ಕಾಂಗ್ರೆಸ್ ಸಾರಿಗೆ ನೌಕರರ ಪರವಾಗಿದೆ; ಡಿ.ಕೆ. ಶಿ

ಬೆಂಗಳೂರು, ಡಿ. 12: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿರುವ ರಾಜ್ಯ ಹಾಗೂ ನಗರ ರಸ್ತೆ ಸಾರಿಗೆ ಸಂಸ್ಥೆ ನೌಕರರ ಪರವಾಗಿ ಕಾಂಗ್ರೆಸ್ ನಿಲ್ಲಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ.

ರಾಜ್ಯ ರಸ್ತೆ ಸಾರಿಗೆ ಹಾಗೂ ನಗರ ಸಾರಿಗೆ ಸಂಸ್ಥೆಗಳ ನೌಕರರನ್ನು ಬೆಂಗಳೂರಿನ ಬನಶಂಕರಿ ಬಸ್ ನಿಲ್ದಾಣದಲ್ಲಿ ಶನಿವಾರ ಭೇಟಿಯಾಗಿ ಅವರ ಅಹವಾಲು ಆಲಿಸಿದರು. ಈ ವೇಳೆ ಮಾತನಾಡಿದ ಡಿ.ಕೆ.ಶಿವಕುಮಾರ್, ರಾಜ್ಯದಲ್ಲಿ ಎಲ್ಲೆಲ್ಲಿ ನೀವು ಮುಷ್ಕರ ಮಾಡುತ್ತಿದ್ದೀರೋ ಅಲ್ಲೆಲ್ಲಾ ಪಕ್ಷ ನಿಮ್ಮ ಪರವಾಗಿದೆ. ಕಾಂಗ್ರೆಸ್ ಕೂಡ ಸರ್ಕಾರ ನಡೆಸಿದೆ. ಸಾಕಷ್ಟು ಬದಲಾವಣೆ ತರಲು ಪ್ರಯತ್ನಿಸಿದೆ. ನೀವು ಹಗಲು-ರಾತ್ರಿ ಜನರ ಸೇವೆಗೆ ಶ್ರಮಿಸುತ್ತಿದ್ದೀರಿ. ನಿಮ್ಮ ಒತ್ತಡ ಏನು ಎಂಬುದರ ಬಗ್ಗೆ ಅರಿವಿದೆ. ಕೊರೋನಾ ಸಮಯದಲ್ಲಿ ತಾವು ಪಟ್ಟ ಶ್ರಮ, ಮಾಡಿದ ತ್ಯಾಗವನ್ನು ಯಾರೂ ಮರೆಯಲು ಸಾಧ್ಯವಿಲ್ಲ.

ಅನೇಕರು ವೇತನೆ ಸಿಗದೆ ಎಷ್ಟು ತೊಂದರೆ ಅನುಭವಿಸಿದ್ದೀರಿ ಅಂತಲೂ ಗೊತ್ತಿದೆ. ನಾನು, ನಮ್ಮ ವಿರೋಧ ಪಕ್ಷದ ನಾಯಕರು ಈ ವಿಚಾರದಲ್ಲಿ ಹೋರಾಟ ಮಾಡಿದ್ದೇವೆ. ರಾಜ್ಯ ಸರ್ಕಾರ 5 ಸಾವಿರ ರುಪಾಯಿ ನೆರವು ಕೊಡುತ್ತೇವೆ ಎಂದು ಹೇಳಿತು. ಜತೆಗೆ 1600 ಕೋಟಿ ರುಪಾಯಿ ಕೊರೊನಾ ಪ್ಯಾಕೇಜ್ ಘೋಷಿಸಿತು. ಕೇಂದ್ರದವರು 20 ಲಕ್ಷ ಕೋಟಿ ರುಪಾಯಿ ನೆರವು ಎಂದರು. ಆದರೆ 5 ಸಾವಿರ ರುಪಾಯಿ ನೆರವು ಕೊಡಲು ಈ ಸರ್ಕಾರಕ್ಕೆ ನೀಡಲು ಸಾಧ್ಯವಾಗಿಲ್ಲ.

