12 ಗಂಟೆ ತನಕ ಮಾತ್ರ ದಿನಸಿ ಅಂಗಡಿ ತೆರೆಯಲು ಅವಕಾಶ : ಕಮಿಷನರ್‌

ಬೆಂಗಳೂರು: ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ 8ರಿಂದ ಲಾಕ್‌ಡೌನ್‌ ಆರಂಭವಾಗಿದ್ದು, ಬೆಳ್ಳಗೆ 5 ಗಂಟೆಯಿಂದ 12 ಗಂಟೆ ತನಕ ಮಾತ್ರ ದಿನಸಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ತಿಳಿಸಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬೆಂಗಳೂರು ಪೊಲೀಸ್ ಕಮಿಷನರ್, ಸಾರ್ವಜನಿಕರು ಲಾಕ್ ಡೌನ್ ಬಗ್ಗೆ ಜಾಗೃತರಾಗಿರಬೇಕು, ಸರ್ಕಾರದ ಆದೇಶದಂತೆ ಲಾಕ್ಡೌನ್ ಶುರುವಾಗಿದೆ. ಬೆಳ್ಳಗೆ 5 ಗಂಟೆಯಿಂದ 12 ಗಂಟೆ ತನಕ ಮಾತ್ರ ದಿನಸಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿದೆ. 12 ಗಂಟೆಯ ನಂತರ ಯಾವುದೇ ಕಾರಣಕ್ಕೂ ಅಂಗಡಿಗಳು ತೆಗೆಯಲು ಅವಕಾಶವಿಲ್ಲ ಎಂದು ಹೇಳಿದರು.

ಫುಡ್ ಡೆಲಿವರಿಯವರು ರಾತ್ರಿ 8ರ ವರೆಗೂ ತಮ್ಮ ಸೇವೆ ನಡೆಸಬಹುದು, ಮೆಡಿಕಲ್ ಶಾಪ್​ಗಳು ಮಾತ್ರ ರಾತ್ರಿವರೆಗೂ ಅನುಮತಿಯಿದೆ. ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಹೊಂದಿಕೊಂಡಿರುವ ಜಿಲ್ಲೆಗಳಿಗೆ ನಗರಗಳಿಗೆ ಬಂದು ಹೋಗಲು‌ ವಿನಾಯಿತಿ ನೀಡಲಾಗಿದೆ. ಅಲ್ಪಕಾಲದ ಲಾಕ್ ಡೌನ್ ಇರುವುದರಿಂದ ಯಾವುದೇ ಪಾಸ್ ವ್ಯವಸ್ಥೆ ಇರುವುದಿಲ್ಲ. ನಗರದಿಂದ ಹೊರಗೆ ಹೋಗಬಹುದು. ರಾಜ್ಯದ ಬೇರೆ ಭಾಗದಿಂದ ನಗರಕ್ಕೆ ಬರುವವರು ಸೇವಾ ಸಿಂದುವಿನಲ್ಲಿ ಅನುಮತಿ ಪಡೆದಿರಬೇಕು. ವಿಮಾನ ನಿಲ್ದಾಣದ ರಸ್ತೆಯ ಫ್ಲೈಒವರ್ ಬಿಟ್ಟು ಎಲ್ಲ ಫ್ಲೈ ಒವರ್ ಗಳು ಬಂದ್ ಆಗಲಿವೆ. ಏರ್ಪೋರ್ಟ್ ಮತ್ತು ರೈಲ್ವೆಗೆ ಟ್ಯಾಕ್ಸಿ ಸೇವೆ ಇರುತ್ತೆ ಎಂದು ಆಯುಕ್ತರು ಹೇಳಿದರು.

ಸಾರ್ವಜನಿಕರು ಸೇವೆ ಸಲ್ಲಿಸಿ

ಕಳೆದ ಬಾರಿ ಲಾಕ್‌ಡೌನ್‌ ಸಂದರ್ಭದಲ್ಲಿ ಪೊಲೀಸ್‌ ಸಿಬ್ಬಂದಿಗಳ ಕೊರತೆ ಕಾಡಿತ್ತು, ಅಲ್ಲದೇ ಸಿಬ್ಬಂದಿ ಬಹಳಷ್ಟು ಕೆಲಸ ಮಾಡಿ ಸೋಂಕಿಗೆ ತುತ್ತಾಗಿದ್ದರೂ ಕೂಡಾ. 8 ಮಂದಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಈ ಬಾರಿ ಸಾರ್ವಜನಿಕ ಸಹಕಾರ ಮುಖ್ಯ ಎಂದಿರುವ ಆಯುಕ್ತರು, ಬೆಂಗಳೂರು ಮಟ್ಟದಲ್ಲಿ ಸಿವಿಲ್ ಡಿಫೆನ್ಸ್ ಬಳಕೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ. ಸೇವೆಗೆ ಸೇರಲಿಚ್ಚಿಸುವವರು ಠಾಣೆಯ ಕೆಲಸ, ಚೆಕ್ ಪಾಯಿಂಟ್​ಗಳಲ್ಲಿ ಸಿಬ್ಬಂದಿ ಜೊತೆ ಕೆಲಸ ಮಾಡ್ತಾರೆ. ಸಾರ್ವಜನಿಕರ ಸೇವೆಗೆ ಯಾವುದೇ ಸಂಬಳ ಇರುವುದಿಲ್ಲ. ಸಾರ್ವಜನಿಕ ಸೇವೆಯನ್ನು ವಾರಕ್ಕೆ 10 ಗಂಟೆ ಕಾಲ ಇರುತ್ತೆ. 18 ರಿಂದ 40 ವರ್ಷದ ಜನರನ್ನು ಬಳಸಿಕೊಳ್ಳಲಾಗುವುದು. ಅವರಿಗೆ ಹ್ಯಾಟ್ ಕೊಡಲಾಗುವುದು. ಆ ಸೇವೆ ಮಾಡಬಯಸುವವರು ಆನ್​ಲೈನ್​ನಲ್ಲೇ ಅಪ್ಲಿಕೇಶನ್ ಹಾಕಬಹುದು. ವಾಲೆಂಟಿಯರ್ಸ್ ಸೇವೆಯನ್ನು ನಗರದಲ್ಲಿ ಮೊಟ್ಟಮೊದಲ ಬಾರಿಗೆ ಬಳಸಿಕೊಳ್ಳುತ್ತಿದ್ದೇವೆ. ಇವರಿಗೆ ಯಾವುದೇ ಆಯುಧ ಕೊಡುವುದಿಲ್ಲ ಎಂದು ತಿಳಿಸಿದರು.

Exit mobile version