ಭಾರತದ ಸಂವಿಧಾನ ಜಾರಿಯಾಗಿ 75ನೇ ವರ್ಷದಲ್ಲಿದ್ದೇವೆ. ಇದು ಅಮೃತ ವರ್ಷವಾಗಿರುವುದರಿಂದ ರಾಜ್ಯ ಸರ್ಕಾರ 2024 ಜನವರಿ (January) 26 ರಿಂದ ರಾಜ್ಯದಲ್ಲಿ ಸಂವಿಧಾನ ಜಾಗೃತಿ ಜಾಥಾ ಏರ್ಪಾಡು ಮಾಡಿತ್ತು. ಈ ಜಾಥಾ ಫೆಬ್ರವರಿ 23 ರವರೆಗೆ ರಾಜ್ಯದ 31 ಜಿಲ್ಲೆಗಳಲ್ಲಿ 6,000 ಗ್ರಾಮ ಪಂಚಾಯಿತಿ ಗಳನ್ನು 24 ಮತ್ತು 25ರಂದು ನಡೆದ ಬೃಹತ್ ಸಮಾವೇಶದಲ್ಲಿ 50 ಸಾವಿರ ಜನ ಪಾಲ್ಗೊಂಡಿದ್ದರು. ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಧಕ್ಕೆ ಬಂದಿದೆ. ಸಂವಿಧಾನಕ್ಕೆ ರಕ್ಷಣೆ ಇಲ್ಲದಿರುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಪ್ರಜಾಸತ್ತೆಯನ್ನು ಹಾಗೂ ಸಂವಿಧಾನವನ್ನು ಉಳಿಸಿಕೊಳ್ಳಬೇಕಾಗಿರುವುದು ಪ್ರತಿ ಭಾರತೀಯನ ಕರ್ತವ್ಯ. ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿಸಲು ನಾವು ಮತ್ತೊಂದು ಸ್ವಾತಂತ್ರ್ಯ ಹೋರಾಟವನ್ನೇ ಮಾಡಬೇಕಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಅವರು ಹೇಳಿದರು. ನಿನ್ನೆ ಮೈಸೂರಿನ (Mysore) ಪ್ರಗತಿಪರ ಸಂಘಟನೆಗಳ ಒಕ್ಕೂಟ ಕಲಾಮಂದಿರದಲ್ಲಿ ಆಯೋಜಿಸಿದ್ದ “ಪ.ಮಲ್ಲೇಶ್ – 90 ಭಾರತ ಜನತಂತ್ರದ ಸಮಕಾಲಿನ ತಲ್ಲಣಗಳು ರಾಷ್ಟ್ರೀಯ ವಿಚಾರ ಸಂಕಿರಣ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ಧ್ವನಿಯಾಗಿದ್ದ ಮಲ್ಲೇಶ್, ಸದಾ ಜನರ ನಡುವೆಯೇ ಇದ್ದರು.
ಮಲ್ಲೇಶ್ (Mallesh) ಅವರು ಬಿಟ್ಟಿರುವ ಹೋರಾಟವನ್ನು ಮತ್ತೆ ಮುಂದುವರೆಸಿದರೆ ಅದೇ ಅವರಿಗೆ ಸಲ್ಲಿಸುವ ನಿಜ ಗೌರವ. ಇತ್ತೀಚಿಗೆ ದಿನಗಳಲ್ಲಿ ಚಳವಳಿಗಳಿಗೆ ಸಮರ್ಥ ನಾಯಕತ್ವ ವಹಿಸಿಕೊಳ್ಳುವವರಿಲ್ಲ. ಮಲ್ಲೇಶ್ ಅವರು ಇಲ್ಲದಿದ್ದರೆ ಮೈಸೂರಿನಲ್ಲಿ ಚಳವಳಿನೇ ನಡೆಯುವುದಿಲ್ಲ ಎನ್ನುವ ಹಾಗಾಗಿದೆ. ವೈರುಧ್ಯತೆ ಇರುವ ಸಮಾಜಕ್ಕೆ ನಾವು ಕಾಲಿಡುತ್ತಿದ್ದೇವೆ. ಸಮಾಜದಲ್ಲಿ ಆರ್ಥಿಕ, ಸಾಮಾಜಿಕ ಅಸಮಾನತೆ ಇದ್ದು, ರಾಜಕೀಯ ಸ್ವಾತಂತ್ರ್ಯ ದೊರೆತಿದೆ. ರಾಜಕೀಯ ಪ್ರಜಾಪ್ರಭುತ್ವದಲ್ಲಿ ಒಂದು ಮತ ಒಂದು ಮೌಲ್ಯವಿದ್ದಂತೆ ಸಾಮಾಜಿಕ ಹಾಗೂ ಆರ್ಥಿಕವಾಗಿ ಇಲ್ಲ. ನಮ್ಮಲ್ಲಿ ಅಸಮಾನತೆ ಇದೆ. ಎಲ್ಲಿಯವರೆಗೆ ರಾಜಕೀಯ ಪ್ರಜಾಪ್ರಭುತ್ವ ಸಾಮಾಜಿಕ ಪ್ರಜಾಪ್ರಭುತ್ವದ ತಳಹದಿಯ ಮೇಲೆ ನಿಲ್ಲುವುದಿಲ್ಲವೋ ಅಲ್ಲಿಯವರೆಗೆ ರಾಜಕೀಯ ಪ್ರಜಾಪ್ರಭುತ್ವ ಸಾರ್ಥಕವಾಗುವುದಿಲ್ಲ ಎಂದರು.
