`ಡೊನೇಷನ್‌’ ಹೆಸರಿನಲ್ಲಿ ಮುಗ್ದ ಜನರನ್ನು ಯಾಮಾರಿಸುತ್ತಿದ್ದ ಗ್ಯಾಂಗ್ ಅನ್ನು ಬಯಲಿಗೆಳೆದ ವಿಜಯ ಟೈಮ್ಸ್ ತಂಡ!

coverstory

ಕವರ್ ಸ್ಟೋರಿ ತಂಡ ಪ್ರತಿ ವಾರ ಒಂದಲ್ಲ ಒಂದು ಹೊಸ ಭ್ರಷ್ಟ ಕೆಲಸಗಳನ್ನು ಬಯಲಿಗೆ ತರುವಲ್ಲಿ ಯಶಸ್ವಿಯಾಗಿದೆ. ಅದೇ ಸಾಲಿನಲ್ಲಿ ಇಂದು ಅನಾಥಾಶ್ರಮ, ವೃದ್ಧಾಶ್ರಮ ಹೆಸರಿನಲ್ಲಿ ನಡೆಯುತ್ತಿರುವ ದಂಧೆ ಅಥವಾ ಮೋಸವನ್ನು ಬಯಲು ಮಾಡಿದೆ. ಈ ವಾರ ಕವರ್ ಸ್ಟೋರಿ ತಂಡ ಯಾರು ಊಹಿಸಲಾಗದ ದಂಧೆಯಾ ಬಣ್ಣವನ್ನು ಬಟ ಬಯಲು ಮಾಡಿದೆ. ನಾವು ನೀವು ಸಹ ಇಂತಹ ದಂಧೆಗೆ ಮೋಸ ಹೋಗಿದ್ದೇವೆ. ಅನಾಥಾಲಯ ಹೆಸರಲ್ಲಿ ಬಟ್ಟೆ, ಅಕ್ಕಿ, ಹಣ ಸಂಗ್ರಹಿಸುತ್ತಾರೆ. ಆದರೆ ಅದು ಯಾವುದು ಅನಾಥಾಶ್ರಮಕ್ಕೆ ಸೇರಿರೋದಿಲ್ಲ. ಆಶ್ರಮದ ಹೆಸರಲ್ಲಿ ಮಾಡ್ತಾರೆ ದಂಧೆ. ಅಸಲಿಗೆ ಈ ದಂಧೆ ಏನೂ? ಈ ದಂಧೆ ಯಾವ ರೀತಿ ನಡೆಯುತ್ತೆ? ಕವರ್ ಸ್ಟೋರಿ ತಂಡ ಈ ದಂಧೆಯನ್ನು ಪತ್ತೆ ಹಚ್ಚಿದ್ದು ಹೇಗೆ? ಜನರ ಒಳ್ಳೆತನಕ್ಕೆ ಮೋಸ ಮಾಡಿದ್ದು ಹೇಗೆ ಅನ್ನೋ ಇಂಟ್ರೆಸ್ಟಿಂಗ್ ಸ್ಟೋರಿ ಹೇಳ್ತೀವಿ ಕೇಳಿ.

ವಿಜಯ ಟೈಮ್ಸ್ನ ಕವರ್ ಸ್ಟೋರಿ ತಂಡಕ್ಕೆ ಈ ದಂಧೆಯ ಬಗ್ಗೆ ಮಾಹಿತಿ ತಿಳಿಯಿತು. ಮೊದಲು ಈ ದಂಧೆ ನಿಜವಾಗಿಯೂ ನಡೆಯುತಿದೆಯಾ ಎಂದು ವಿಚಾರಿಸಿದೆವು. ಆಗ ನಮಗೆ ರೋಚಕ ವಿಚಾರಗಳು ತಿಳಿದು ಬಂದವು. ಈ ಗ್ಯಾಂಗ್‌ ಹೇಗೆ ಕೆಲಸ ಮಾಡುತ್ತೆ, ಜನರಿಗೆ ಹೇಗೆ ಟೋಪಿ ಹಾಕ್ತಾರೆ ಅನ್ನೋದನ್ನ ಅಧ್ಯಯನ ಮಾಡಿ ರಹಸ್ಯ ಕಾರ್ಯಾಚರಣೆಗೆ ಇಳಿದ್ವಿ. ನಮ್ಮ ಕವರ್ ಸ್ಟೋರಿ ತಂಡದ ಒಬ್ಬರು ಆ ದಂಧೆ ಮಾಡುವವರನ್ನು ಪ್ರತಿ ದಿನ ಹಿಂಬಾಲಿಸಿದ್ದರು. ಹೇಗೆ ಅವರು ಮನೆ ಮನೆಗೆ ಹೋಗಿ ಅಕ್ಕಿ, ಬಟ್ಟೆ ಇನ್ನಿತರ ವಸ್ತುಗಳನ್ನ ಸಂಗ್ರಹಿಸಿತ್ತಾರೆ. ಸಂಗ್ರಹಿಸಿದ ವಸ್ತುಗಳನ್ನ ಎಲ್ಲಿ ತೆಗೆದುಕೊಂಡು ಹೋಗ್ತಾರೆ? ನಿಜವಾಗಿಯೂ ಅವರು ಈ ವಸ್ತುಗಳನ್ನ ಆಶ್ರಮಕ್ಕೆ ಕೊಡ್ತಾರಾ ಎಂದು ಎಲ್ಲ ಅಂಕಿ ಅಂಶಗಳನ್ನು ನೋಡಿಕೊಂಡು ಸಾಕ್ಷಿಗಾಗಿ ವಿಡಿಯೋವನ್ನು ಮಾಡಿಕೊಂಡೆವು.

