ರಾಜ್ಯದ ಹಲವೆಡೆ ಭಾರಿ ಮಳೆ ; ಪರಿಸ್ಥಿತಿ ಅವಲೋಕಿಸಿದ ಸಿಎಂ ಬಸವರಾಜ್ ಬೊಮ್ಮಾಯಿ

karnataka

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಹಲವೆಡೆ ಧಾರಾಕಾರ ಮಳೆ(Heavy Rains) ಮುಂದುವರಿದಿದ್ದು,.

ಪರಿಸ್ಥಿತಿಯನ್ನು ಅವಲೋಕಿಸಲು ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ(Basavaraj Bommai) ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು 13 ಮಳೆ ಪೀಡಿತ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಜೂನ್ 1 ರಿಂದ ಇಲ್ಲಿಯವರೆಗೆ ಒಟ್ಟು 12 ಜನರು ವಿವಿಧ ಮಳೆ ಸಂಬಂಧಿತ ಘಟನೆಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ಕರ್ನಾಟಕ ಸಿಎಂ ಹೇಳಿದರು.

ರಾಜ್ಯದಾದ್ಯಂತ ವಿವಿಧ ಸ್ಥಳಗಳಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ನಿರಂತರ ಮಳೆ ಮುಂದುವರೆಯಲಿದೆ. ಸಾರಿಗೆ ಮತ್ತು ಸಂಪರ್ಕವನ್ನು ಪುನಃಸ್ಥಾಪಿಸಲು, ರಸ್ತೆಗಳನ್ನು ತಕ್ಷಣ ದುರಸ್ತಿ ಮಾಡಲು ನಿರ್ದೇಶನಗಳನ್ನು ನೀಡಲಾಗಿದೆ. ಭೂಕುಸಿತದ ಸಂದರ್ಭದಲ್ಲಿ ರಸ್ತೆಗಳನ್ನು ತೆರವುಗೊಳಿಸಲು ತಕ್ಷಣ ಕ್ರಮಕೈಗೊಳ್ಳಬೇಕು. ಇನ್ನು ಪ್ರಾಣಹಾನಿಯಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಅಧಿಕಾರಿಗಳ ಪ್ರಕಾರ, ರಾಜ್ಯದಲ್ಲಿ ಇದುವರೆಗೆ ಒಟ್ಟು 495 ಜನರು ಮಳೆ ಮತ್ತು ಪ್ರವಾಹಕ್ಕೆ ಸಿಲುಕಿದ್ದಾರೆ, 90 ಜನರನ್ನು ಸದ್ಯ ರಕ್ಷಿಸಲಾಗಿದೆ ಮತ್ತು 90 ಜನರಿಗೆ ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗುತ್ತಿದೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಜಿಲ್ಲಾಧಿಕಾರಿಗಳ ಬಳಿ ಒಟ್ಟು 735 ಕೋಟಿ ರೂ.ಗಳು ಲಭ್ಯವಿದೆ ಎಂದು ಸಿಎಂ ತಿಳಿಸಿದರು. ಮನೆಗಳಿಗೆ ಹಾನಿಯಾದ ಅಥವಾ ಜಲಾವೃತಗೊಂಡವರಿಗೆ ತಲಾ 10 ಸಾವಿರ ರೂ.ಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ ಸಿಎಂ, 

ಜಿಲ್ಲಾ ಪಂಚಾಯಿತಿ ಎಂಜಿನಿಯರ್‌ಗಳು ಮನೆಗಳಿಗೆ ಎಷ್ಟು ಹಾನಿಯಾಗಿದೆ ಎಂಬುದರ ಕುರಿತು ಒಂದೆರಡು ದಿನಗಳಲ್ಲಿ ವರದಿ ನೀಡಬೇಕು. ಎ, ಬಿ ಮತ್ತು ಸಿ ವರ್ಗಗಳ ಅಡಿಯಲ್ಲಿ ಪರಿಹಾರವನ್ನು ನೀಡಬಹುದು. ಮಳೆ ನಿಂತ ನಂತರ ಎಷ್ಟು ಬೆಳೆ ಹಾನಿಯಾಗಿದೆ.