ಸಂವಿಧಾನದಲ್ಲಿ ಹೇಳಿರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವಗಳನ್ನು ಒಂದರಿಂದ ಮತ್ತೊಂದನ್ನು ಬೇರ್ಪಡಿಸಲು ಸಾಧ್ಯವಿಲ್ಲ. ಸಾಮಾಜಿಕ, ಆರ್ಥಿಕ ಸಮಾನತೆ ಇರಬೇಕು. ಜಾತಿ ವ್ಯವಸ್ಥೆಯ ಕಾರಣಕ್ಕಾಗಿ ಸಾಮಾಜಿಕ, ಆರ್ಥಿಕ ಅಸಮಾನತೆ ನಿರ್ಮಾಣವಾಗಿದೆ. ಪ್ರಧಾನಿ ಮೋದಿ ಅವರು “ಸಬ್ ಕಾ ಸಾಥ್ ಸಬ್ ಕಾ ವಿಕಾಸ್” (Sab ka Saath, Sab ka Vikas) ಎನ್ನುತ್ತಾರೆ. ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಟೋಪಿ ಹಾಕಿದವರು, ಗಡ್ಡ ಬಿಟ್ಟವರು ಹಾಗೂ ಬುರ್ಖಾ ಹಾಕಿದವರು ಕಚೇರಿಗೆ ಬರಬೇಡಿ ಎನ್ನುತ್ತಾರೆ. ನಮ್ಮ ನಡವಳಿಕೆ ಹೇಗಿದೆ ಎಂದು ಗಮನಿಸಬೇಕು.
ವಿಮರ್ಶೆ ಮಾಡುವ ಶಕ್ತಿ ಇಲ್ಲದಿದ್ದರೆ ಹೀಗಾಗುತ್ತದೆ. ವಿದ್ಯಾವಂತರು ಅನೇಕರಿಗೆ ಸಂವಿಧಾನದ ಪೀಠಿಕೆ ಏನು ಹೇಳುತ್ತದೆ ಎಂದು ಗೊತ್ತಿಲ್ಲ. ಸಂವಿಧಾನದ ರೀತಿಯಲ್ಲಿ ನಡೆದುಕೊಳ್ಳುವವರ ಕೈಯಲ್ಲಿ ಸಂವಿಧಾನವಿದ್ದರೆ ಅದು ಶ್ರೇಷ್ಠ ಸಂವಿಧಾನವಾಗುತ್ತದೆ ಎಂದು ಅಂಬೇಡ್ಕರ್ (Ambedkar) ಹೇಳಿದ್ದರು. ಸಂವಿಧಾನದ ಬಗ್ಗೆ ನಂಬಿಕೆ, ಗೌರವ ಇಲ್ಲದಿದ್ದವರ ಕೈಯಲ್ಲಿ ಅದು ಉಳಿಯುವುದಿಲ್ಲ. ಇದು ನಮ್ಮ ಮುಂದಿರುವ ಸವಾಲು. ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವನ್ನೇ ದುರ್ಬಲಗೊಳಿಸಿದರೆ ಸಂವಿಧಾನ ಹೇಗೆ ಶಕ್ತಿಯುತವಾಗಿರಲು ಸಾಧ್ಯ? ಎಂದು ಪ್ರಶ್ನಿಸಿದರು.
ಹಿಂದುತ್ವ ಮೃದು ಮತ್ತು ಕಟುವಾಗಿರಲು ಸಾಧ್ಯವಿಲ್ಲ. ಇಂತಹ ವಿಷಯಗಳಲ್ಲಿ ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿ ಜನರನ್ನು ದಾರಿತಪ್ಪಿಸಬಾರದು. ಸಂವಿಧಾನಕ್ಕೆ ಬೆದರಿಕೆ ಇದೆ ಎನ್ನುವುದು ನಿಜ. ಅನಂತ ಕುಮಾರ್ ಹೆಗಡೆ ಕೇಂದ್ರ ಸಚಿವರಾಗಿದ್ದಾಗಲೇ ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು ಎಂದಾಗ ಆರ್.ಎಸ್.ಎಸ್, ಬಿಜೆಪಿ (RSS, BJP) ಏನೂ ಕ್ರಮ ತೆಗೆದುಕೊಳ್ಳಲಿಲ್ಲ. ಅದು ಬಿಜೆಪಿಯ ಅಜೆಂಡಾ ಎಂದು ಸೂಚಿಸುತ್ತದೆ. ಸ್ವಾರ್ಥ ಅಧಿಕಾರಕ್ಕಾಗಿ ಶೂದ್ರರೂ ಅಲ್ಲಿಗೆ ಹೋಗುತ್ತಿದ್ದಾರೆ.
