ಮಹಾರಾಷ್ಟ್ರ, ಏ. 24: ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬೀರ್ ಸಿಂಗ್ ಮಾಡಿದ್ದ ಭ್ರಷ್ಟಾಚಾರ, ಅವ್ಯವಹಾರ ಆರೋಪಕ್ಕೆ ಸಂಬಂಧಪಟ್ಟಂತೆ ಮಹಾರಾಷ್ಟ್ರ ಮಾಜಿ ಗೃಹಸಚಿವ ಅನಿಲ್ ದೇಶ್ಮುಖ್ ವಿರುದ್ಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಹಾಗೇ ಅನಿಲ್ ದೇಶ್ಮುಖ್ಗೆ ಸಂಬಂಧಪಟ್ಟ ಹಲವು ಪ್ರದೇಶಗಳನ್ನು ರೇಡ್ ಮಾಡಿದೆ. ಅನಿಲ್ ದೇಶಮುಖ್ ಅವರು ತಮ್ಮ ಅಧೀನ ಅಧಿಕಾರಿಗಳ ಮೂಲಕ ಮುಂಬೈನ ಬಾರ್, ರೆಸ್ಟೋರೆಂಟ್, ಹೋಟೆಲ್ಗಳಿಂದ ಅಕ್ರಮವಾಗಿ ಹಣ ಸಂಗ್ರಹಿಸುತ್ತಿದ್ದಾರೆ. ಈ ಮೂಲಕ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂದು ಪರಮ್ಬೀರ್ ಸಿಂಗ್ ಅವರು ಮುಖ್ಯಮಂತ್ರಿ ಉದ್ಧವ್ ಠಾಕ್ರೆಯವರಿಗೆ ಪತ್ರ ಬರೆದಿದ್ದರು. ಈ ಪತ್ರದ ಅನ್ವಯ ಏಪ್ರಿಲ್ 14ರಂದು ಸಿಬಿಐ ಅನಿಲ್ ದೇಶಮುಖ್ಗೆ ಸಮನ್ಸ್ ನೀಡಿತ್ತು.
ಮುಂಬೈನ ಬಾರ್, ಹೊಟೆಲ್, ರೆಸ್ಟೋರೆಂಟ್ ಮತ್ತಿತರ ಮೂಲಗಳಿಂದ ತಿಂಗಳಿಗೆ 100 ಕೋಟಿ ರೂಪಾಯಿ ಸಂಗ್ರಹಿಸುವಂತೆ ಪೊಲೀಸ್ ಅಧಿಕಾರಿ ಸಚಿನ್ ವಾಜೆಗೆ ಹೇಳಿದ್ದರು ಎಂದು ಪರಮ್ಬೀರ್ ಸಿಂಗ್ ತಮ್ಮ ಪತ್ರದಲ್ಲಿ ಉಲ್ಲೇಖಿಸಿ, ಆರೋಪ ಮಾಡಿದ್ದರು.
ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ, ಅನಿಲ್ ದೇಶಮುಖ್ ಅವರ ಆಪ್ತ ಸಹಾಯಕರಾದ ಸಂಜೀವ್ ಪಾಲಂದೆ ಮತ್ತು ಕುಂದಾನ್ ಶಿಂಧೆ, ಮಾಜಿ ಪೊಲೀಸ್ ಅಧಿಕಾರಿ ಸಚಿನ್ ವಾಝೆಯ ಇಬ್ಬರು ಚಾಲಕರು, ಬಾರ್ ಮಾಲೀಕರು, ಮುಂಬೈ ಪೊಲೀಸ್ ಅಧಿಕಾರಿಗಳು ಹಾಗೂ ದೇಶಮುಖ್ರ ಆಪ್ತವಲಯದಲ್ಲಿ ಗುರುತಿಸಿಕೊಂಡಿದ್ದವರನ್ನೂ ಸಿಬಿಐ ಈಗಾಗಲೇ ವಿಚಾರಣೆಗೆ ಒಳಪಡಿಸಿದೆ.