ಮುಂದುವರೆದ ಪಿಡಿಒ ವರ್ಗಾವಣೆ ಸರಣಿ: ಶೇ. 25ರಷ್ಟು ದಾಟಿದ ವರ್ಗಾವಣೆ ಪ್ರಮಾಣ !

Shivamogga: ಸರಣಿ ವರ್ಗಾವಣೆ ಪ್ರಕ್ರಿಯೆಯು ರಾಜ್ಯದೆಲ್ಲೆಡೆಯ ಪಿಡಿಒಗಳಲ್ಲಿ (PDO) ಆತಂಕ ಮೂಡಿಸಿದೆ. ಪಿಡಿಒ ಹುದ್ದೆಯನ್ನು ರಾಜ್ಯ ಪದವೃಂದ(ಕೇಡರ್‌)ವಾಗಿ ಪರಿವರ್ತಿಸಿದ ಬಳಿಕ ಉತ್ತರದ ಜಿಲ್ಲೆಗಳಿಂದ ದಕ್ಷಿಣಕ್ಕೆ ಬರುವವರ ಸಂಖ್ಯೆ ಏರಿಕೆಯಾಗಿದೆ. ಶಿಫಾರಸ್ಸು ಮೂಲಕ ತಮ್ಮ ಇಚ್ಚೆಯ ಸ್ಥಳಗಳಿಗೆ ವರ್ಗ ಮಾಡಿಸಿಕೊಂಡಾಗ ಮೂಲ ಸ್ಥಳದಲ್ಲಿರುವವರು ತೊಂದರೆ ಅನುಭವಿಸುತ್ತಿದ್ದಾರೆ. ಬೇರೆಯವರ ಅನುಕೂಲಕ್ಕಾಗಿ ಮತ್ತೊಬ್ಬರಿಗೆ ತೊಂದರೆ ಕೊಡಲಾಗುತ್ತಿದೆ.

ಜುಲೈನಲ್ಲಿ (July) ಶೇ.6 ರಷ್ಟು ಸಾರ್ವತ್ರಿಕ ವರ್ಗಾವಣೆ ಮಾಡುವುದಾಗಿ ಹೇಳಿದ್ದ ಸರಕಾರ, ಇದೂವರೆಗೆ ಶೇಕಡಾ.17 ರಷ್ಟು ಅಂದರೆ 1039 ಪಿಡಿಒಗಳನ್ನು ವರ್ಗ ಮಾಡಿದೆ. ಇದು ಸದ್ಯದ ಮಟ್ಟಿಗೆ ಈ ಸಮಸ್ಯೆ ನಿಲ್ಲುವಂತೆ ಕಾಣುತ್ತಿಲ್ಲ. ಸರಕಾರದ ಬಳಿ ಇನ್ನೂ ಸುಮಾರು 400 ಪಿಡಿಒಗಳ ವರ್ಗಾವಣೆ ಪಟ್ಟಿ ಅನುಮೋದನೆಗೆ ಕಾಯುತ್ತಿದೆಯಂತೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ (Panchayath Raj) ಇಲಾಖೆಯು ಜುಲೈ 3 ರಂದು ಪಿಡಿಒಗಳ ಸಾರ್ವತ್ರಿಕ ವರ್ಗಾವಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು ಜುಲೈ 4 ಮತ್ತು 5 ರಂದು ಮೂರು ಪ್ರತ್ಯೇಕ ಆದೇಶಗಳಲ್ಲಿ 486 ಅಂದರೆ ಶೇಕಡಾ.8 ರಷ್ಟು ಪಿಡಿಒಗಳನ್ನು ವರ್ಗ ಮಾಡಲಾಗಿತ್ತು. ಸೆಪ್ಟೆಂಬರ್‌ 2 ರಿಂದ 11 ರ ವರೆಗೆ ಮೂರು ಪ್ರತ್ಯೇಕ ಆದೇಶಗಳಲ್ಲಿ350 ಪಿಡಿಒಗಳನ್ನು ವರ್ಗಾವಣೆ ಮಾಡಿತ್ತು. ಸೆಪ್ಟೆಂಬರ್‌ 15 ರಿಂದ 21ರ ವರೆಗೆ ಮತ್ತೆ ನಾಲ್ಕು ಪ್ರತ್ಯೇಕ ಆದೇಶಗಳಲ್ಲಿ 209 ಪಿಡಿಒಗಳನ್ನು ವರ್ಗಾವಣೆ ಮಾಡಲಾಗಿದೆ.

ನಿರೀಕ್ಷೆ ಇಲ್ಲದೆ ಬಂದ ವರ್ಗಾವಣೆ ಆದೇಶದಿಂದಾಗಿ ರಾತೋರಾತ್ರಿ ಗಂಟುಮೂಟೆ ಕಟ್ಟಿಕೊಂಡು ಜಿಲ್ಲೆಯನ್ನೆ ಬಿಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ನಾಳೆ ಬರುವ ವರ್ಗಾವಣೆ ಪಟ್ಟಿಯಲ್ಲಿ ನನ್ನ ಹುದ್ದೆಯ ಸ್ಥಾನಕ್ಕೆ ನಮ್ಮ ಸ್ಥಳಕ್ಕೆ ಬೇರೆ ಯಾರನ್ನಾದರೂ ನಿಗದಿಪಡಿಸುತ್ತಾರೆ ಮತ್ತು ನಮ್ಮ ಹೆಸರೆ ನಮೂದಿಸಿದ್ದಾರೋ ಎಂಬ ಭಯದಲ್ಲೆ ಕೆಲಸ ಮಾಡುವಂತಾಗಿದೆ. ಮತ್ತೊಂದು ಕಡೆ ಇವತ್ತಿನ ಪಟ್ಟಿಯಲ್ಲಿ ಯಾರು ಎಲ್ಲಿಗೆ ಹೋಗಿದ್ದಾರೆ, ಯಾರು ಅತಂತ್ರರಾಗಿದ್ದಾರೆ ಎಂದು ನೋಡುವ ಕುತೂಹಲ ಸಹ ಹೆಚ್ಚಾಗಿದೆ.