ಇಂದು ನಿಮ್ಮ ನೋವನ್ನು ವ್ಯಕ್ತಪಡಿಸಿದ್ದೀರಿ. ನಿಮ್ಮ ನೋವಿಗೆ ಮಂತ್ರಿಗಳು ಸ್ಪಂದಿಸಿಲ್ಲ. ಮುಖ್ಯಮಂತ್ರಿಗಳು ಕೇಳುತ್ತಿಲ್ಲ. ಸರ್ಕಾರದ ಪರವಾಗಿ ಶಾಸಕರೂ ಬಂದಿಲ್ಲ. ಅವರು ಎಲ್ಲಿದ್ದಾರೆ ಎಂದು ಹುಡುಕುವ ಪರಿಸ್ಥಿತಿ ಬಂದಿದೆ.

ನಾನು ಇಂಧನ ಮಂತ್ರಿಯಾಗಿದ್ದಾಗ ಕೆಇಬಿಯವರಿಗೆ ವೇತನ ಭತ್ಯೆ ಹೆಚ್ಚಿಸಲಾಗಿತ್ತು. ಕೆಇಬಿ ಬೋರ್ಡ್ ನಲ್ಲಿ ಲೈನ್ ಮೆನ್ ಹಾಗೂ ಇಂಜಿನಿಯರ್ ಗಳ ಪರವಾಗಿ ಇಬ್ಬರು ಪ್ರತಿನಿಧಿಗಳು ಇರುತ್ತಾರೆ. ಸಭೆಯಲ್ಲಿ ಅವರು ಅವರ ಪರವಾಗಿ ಧ್ವನಿ ಎತ್ತುತ್ತಿದ್ದರು.

ಸರ್ಕಾರದ ಎಲ್ಲ ಶಾಸಕರುಗಳಿಗೆ, ಮಂತ್ರಿಗಳಿಗೆ ನಿಮ್ಮ ಪರವಾಗಿ ಮನವಿ ಮಾಡುತ್ತೇನೆ. 1.25 ಲಕ್ಷ ಸಾರಿಗೆ ನೌಕರರು ಇದ್ದಾರೆ. 40 ಕೋಟಿ ಜನರಿಗೆ ಸೇವೆ ನೀಡುತ್ತಿದ್ದಾರೆ. ಅವರಿಗೆ ನೀವು ರಕ್ಷಣೆ ನೀಡಬೇಕು. ನಿಮ್ಮ ಹೋರಾಟ, ನಿಮ್ಮ ನೋವಿನಲ್ಲಿ ಕಾಂಗ್ರೆಸ್ ಜತೆಗಿದೆ ಎಂದು ಹೇಳುತ್ತೇನೆ. ನಿಮ್ಮ ಪ್ರತಿನಿಧಿಗಳು ನಮ್ಮ ಕಚೇರಿಗೆ ಬರಲಿ. ನಿಮ್ಮ ಹೋರಾಟಕ್ಕೆ ಹೇಗೆ ಕೈಜೋಡಿಸಬೇಕು ಎಂಬುದನ್ನು ಚರ್ಚೆ ಮಾಡುತ್ತೇನೆ ಎಂದರು.

ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ, ನಿಮ್ಮ ಸಂಸ್ಥೆಗಳ ಆಡಳಿತ ಮಂಡಳಿಯಲ್ಲಿ ನಿಮ್ಮ ಪ್ರತಿನಿಧಿಗಳಾಗಿ ಇಬ್ಬರನ್ನು ನೇಮಕ ಮಾಡುತ್ತೇವೆ. ನಿಮ್ಮ ಧ್ವನಿಯಾಗಿ ಆಡಳಿತ ಮಂಡಳಿಯಲ್ಲಿ ಯಾರಾದರೂ ಇರಬೇಕು. ನಿಮ್ಮ ನೋವು ಏನು ಎಂಬುದು ಅವರಿಗೂ ಅರಿವಾಗಬೇಕು. ಇದಕ್ಕೆ ಪರಿಹಾರ ಕಂಡು ಹಿಡಿಯಬೇಕು. ಸಾರಿಗೆ ಮಂತ್ರಿಗಳು ಅಡ್ರೆಸ್ ಗೆ ಇಲ್ಲ ಎಂದು ಮಾಧ್ಯಮಗಳು ಪ್ರಸಾರ ಮಾಡುತ್ತಿವೆ. ಬೇರೆ ಮಂತ್ರಿಗಳು ಕೂಡ ನಿಮ್ಮ ಮನವಿ ಆಲಿಸಲು ಬರಬಹುದಿತ್ತು. ಆದರೆ ಅವರೂ ಬಂದಿಲ್ಲ. ಹಾಗಾಗಿ ಕೂಡಲೇ ಈ ಇಲಾಖೆಗೆ ಸಂಬಂಧಿಸಿದ ಈ ಪ್ರತಿಭಟನಾನಿರತ ನೌಕರರ ಒಕ್ಕೂಟದ ಪ್ರತಿನಿಧಿಗಳ ಜತೆ ಮಾತನಾಡಿ ಈ ಸಮಸ್ಯೆ ಬಗೆಹರಿಸಿ, ನ್ಯಾಯ ಕೊಡಿ ಎಂದು ನಾನು ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ.’

ನೌಕರರ ಜತೆ ಚರ್ಚಿಸಲಿ
ಮೊದಲು ನೌಕರರ ಅಳಲು ಎನು ಎಂದು ಕರೆದು ಚರ್ಚಿಸಬೇಕಿತ್ತು. ನಿಮ್ಮ ಪರಿಸ್ಥಿತಿಯನ್ನು ನೀವು ಅವರಿಗೆ ವಿವರಿಸಬೇಕು ಆಗ ಅವರಿಗೂ ಮನವರಿಕೆಯಾಗಿ ಪರಿಹಾರ ಕಂಡುಕೊಳ್ಳಲು ನೆರವಾಗುತ್ತದೆ. ಯಾರು ಕೂಡ ಸುಮ್ಮನೆ ಬೇಡಿಕೆ ಇಡುವುದಿಲ್ಲ. ಮುಖ್ಯಮಂತ್ರಿಗಳು ಕೂಡಲೇ ಪ್ರತಿಭಟನಾನಿರತ ನೌಕರರ ಜತೆ ಚರ್ಚೆ ನಡೆಸಬೇಕು. ಆಡಳಿತ ನಿಮ್ಮ ಕೈಯಲ್ಲಿದೆ. ನೀವು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕು. ಈ ಹಿಂದೆ ಪ್ರತಿಭಟನೆಗಳು ನಡೆಯುತ್ತಿದ್ದಾಗ ನೀವೇನು ಮಾಡುತ್ತಿದ್ದಿರಿ? ಸಂಸ್ಥೆಯ ವಿವಿಧ ವಲಯವಾರು ಮಂಡಳಿಗಳಲ್ಲಿ ಕಡ್ಡಾಯವಾಗಿ ಸಾರಿಗೆ ನೌಕರರ ಪ್ರತಿನಿಧಿಗಳನ್ನು ನೇಮಕ ಮಾಡಬೇಕು. ಆಗ ಅವರ ಸಮಸ್ಯೆ ಏನು? ಇವರ ಸಮಸ್ಯೆ ಏನು? ಎಂಬುದು ಇಬ್ಬರಿಗೂ ಅರಿವಾಗುತ್ತದೆ. ಕೊರೋನಾ ಸಮಯದಲ್ಲಿ ನೀವು ಕೊಟ್ಟ ಮಾತಿನಂತೆ ನಡೆದುಕೊಳ್ಳಿ. ಅದೇ ರೀತಿ ಚಾಲಕರು, ವೃತ್ತಿಆಧಾರಿತ ವರ್ಗದವರಿಗೂ ಸರ್ಕಾರ ನೀಡಬೇಕಾದ ಪರಿಹಾರ ಬಾಕಿ ಇದೆ. ಅದನ್ನು ಆದಷ್ಟು ಬೇಗ ನೀಡಬೇಕಿದೆ ಎಂದರು.

Exit mobile version