ಈ ದಂಧೆ ಮಾಡುವವರ ಮನೆಗೆ ಬಟ್ಟೆ ಖರೀದಿ ಮಾಡೋ ರೀತಿ ಹೋಗಿ, ಎಲ್ಲವನ್ನು ಪರಿಶೀಲಿಸಿದೆವು. ಎಲ್ಲವನ್ನು ಪರಿಶೀಲಿಸಿದ ನಂತರ ಮತ್ತು ಎಲ್ಲ ರೀತಿಯ ಸಾಕ್ಷಿ ಸಿಕ್ಕ ನಂತರ ಆ ದಂಧೆ ಮಾಡುವವರ ಬಣ್ಣ ಬಯಲು ಮಾಡಲು ಹೊರಟಿದೆವು. ಈ ದಂಧೆ ಅನಾಥರಿಗೆ, ನಿರ್ಗತಿಕರಿಗೆ ಸಹಾಯ ಮಾಡ್ತೀವಿ ಅಂತ ಹೇಳಿ ಜನರಲ್ಲಿ ಹಣ, ಬಟ್ಟೆ, ಬರೆ ಸಂಗ್ರಹಿಸಿ ಸ್ವಾಹಾ ಮಾಡೋದು. ಈ ರೀತಿ ಜನರ ಒಳ್ಳೇ ತನಕ್ಕೆ ಮೋಸ ಮಾಡೋ ದಂಧೆ ರಾಜಧಾನಿ ಬೆಂಗಳೂರಿನಲ್ಲಿ ಭಯಾನಕವಾಗಿ ಹಬ್ಬಿದೆ. ಪೌಳಿದೊಡ್ಡಿಯ ಶಿವರಾಜು ಹಾಗೂ ಜಯಲಕ್ಷ್ಮಿ ಎಂಬುವರು ಈ ದಂಧೆಯ ಮುಖ್ಯಸ್ತರು. ಈ ತಂಡ ಮಾರುತಿ ವ್ಯಾನ್ ಒಂದರಲ್ಲಿ ಹಳ್ಳಿ ಹಳ್ಳಿ, ಗಲ್ಲಿ-ಗಲ್ಲಿಗಳಲ್ಲಿ ಸುತ್ತಾಡುತ್ತೆ. ಜನರಲ್ಲಿ ನಾವು ಅನಾಥಾಶ್ರಮದಿಂದ ಬಂದಿದ್ದೇವೆ. ನಮಗೆ ಹಣ, ಅಕ್ಕಿ, ಬಟ್ಟೆ, ರಾಗಿ, ಮಸಾಲೆ ಪುಡಿ, ತೆಂಗಿನ ಕಾಯಿ ಕೊಡಿ ಅಂತ ಬೇಡುತ್ತೆ. ಮುಗ್ದ ಜನರ ಅನುಕಂಪ ಗಳಿಸಿ ಎಲ್ಲಾ ಸಾಮಾಗ್ರಿ ಸಂಗ್ರಹಿಸುತ್ತೆ. ಅದನ್ನು ಒಂದು ಗೋಡೌನ್‌ನಲ್ಲಿ ಸಂಗ್ರಹಿಸಿ ಆ ಬಳಿಕ ಮಾರಾಟ ಮಾಡುತ್ತೆ.