ಇದರಿಂದಾಗಿ ಇಲಾಖೆ ವರ್ಗಾವಣೆ ಆದೇಶ ಹೊರಡಿಸುತ್ತಿದ್ದಂತೆ ಪಟ್ಟಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಪ್ರತಿ ವರ್ಗಾವಣೆ ಆದೇಶದಲ್ಲೂ 20 ರಿಂದ 60 ಪಿಡಿಒಗಳ ಪಟ್ಟಿ ಬರುತ್ತಿದ್ದು ಅದರೊಳಗೆ ಏಳೆಂಟು ಪಿಡಿಒಗಳು ಸ್ಥಳ ಇಲ್ಲದೆ ಅತಂತ್ರರಾಗುತ್ತಿದ್ದಾರೆ. ಅಂತಹ ಪಿಡಿಒಗಳು ಆಯಾ ಜಿಲ್ಲಾಪಂಚಾಯಿತಿ ಸಿಇಒಗಳಲ್ಲಿ (CEO) ವರದಿ ಮಾಡಿಕೊಳ್ಳುವಂತೆ ಸೂಚಿಸಲಾಗುತ್ತಿದೆ. ಈ ರೀತಿಯಾಗಿ ರಾಜ್ಯದಲ್ಲಿ ಈಗ 60ಕ್ಕೂ ಹೆಚ್ಚು ಪಿಡಿಒಗಳಿಗೆ ನಿರ್ದಿಷ್ಟ ಕೆಲಸವಿಲ್ಲದೆ ಪ್ರತಿದಿನ ಜಿಲ್ಲಾಪಂಚಾಯಿತಿಗೆ ಬಂದು ಹೋಗುವಂತಾಗಿದೆ.

480- ಸಾರ್ವತ್ರಿಕ ವರ್ಗಾವಣೆಯಾದ ಪಿಡಿಒಗಳು
6000- ರಾಜ್ಯದಲ್ಲಿರುವ ಒಟ್ಟು ಪಿಡಿಒಗಳು
1039- ಒಟ್ಟು ವರ್ಗಾವಣೆ
559- ಆನಂತರದ ಸರಣಿ ವರ್ಗಾವಣೆ
400- ಅನುಮೋದನೆ ಹಂತದಲ್ಲಿವೆ

ಬೇಸರದ ಸಂಗತಿ ಎಂದರೆ ಜುಲೈನ ಸಾರ್ವತ್ರಿಕ ವರ್ಗಾವಣೆಯಲ್ಲಿ ಮನವಿ ಸಲ್ಲಿಸಿ ಬಹಳ ಕಷ್ಟಪಟ್ಟು ವರ್ಗಾವಣೆ ಮಾಡಿಸಿಕೊಂಡು ಬಂದವರನ್ನೂ ಕೇವಲ ಎರಡು ತಿಂಗಳಲ್ಲಿ ಜಾಗ ಖಾಲಿ ಮಾಡಿಸಲಾಗುತ್ತಿದೆ ಎಂದು ಆರೋಪ ಕೇಳಿ ಬರುತಿದೆ ಕೆಲವೆಡೆ ಆರು ಅಥವಾ ವರ್ಷದಿಂದ ಈಚೆಗೆ ವರ್ಗಾವಣೆ ಮಾಡಿಸಿಕೊಂಡು ಬಂದವರನ್ನೂ ಬೇರೆಗೆ ಕಡೆ ಕಳುಹಿಸಲಾಗುತ್ತಿದೆ. ಹೀಗಾಗಿ ನೂರಾರು ಪಿಡಿಒಗಳು ವರ್ಗಾವಣೆ ಆದೇಶಕ್ಕೆ ತಡೆ ಕೋರಿ ಕೆಎಟಿಗೆ (KAT) ಮೊರೆ ಹೋಗಿದ್ದಾರೆ.

ಬಹಳ ವರ್ಷಗಳ ಬಳಿಕ ತಮ್ಮ ತಮ್ಮ ಊರಿಗೆ ಹೋಗುವ ಅವಕಾಶ ಸಿಕ್ಕಿದ ಸಂಭ್ರಮದಲ್ಲಿ ಒಂದೂವರೆ ತಿಂಗಳ ಹಿಂದಷ್ಟೆ ಶಿವಮೊಗ್ಗಕ್ಕೆ (Shimogga) ಬಂದಿದ್ದೆ. ಮಕ್ಕಳಿಗೆ ಶಾಲೆಗೆ ಸೇರಿಸಲು ವ್ಯವಸ್ಥೆ ಮಾಡಿಕೊಂಡು ಮನೆ ಖಾಲಿ ಮಾಡಲು ಸಿದ್ಧತೆ ನಡೆಸಿರುವಾಗ ಮತ್ತೆ ಬೇರೆ ಜಿಲ್ಲೆಗೆ ವರ್ಗ ಮಾಡಿದ್ದಾರೆ. ಕೆಲಸ ಬಿಟ್ಟು ಹೋಗುವಷ್ಟು ಬೇಸರವಾಗಿದೆ ಎಂದು
ಹೆಸರು ಬಹಿರಂಗಪಡಿಸಲಿಚ್ಚಿಸದ ಪಿಡಿಒ ತಿಳಿಸಿದ್ದಾರೆ.

ಮೇಘಾ ಮನೋಹರ ಕಂಪು

Exit mobile version