ಮನುಸ್ಮೃತಿಯಿಂದಾಗಿ ಶೂದ್ರರು ಅಕ್ಷರ ಸಂಸ್ಕೃತಿಯಿಂದ ವಂಚಿತರಾದರು. ಚಾತುರ್ವಣ ವ್ಯವಸ್ಥೆಯಲ್ಲಿ ಮೊದಲ ಮೂರು ವರ್ಗಗಳಿಗೆ ವಿದ್ಯೆಗೆ ಅವಕಾಶವಿತ್ತು. ಕಾಯಕ ಜೀವಿಗಳಿಗೆ ವಿದ್ಯೆ, ಆಸ್ತಿ ಇರುವಂತಿರಲಿಲ್ಲ. ಜಾತಿ ವ್ಯವಸ್ಥೆಯ ಕಾರಣದಿಂದಲೇ ಅಸಮಾನತೆ ಸೃಷ್ಟಿಯಾಗಿ ಕೆಲವರ ಕೈಯಲ್ಲಿ ಆಸ್ತಿ ಶೇಖರಣೆಯಾಗಿ ವಿದ್ಯೆಯಿಂದ ವಂಚಿತರಾದರು. ಎಲ್ಲಿಯೆಯವರೆಗೆ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಸ್ವಾತಂತ್ರ್ಯ ಯಶಸ್ವಿಯಾಗಿದೆ ಎಂದು ಹೇಳಲಾಗುವುದಿಲ್ಲ. ಚಲನೆಯಿಲ್ಲದ ಜಾತಿವ್ಯವಸ್ಥೆ ನಮ್ಮ ಸಮಾಜದಲ್ಲಿದೆ.
ಜಾತಿವ್ಯವಸ್ಥೆಯು ವರ್ಟಿಕಲ್ (Vertical) ಆಗಿದ್ದು, ಶ್ರೇಷ್ಠ – ಕನಿಷ್ಠವೆಂಬ ವ್ಯವಸ್ಥೆಯಿತ್ತು. ನಿರ್ಜಿವವಾದ ವ್ಯವಸ್ಥೆಗೆ ಜೀವ ಬರಬೇಕಾದರೆ ಆರ್ಥಿಕ, ಸಾಮಾಜಿಕ ಸಮಾನತೆ ಬರಬೇಕು. ಬಸವಾದಿ ಶರಣರು ಗಾಂಧಿ ಅಂಬೇಡ್ಕರ್ರು ಸಮಾಜದಲ್ಲಿ ಬದಲಾವಣೆ ತರಲು ಶ್ರಮಿಸಿದರು. ಕಾಯಕ ಮತ್ತು ದಾಸೋಹ ತತ್ವವನ್ನು ಬಸವಾದಿ ಶರಣರು ಪ್ರತಿಪಾದಿಸಿದರು. ಉತ್ಪಾದಿಸಿದ ಸಂಪತ್ತನ್ನು ಎಲ್ಲರೂ ಸಮನಾಗಿ ಹಂಚಿಕೊಳ್ಳಬೇಕೆಂದು ಅನುಭವ ಮಂಟಪದಲ್ಲಿ ತಿಳಿಸಿದ್ದರು. ಬಸವಾದಿ ಶರಣರ ಕಾಲದಲ್ಲಿ ಮಹಿಳೆಯರಿಗೂ, ದುರ್ಬಲವರ್ಗದವರಿಗೂ ಶಿಕ್ಷಣ ಸೇರಿದಂತೆ ಎಲ್ಲ ರಂಗದಲ್ಲಿಯೂ ಸಮಾನ ಅವಕಾಶಗಳನ್ನು ನೀಡಲಾಗಿತ್ತು.
ತಳಸಮುದಾಯಗಳು ಮುಖ್ಯವಾಹಿನಿಗೆ ಬರಬೇಕು ಎಂದು 850 ವರ್ಷಗಳ ಹಿಂದೆ ಸಾರಿದ ಸಮಾನತೆಯ ತತ್ವ ಇಂದಿಗೂ ಸಮರ್ಥವಾಗಿ ಪಾಲನೆಯಾಗುತ್ತಿಲ್ಲ. ಬಸವಾದಿ ಶರಣರು ಕರ್ಮಸಿದ್ಧಾಂತವನ್ನು ಅಲ್ಲಗಳೆದಿದ್ದರು. ಆದ್ದರಿಂದ ವೈಚಾರಿಕ ಹಾಗೂ ವೈಜ್ಞಾನಿಕ ಶಿಕ್ಷಣವನ್ನು ಎಲ್ಲರೂ ಪಡೆಯಬೇಕು. ಇತಿಹಾಸ ತಿಳಿದಿದ್ದರೆ ಮಾತ್ರ ಭವಿಷ್ಯ ಬರೆಯಲು ಸಾಧ್ಯ ಎಂದು ಡಾ.ಅಂಬೇಡ್ಕರ್ ತಿಳಿಸಿದ್ದಾರೆ ಎಂದರು.