ಹಾಳಾಗಿರುವ ರಸ್ತೆಗಳ ಬಗ್ಗೆಯೂ ವರದಿ ಸಿದ್ಧಪಡಿಸಲು ಮತ್ತು ವಿದ್ಯುತ್ ಕಂಬಗಳನ್ನು ತಕ್ಷಣ ಮರುಸ್ಥಾಪಿಸಲು ಸೂಚನೆ ನೀಡಲಾಗಿದೆ. ‘ಜನರ ಪ್ರಾಣಹಾನಿ, ಜಾನುವಾರುಗಳ ಸಾವು ಸಂಭವಿಸಿದ್ದಲ್ಲಿ ಕೂಡಲೇ ಪರಿಹಾರ ವಿತರಿಸಬೇಕು’ ಎಂದರು.

ಈ ಮಧ್ಯೆ ಕಂದಾಯ, ಪೊಲೀಸ್ ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿಯನ್ನು ರಕ್ಷಣಾ ಮತ್ತು ಪರಿಹಾರ ಕಾರ್ಯಗಳಿಗೆ ಸಮನ್ವಯಗೊಳಿಸಲು ಕೇಳಲಾಗಿದೆ. ರಕ್ಷಣಾ ಕಾರ್ಯಾಚರಣೆಗೆ ಎನ್‌ಡಿಆರ್‌ಎಫ್(NDRF) ಮತ್ತು ಎಸ್‌ಡಿಆರ್‌ಎಫ್‌ನ(SDRF) ಸೇವೆಗಳನ್ನು ಬಳಸಿಕೊಳ್ಳಬೇಕು ಎಂದು ಬೊಮ್ಮಾಯಿ ಸಭೆಯಲ್ಲಿ ಹೇಳಿದರು.

ಕರಾವಳಿ ಭಾಗಗಳಲ್ಲಿ ಸಂಭವಿಸುವ ತುರ್ತು ರಕ್ಷಣಾ ಕ್ರಮಗಳನ್ನು ಕೈಗೊಳ್ಳಲು ಮತ್ತು ಹಾನಿಯನ್ನು ಕಡಿಮೆ ಮಾಡಲು ಸಿಎಂ ಬೊಮ್ಮಾಯಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.

ಸಿಎಂ ನೀಡಿರುವ ಇತರ ಸೂಚನೆಗಳಲ್ಲಿ ಸಂಕಷ್ಟದಲ್ಲಿರುವ ಜನರಿಗೆ ಸ್ಪಂದಿಸಲು ಕಂಟ್ರೋಲ್ ರೂಂ ಸ್ಥಾಪಿಸುವುದು, 24/7 ಸೇವೆಗೆ ಪೊಲೀಸ್ ಸಿಬ್ಬಂದಿ ಲಭ್ಯತೆ, ಲೈನ್ ಸ್ನ್ಯಾಪ್ ಆಗಿದ್ದಲ್ಲೆಲ್ಲಾ ವಿದ್ಯುತ್ ಮರುಸ್ಥಾಪನೆ ಮತ್ತು ರಕ್ಷಣೆಗಾಗಿ ಡಿಸಿಗಳ ಪಿಡಿ ಖಾತೆಯಲ್ಲಿ ಲಭ್ಯವಿರುವ ಹಣವನ್ನು ಸರಿಯಾಗಿ ಬಳಸಿಕೊಳ್ಳುವುದು ಸೇರಿವೆ.

ಸಚಿವರಾದ ಗೋವಿಂದ್ ಕಾರಜೋಳ, ವಿ.ಸೋಮಣ್ಣ, ಎಸ್.ಟಿ.ಸೋಮಶೇಖರ್, ಗೋಪಾಲಯ್ಯ, ಸುನೀಲ್ ಕುಮಾರ್, ನಾರಾಯಣಗೌಡ, ಕೋಟ ಶ್ರೀನಿವಾಸ ಪೂಜಾರಿ ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
Exit mobile version