ಪುತ್ರನಿಗೆ ಸಿಗದ ಮನ್ನಣೆ, ಬಿಎಸ್‍ವೈ ಮುಂದಿನ ನಡೆ ಏನು? ಇಲ್ಲಿದೆ ಅದರ ವಿಶ್ಲೇಷಣೆ!

BSY

ಮಹತ್ವದ ಬೆಳವಣಿಗೆಯಲ್ಲಿ ರಾಜ್ಯದ ಪ್ರಭಾವಿ ಬಿಜೆಪಿ(BJP) ನಾಯಕ ಎನಿಸಿಕೊಂಡಿದ್ದ ಬಿ.ಎಸ್.ಯಡಿಯೂರಪ್ಪನವರ(BS Yedurappa) ಪುತ್ರ ಬಿ.ವೈ.ವಿಜಯೇಂದ್ರಗೆ(BY Vijayendra) ವಿಧಾನಪರಿಷತ್ ಚುನಾವಣೆಯ(Vidhanparishath Election) ಟಿಕೆಟ್ ಕೈತಪ್ಪಿದೆ.

ಬಿ.ವೈ.ವಿಜಯೇಂದ್ರಗೆ ಟಿಕೆಟ್ ಪಕ್ಕಾ ಎಂದೇ ಹೇಳುಲಾಗುತ್ತಿತ್ತು. ಆದರೆ ಕೊನೆಯ ಕ್ಷಣದಲ್ಲಿ ಟಿಕೆಟ್ ನಿರಾಕರಿಸಲಾಗಿದೆ.

ಕುಟುಂಬ ರಾಜಕಾರಣಕ್ಕೆ ಪಕ್ಷದಲ್ಲಿ ಅವಕಾಶವಿಲ್ಲ ಎಂದು ಪರೋಕ್ಷವಾಗಿ ಹೈಕಮಾಂಡ್ ರಾಜ್ಯ ಬಿಜೆಪಿ ನಾಯಕರಿಗೆ ಸಂದೇಶ ರವಾನಿಸಿದೆ ಎನ್ನಲಾಗುತ್ತಿದೆ. ಇನ್ನೊಂದೆಡೆ ಬಿಎಸ್‍ವೈ ವಿರೋಧಿ ಗುಂಪು ವಿಜಯೇಂದ್ರಗೆ ಟಿಕೆಟ್ ಸಿಗದಿರಲು ಕಾರಣ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.

ಇನ್ನು ಮಗನಿಗೆ ಪರಿಷತ್ ಟಿಕೆಟ್ ಕೈತಪ್ಪಿದ್ದರು ಬಿ.ಎಸ್.ಯಡಿಯೂರಪ್ಪನವರು ಮಾತ್ರ ಯಾವುದೇ ಹೇಳಿಕೆ ನೀಡಿಲ್ಲ. ಇನ್ನು ಶಾಂತಿಯಿಂದ ವರ್ತಿಸುವಂತೆ ವಿಜಯೇಂದ್ರ ತಮ್ಮ ಬೆಂಬಲಿಗರಿಗೆ ಸಂದೇಶ ನೀಡಿದ್ದಾರೆ. ಟಿಕೆಟ್ ಯಾಕೆ ನಿರಾಕರಿಸಲಾಗಿದೆ ಎಂಬ ಕಾರಣ ಬಿಎಸ್‍ವೈಗೆ ತಿಳಿಯದ ಸತ್ಯವೇನಲ್ಲ. ಆದರೆ ಆತುರದ ನಿರ್ಧಾರಕ್ಕೆ ಅವಕಾಶ ನೀಡದೇ, ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸುವತ್ತ ಬಿಎಸ್‍ವೈ ಚಿತ್ತ ಹರಿಸಿದ್ದಾರೆ. ಹೀಗಾಗಿಯೇ ಮುಂಬರುವ ಅವಕಾಶಗಳನ್ನು ಬಳಸಿಕೊಳ್ಳುವತ್ತ ಗಮನ ಕೇಂದ್ರೀಕರಿಸಿದ್ದಾರೆ. ಹೀಗಾಗಿ ಬಿಎಸ್‍ವೈ ಸದ್ಯ ಮೌನಕ್ಕೆ ಶರಣಾಗಿದ್ದಾರೆ.

ಇನ್ನು ಮೂಲಗಳ ಪ್ರಕಾರ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಗಿಟ್ಟಿಸಿಕೊಳ್ಳಲು ಬಿಎಸ್‍ವೈ ಮುಂದಾಗಿದ್ದಾರೆ. ಟಿಕೆಟ್ ಮಾತ್ರವಲ್ಲದೇ ಬಿಜೆಪಿ ಅಧಿಕಾರಕ್ಕೆ ಬಂದರೆ ಮಗನನ್ನು ಮಂತ್ರಿ ಮಾಡುವ ಕಾರ್ಯತಂತ್ರವನ್ನು ಬಿಎಸ್‍ವೈ ಹೊಂದಿದ್ದಾರೆ ಎನ್ನಲಾಗಿದೆ. ಆದರೆ ಬಿಎಸ್‍ವೈ ವಿರೋಧಿ ಬಣ ವಿಜಯೇಂದ್ರನಿಗೆ ಅವಕಾಶ ಸಿಗದಂತೆ ಮಾಡುವ ಕಾರ್ಯತಂತ್ರ ಹೆಣೆಯುತ್ತಿದೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬಿಎಸ್‍ವೈ ವಿರೋಧಿಗಳ ಕಾರ್ಯತಂತ್ರ ಫಲ ನೀಡುವುದಿಲ್ಲ.

