ಲಂಚಕ್ಕೆ ಬೇಡಿಕೆ ಪ್ರಕರಣದಲ್ಲಿ ರವಿ ಚನ್ನಣ್ಣನವರ ಪಾತ್ರವಿಲ್ಲ : ಸಿಎಂ ಬೊಮ್ಮಾಯಿ!

bommai

ಬಿಜೆಪಿಯ(BJP) ಸದಸ್ಯ ಎನ್. ರವಿಕುಮಾರ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ(Chief Minister) ಬಸವರಾಜ್ ಬೊಮ್ಮಾಯಿ(Basavaraj Bommai) ಅವರು, ಬೆಂಗಳೂರು ಗ್ರಾಮಾಂತರ(Bengaluru rural) ಪೋಲಿಸ್ ಠಾಣಾ(Police Station)ವ್ಯಾಪ್ತಿಯಲ್ಲಿ ನಡೆದ, ಕ್ರಷರ್ ಮಾಲೀಕರಿಂದ ಲಂಚಕ್ಕೆ ಬೇಡಿಕೆ ಇಟ್ಟು, ಮುಂಗಡ ಪಡೆದ ಪ್ರಕರಣದಲ್ಲಿ ನಿಕಟಪೂರ್ವ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ(Ravi D Chenannanavar) ಪಾತ್ರ ಕಂಡುಬಂದಿಲ್ಲ ಎಂದು ವಿಧಾನಸಭೆಯಲ್ಲಿ ತಿಳಿಸಿದರು.

ಇನ್ನು ಅತ್ತಿಬೆಲೆಯ ಆರ್. ಮಂಜುನಾಥ್ ಎಂಬುವವರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ನೀಡಿದ್ದರು. ದೂರು ಆಧರಿಸಿ ಐಜಿಪಿ ನೇತೃತ್ವದಲ್ಲಿ ತನಿಖೆ ನಡೆಸಲಾಗಿತ್ತು. ಸರ್ಕಲ್ ಇನ್ಸಪೆಕ್ಟರ್ ಟಿ. ಶ್ರೀನಿವಾಸ್, ಎಎಸ್‍ಐಗಳಾದ ಎನ್.ಶುಭಾ ಮತ್ತು ಕೆ.ಜಿ. ಅನಿತಾ ಅವರ ವಿರುದ್ದವೂ ಆರೋಪ ಕೇಳಿಬಂದಿತ್ತು. ಈ ಮೂವರು ಅಧಿಕಾರಿಗಳ ದೂರವಾಣಿ ಕರೆಗಳನ್ನು ಪರಿಶೀಲನೆ ನಡೆಸಿದಾಗ, ಕ್ರಷರ್ ಮಾಲೀಕರಿಗೆ ಸಹಾಯ ಮಾಡುವ ರೀತಿ ಮಾತುಕತೆ ನಡೆಸಿ, 5 ಲಕ್ಷ ರೂಪಾಯಿಗಳನ್ನು ತೆಗೆದುಕೊಂಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

ಹೀಗಾಗಿ ಟಿ. ಶ್ರೀನಿವಾಸ್ ಅವರನ್ನ ಅಮಾನತು ಮಾಡಲಾಗಿತ್ತು. ಉಳಿದ ಇಬ್ಬರು ಅಧಿಕಾರಿಗಳ ವಿರುದ್ದ ಇಲಾಖೆ ಕ್ರಮ ಕೈಗೊಂಡಿದೆ. ಆದರೆ ಈ ಪ್ರಕರಣದಲ್ಲಿ ಅಂದಿನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ರವಿ ಚನ್ನಣ್ಣನವರ ಪಾತ್ರ ಇರುವ ಯಾವುದೇ ಆಧಾರ ಕಂಡುಬಂದಿಲ್ಲ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ತಿಳಿಸಿದ್ದಾರೆ.

ಇನ್ನು ಮುಖ್ಯಮಂತ್ರಿ ಬೊಮ್ಮಾಯಿಯವರ ಉತ್ತರದಿಂದ ತೃಪ್ತರಾಗದ ಎನ್. ರವಿಕುಮಾರ್, ರವಿ ಚನ್ನಣ್ಣನವರು ಈ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ನನ್ನ ಬಳಿ ಸಾಕ್ಷ್ಯವಿದೆ ಎಂದರು. ಆಗ ಸಿಎಂ ಬೊಮ್ಮಾಯಿಯವರು ಸಾಕ್ಷ್ಯವನ್ನು ತನಿಖಾಧಿಕಾರಿಗೆ ನೀಡಿ, ಮತ್ತೆ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳೋಣ ಎಂದರು.

Exit mobile version