ನಾವೇ ಅವರ ಬಳಿ ಬಟ್ಟೆ ವ್ಯಾಪಾರಕ್ಕೆ ಹೋದಾಗ ಅವರು ನಮಗೆ ಸೆಕೆಂಡ್‌ ಹ್ಯಾಂಡ್‌ ಬಟ್ಟೆಗಳನ್ನು ಮಾರಾಟ ಮಾಡಿದ್ರು.
ಈ ರೀತಿ ಅನಾಥಶ್ರಮ ಹೆಸರಿನಲ್ಲಿ ದಂಧೆ ಮಾಡಿ ಜನರಿಗೆ ಮೋಸ ಮಾಡೋ ಈ ಗ್ಯಾಂಗ್ ನ ಬಣ್ಣ ಬಯಲು ಮಾಡಲು ಹೊರಟಾಗ ನಾವು ತಲುಪಿದ್ದು, ರಾಮನಗರ ಜಿಲ್ಲೆಯ ಚನ್ನಪಟ್ಟಣದ ಪೌಳಿ ದೊಡ್ಡಿಯ ಗ್ರಾಮಕ್ಕೆ. ಅದು ಒಂದು ಪ್ರಶಾಂತವಾದ ಗ್ರಾಮ. ಅಲ್ಲಿ ದಂಧೆ ಮಾಡುವ ಜನರನ್ನು ನೋಡಿದರೆ ನಮಗೆ ನಂಬಲು ಸಾದ್ಯವಾಗಲಿಲ್ಲ. ಆದರೆ ಅವರ ಮನೆಯಲ್ಲಿ ಇತ್ತು ರಾಶಿ ರಾಶಿ ಬಟ್ಟೆ, ಅಕ್ಕಿ. ಆ ದಂಧೆ ಮಾಡುವವರನ್ನು ರೆಡ್ ಹ್ಯಾಂಡೆಡ್ ಆಗಿ ಹಿಡಿಯಲು ಆ ಗ್ರಾಮದ ಬಳಿ ಕಾದು ಕುಂತೆವು. ಇವರು ಅಕ್ಕಿ, ರಾಗಿ ಇತರೆ ದವಸ-ಧಾನ್ಯಗಳನ್ನು ದಿನಸಿ ಅಂಗಡಿಗಳಿಗೆ ಮಾರಾಟ ಮಾಡೋದು ಕೂಡ ರೆಡ್‌ ಹ್ಯಾಂಡ್‌ ಆಗಿ ನಮ್ಮ ರಹಸ್ಯ ಕಾರ್ಯಾಚರಣೆಯ ಕಣ್ಣಿಗೆ ಸರೆಯಾಯಿತು.


ಇದು ದೊಡ್ಡ ಮಾಫಿಯಾ! ಇಂಥಾ ನೂರಾರು ತಂಡಗಳು, ಸಾವಿರಾರು ಕಡೆ ಕೆಲಸ ಮಾಡ್ತಿವೆ. ಜನರಿಂದ ಕೋಟ್ಯಾಂತರ ರೂಪಾಯಿ ಲೂಟಿ ಮಾಡ್ತಿದ್ದಾರೆ. ಈ ದಂಧೆಗೆ ಒಂದು ಬ್ರೇಕ್‌ ಹಾಕ್ಬೇಕು ಅಂತ ನಾವು ಈ ಗ್ಯಾಂಗ್ ಮೇಲೆ ದಾಳಿ ಮಾಡಲು ನಿರ್ಧರಿಸಿದೆವು. ಚನ್ನಪಟ್ಟಣ ಪೂರ್ವ ವಿಭಾಗದ ಪೊಲೀಸರಿಗೆ ಮಾಹಿತಿ ಕೊಟ್ಟು, ಅವರ ಸಹಾಯದಿಂದ ನಾವು ಈ ಗ್ಯಾಂಗ್‌ನ ಗೋಡೌನ್‌ ಮತ್ತು ಮನೆಗಳ ಮೇಲೆ ದಾಳಿ ಮಾಡಲು ರೆಡಿಯಾದೆವು. ಅವರ ಮನೆ ಮೇಲೆ ದಾಳಿ ಮಾಡಿದಾಗ ನಮಗೆ ಸಿಕ್ಕಿತು ರಾಶಿ ರಾಶಿ ಬಟ್ಟೆ, ಅಕ್ಕಿ, ರಾಗಿ. ಅದನ್ನು ನಾವು ಪ್ರಶ್ನಿಸಿದಾಗ ನಮ್ಮ ಮೇಲೆ ಜಗಳ ಮಾಡಿದರು. ಕೇರಳಾದಿಂದ ಸೆಕೆಂಡ್‌ ಹ್ಯಾಂಡ್ ಮಾಲ್‌ ಬರುತ್ತೆ ಎಂದು ವಾದ ಮಾಡಿದರು. ಆದರೆ ನಮಗೆ ಸಿಕ್ಕ ಸಾಕ್ಷಿಗಳ ಮುಂದೆ ಅವರ ವಾದ ನಡೆಯಲಿಲ್ಲ. ಈ ದಂಧೆ ಮಾಡುವವರಿಗೆ ಜನರ ಕರುಣೆಯೇ ಮುಖ್ಯ ಬಂಡವಾಳ. ಊರೂರಿಗೆ ಹೋಗಿ ಜನರಿಗೆ ಮೋಸ ಮಾಡಿ ವಸ್ತುಗಳನ್ನ ಸಂಗ್ರಹಿಸುತ್ತಾರೆ. ಆದರೆ ಇವರು ಮಾಡೋ ದಂಧೆ ಬಗ್ಗೆ ಊರ ಮಂದಿಗೆ ಮಾಹಿತಿಯೇ ಇಲ್ಲ. ಒಂದಲ್ಲ, ಎರಡಲ್ಲ ನಾಲ್ಕೈದು ಆಶ್ರಮದ ಹೆಸರು ಹೇಳಿ ದಂಧೆ ಮಾಡುತ್ತಾರೆ.


