಳಿಕೆಗೆ ಟ್ವಿಟರ್‌ನಲ್ಲಿ ಟಾಂಗ್‌ ನೀಡಿರುವ ಸಿದ್ದರಾಮಯ್ಯ, ʻಸುಧಾಕರ್‌ ಹೇಳಿಕೆಯನ್ನು ರಾಜ್ಯ ಬಿಜೆಪಿ ವಿರೋಧಿಸುವುದಾಗಿದ್ದರೆ, ನಮ್ಮ ಪಕ್ಷದ ಶಾಸಕರೆಲ್ಲರೂ ಸ್ವಯೀಚ್ಚೆಯಿಂದ ತನಿಖೆಗೆ ಒಳಪಡಲು ನಿರ್ಧರಿಸಿದಂತೆ ಅವರೂ ಕೂಡಾ ರಾಜ್ಯದ ಮುಖ್ಯಮಂತ್ರಿಗೆ ತಕ್ಷಣ ಪತ್ರ ಬರೆದು ತಮ್ಮ ಬಗ್ಗೆ ಕೂಡಾ ತನಿಖೆ ನಡೆಯಬೇಕೆಂದು ಮನವಿ ಮಾಡಬೇಕು ಎಂದು ತಿಳಿಸಿದ್ದಾರೆ.

ಸುಧಾಕರ್‌ ಹೇಳಿಕೆಯನ್ನು ಬಿಜೆಪಿ ಶಾಸಕರು ಒಪ್ಪಿಕೊಳ್ಳುವುದಾದರೆ, ರಾಜ್ಯ ಸರ್ಕಾರ ತಕ್ಷಣ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 494 ಮತ್ತು 495ರ ಅನ್ವಯ ಕಾನೂನು ಕ್ರಮಕೈಗೊಳ್ಳಬೇಕು. 1955ರ ಹಿಂದೂ ವಿವಾಹ ಕಾಯ್ದೆಯಡಿ ಬಹುಪತ್ನಿತ್ವ ಕಾನೂನು ಪ್ರಕಾರ ಅಪರಾಧವಾಗಿದೆ ಎಂದು ಟ್ವೀಟ್‌ ಮಾಡಿ ಹೇಳಿದ್ದಾರೆ.

Exit mobile version