ಬೆಂಗಳೂರು, ಫೆ. 01: ಕೇಂದ್ರ ಸರ್ಕಾರದ ಈ ಬಾರಿಯ ಬಜೆಟ್ ಸೆಸ್ಗಳ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವ ‘ವಸೂಲಿ ಬಜೆಟ್’ ಆಗಿದೆ ಎಂದು ಶಾಸಕ ದಿನೇಶ್ ಗುಂಡೂರಾವ್ ಟೀಕಿಸಿದ್ದಾರೆ.
ಕೇಂದ್ರದ ಆಯವ್ಯಯದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು, ಕೇಂದ್ರ ಮಂಡಿಸಿರುವ ಬಜೆಟ್ ಡಿಜಿಟಲ್ ಬಜೆಟ್ ಎಂಬುವುದನ್ನು ಬಿಟ್ಟರೆ ಜನರಿಗೆ ನಯಾಪೈಸೆ ಉಪಯೋಗವಿಲ್ಲ. ತೈಲ ಬೆಲೆ ಈಗಾಗಲೇ ಜನರ ಜೀವ ಹಿಂಡುತ್ತಿದೆ, ಮತ್ತೆ ಡೀಸೆಲ್ ಮೇಲೆ ₹4, ಪೆಟ್ರೋಲ್ ಮೇಲೆ ₹2.50 ಅಬಕಾರಿ ಸುಂಕ ವಿಧಿಸಿರುವುದು ದುರಂತ. ಸಂಕಷ್ಟದಲ್ಲಿರುವ ಜನರಿಗೆ ಇನ್ನಷ್ಟು ಕಷ್ಟ ಕೊಡುವ ಸುಲಿಗೆಯ ಬಜೆಟ್ ಇದಾಗಿದೆ.
ಕೇಂದ್ರದ ಬಜೆಟ್ ಜನರ ನಿರೀಕ್ಷೆಗಳನ್ನು ಸಂಪೂರ್ಣವಾಗಿ ತಲೆಕೆಳಗು ಮಾಡಿದೆ. ಆರ್ಥಿಕ ಮುನ್ನೋಟವಿಲ್ಲದ ದೂರದೃಷ್ಟಿ ಕೊರತೆಯ ಬಜೆಟ್ ಇದು. ಸಂಕಷ್ಟದಲ್ಲಿರುವ ಯಾವುದೇ ಉದ್ಯಮದ ಪುನಶ್ಚೇತನಕ್ಕೆ ಈ ಬಜೆಟ್ನಲ್ಲಿ ಪ್ರಸ್ತಾಪವೇ ಇಲ್ಲ. ವಿನಾಶಕಾರಿ ಬಜೆಟ್ ಮಂಡಿಸಿ ಕೇಂದ್ರ ಸರ್ಕಾರ ತನ್ನ ದಿವಾಳಿತನ ತೋರಿಸಿಕೊಂಡಿದೆ.
ಕೋವಿಡ್ ಕಾಲದಲ್ಲಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಘೋಷಿಸಿದ್ದ 20 ಲಕ್ಷ ಕೋಟಿ ಸುಳ್ಳಿನ ಪ್ಯಾಕೇಜ್ಗೂ ಇಂದಿನ ಬಜೆಟ್ಗೂ ವ್ಯತ್ಯಾಸವೇನಿಲ್ಲ. ಈ ಬಾರಿಯ ಬಜೆಟ್ ಪೊಳ್ಳು ಭರವಸೆಯ, ಒಣ ಘೋಷಣೆಯ ಸುಳ್ಳಿನ ಭಂಡಾರವಷ್ಟೆ. ಜನಸಾಮಾನ್ಯರಿಗೆ ಈ ಬಜೆಟ್ನಿಂದ ಕಿಂಚಿತ್ತೂ ಲಾಭವಿಲ್ಲ. ಸೆಸ್ಗಳ ಮೂಲಕ ಜನರ ಜೇಬಿಗೆ ಕತ್ತರಿ ಹಾಕುವ ‘ವಸೂಲಿ ಬಜೆಟ್’ ಇದಾಗಿದೆ ಎಂದು ಟೀಕಿಸಿದ್ದಾರೆ.