ಈ ದಂಧೆಯಲ್ಲಿ ಬಂದ ಹಣದಲ್ಲಿ ಕುಡಿದು ಮಜಾ ಮಾಡ್ತಾರೆ. ಅಷ್ಟೆ ಅಲ್ಲ, ಅಕ್ಕ-ಪಕ್ಕದ ಮನೆಯವರಿಗೂ ಕುಡಿದು ಕಾಟ ಕೊಡುತ್ತಾರೆ. ಈ ವಿಚಾರಗಳ ಮೇಲೆ ಎರಡು ಮೂರು ಬಾರಿ ಪೊಲೀಸ್ ಠಾಣೆಗೂ ಹೋಗಿದ್ದಾರೆ ಎಂದು ಅವರ ನಿವಾಸದ ಬಳಿ ಇರುವವರು ತಿಳಿಸಿದರು. ಒಂದು ಆಶ್ರಮದ ಹೆಸರು ಹೇಳಿ ಹಣ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಇವರಿಗೆ ಅನಾಥಾಶ್ರಮದವರೇ ಸಹಾಯ ಮಾಡುತ್ತಿದ್ದಾರೆ ಎಂದರೇ ನೀವು ನಂಬುತ್ತೀರಾ? ನಂಬಲೇಬೇಕು. ಅನಾಥಾಶ್ರಮದವರಿಂದಲೇ ಮೋಸಕ್ಕೆ ಕುಮ್ಮಕ್ಕು. ಆಶ್ರಮಕ್ಕೆ ತಿಂಗಳಿಗೆ ಇಂತಿಷ್ಟು ಅಂತ ಕಮಿಷನ್‌ ಕೊಡ್ತಾರೆ. ಪೊಲೀಸರಿಗೆ ಅವರು ಮಾಡಿದ ಎಲ್ಲಾ ಮೋಸವನ್ನು ತೋರಿಸಿದ್ದೆವು. ಆಗ ಈ ದಂಧೆ ಮಾಡೋ ಶಿವರಾಜು ಹಾಗೂ ಜಯಲಕ್ಷ್ಮಿ ಅವರು ಕೊನೆಗೆ ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡರು.

ಈ ರೀತಿ ತಪ್ಪನ್ನು ಮುಂದೆಂದೂ ಮಾಡುವುದಿಲ್ಲ ಎಂದು ಅವರ ತಪ್ಪಿನ ಅರಿವು ಮಾಡಿಕೊಂಡರು. ತಪ್ಪಾಯ್ತು ಅಂತ ಕ್ಷಮೆ ಕೇಳಿದರು. ಬೆಂಗಳೂರಲ್ಲಿ ಇಂಥ ನೂರಾರು ಗ್ಯಾಂಗ್‌ಗಳಿವೆ. ಹೀಗೆ ದಾನದ ಹೆಸರಲ್ಲಿ ಮೋಸ ಮಾಡೋ ಒಂದು ಗ್ಯಾಂಗ್ ಕವರ್‌ಸ್ಟೋರಿ ಬಲೆಗೆ ಸದ್ಯಕ್ಕೆ ಬಿದ್ದಿದೆ. ಇಂಥ ಇನ್ನು ಅನೇಕ ಗ್ಯಾಂಗ್‌ಗಳು ನಮ್ಮ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈ ಗ್ಯಾಂಗ್‌ಗಳ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು. ಇಂಥ ಗ್ಯಾಂಗ್‌ ಕಂಡ ತಕ್ಷಣ ಪ್ರಶ್ನಿಸಿ, ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ವಿಜಯ ಟೈಮ್ಸ್ ತಂಡ ಓದುಗರಲ್ಲಿ ವಿನಂತಿಸಿಕೊಳ್ಳುತ್ತದೆ.

Exit mobile version