ಮಧ್ಯ ಕರ್ನಾಟಕ, ಮುಂಬೈ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರಬಲ ಲಿಂಗಾಯತ ಮತಬ್ಯಾಂಕ್ ಮೇಲೆ ಹಿಡಿತ ಹೊಂದಿರುವ ಬಿಎಸ್‍ವೈ, ಒಟ್ಟಾರೆ ಉತ್ತರ ಕರ್ನಾಟಕ ಯಾವುದಾದರೂ ಒಂದು ಕ್ಷೇತ್ರದಿಂದ ಮಗನನ್ನು ಸುಲಭವಾಗಿ ಗೆಲ್ಲಿಸಿಕೊಂಡು ಬರಬಲ್ಲರು. ಜಾತಿ ಮತ್ತು ಈಗಾಗಲೇ ವಿಜಯೇಂದ್ರ ರೂಪಿಸಿಕೊಂಡಿರುವ ಸಂಘಟನೆ ಬಲದಿಂದ ಗೆಲುವು ಸುಲಭವಾಗಲಿದೆ. 224 ವಿಧಾನಸಭಾ ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರವನ್ನು ಗೆಲ್ಲುವುದು ಬಿಎಸ್‍ವೈಗೆ ಕಷ್ಟಕರವಾಗಲಾರದು. ಮುಖ್ಯಮಂತ್ರಿ ಹುದ್ದೆಯಿಂದ ಬಿಎಸ್‍ವೈ ಕೆಳಗಿಳಿದಿದ್ದರು ಅವರ ರಾಜಕೀಯ ಶಕ್ತಿ ಮಾತ್ರ ಕುಂದಿಲ್ಲ.

ಒಟ್ಟಾರೆಯಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರಗೆ ಟಿಕೆಟ್ ಸಿಗದಿದ್ದರೆ ಬಂಡಾಯ ಅಭ್ಯರ್ಥಿಯಾಗಿ ವಿಜಯೇಂದ್ರ ಕಣಕ್ಕಿಳಿಯುವುದು ಶತಸಿದ್ದ ಎನ್ನುವುದು ಬಿಎಸ್‍ವೈ ಆಪ್ತ ಬಳಗದ ಮಾತು. ತಂದೆಯಿಂದ ಸಾಕಷ್ಟು ರಾಜಕೀಯ ಪಟ್ಟುಗಳನ್ನು ಕಲಿತಿರುವ ವಿಜಯೇಂದ್ರಗೆ ಚುನಾವಣೆಯಲ್ಲಿ ಗೆಲ್ಲುವುದು ಕಷ್ಟಕರವಲ್ಲ. ಆದರೆ ವಿಜಯೇಂದ್ರಗೆ ವಿಧಾನಸಭಾ ಚುನಾವಣೆಯಲ್ಲಿಯೂ ಟಿಕೆಟ್ ನಿರಾಕರಿಸಿದರೆ ಲಿಂಗಾಯತ ಸಮುದಾಯ ಹೇಗೆ ಪ್ರತಿಕ್ರಿಯಿಸಲಿದೆ ಎಂಬ ಭಯ ಬಿಜೆಪಿ ಹೈಕಮಾಂಡ್‍ನ್ನು ಕಾಡುತ್ತಿದೆ.

ಒಂದು ವೇಳೆ ಲಿಂಗಾಯತ ಸಮುದಾಯ ಬಿಜೆಪಿ ಮೇಲೆ ಮುನಿಸಿಕೊಂಡರೆ ಬಿಜೆಪಿ ತನ್ನ ಅತಿದೊಡ್ಡ ಮತಬ್ಯಾಂಕ್‍ನ್ನು ಕಳೆದುಕೊಂಡು, ಕೇವಲ 50-70 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಮಾತ್ರ ಸಾಧ್ಯವಾಗುತ್ತದೆ.

ಹೀಗಾಗಿ ವಿಧಾನಸಭಾ ಚುನಾವಣೆಯಲ್ಲಿ ವಿಜಯೇಂದ್ರನಿಗೆ ಟಿಕೆಟ್ ನಿರಾಕರಿಸುವ ಧೈರ್ಯವನ್ನು ಬಿಜೆಪಿ ಹೈಕಮಾಂಡ್ ಮಾಡಲಾರದು. ಅಂತಹ ಪ್ರಯತ್ನಕ್ಕೆ ಕೈ ಹಾಕಿದರೆ ದೊಡ್ಡ ನಷ್ಟ ಬಿಜೆಪಿಗೆ ಕಟ್ಟಿಟ್ಟ ಬುತ್ತಿ.

Exit mobile version