ಎಸಿ ಬಸ್ಸಿನಲ್ಲಿ ಯಾತ್ರೆ ಮಾಡಿದ್ರೆ ಜನರ ಸಮಸ್ಯೆ ಅರ್ಥವಾಗೋಲ್ಲ: ರಾಗಾ ವಿರುದ್ದ ಮಿತ್ರಪಕ್ಷ ಸಿಪಿಎಂ ಕಿಡಿ!

Tiruvanthapura: ಕಾಂಗ್ರೆಸ್ ಹಾಗೂ ಎಡಪಕ್ಷ ಸಿಪಿಎಂ ನಡುವಿನ ವಾಕ್ಸಮರ ತಾರಕಕ್ಕೇರಿದ್ದು, ರಾಹುಲ್ ಗಾಂಧಿ (Rahul Gandhi) ಅವರ ವಿರುದ್ದ ಇದೀಗ ಸಿಪಿಎಂ ನಾಯಕರು ತೀವ್ರ ಟೀಕಾಪ್ರಹಾರ ನಡೆಸಿದ್ದಾರೆ. ಈ ಮಧ್ಯೆ ರಾಹುಲ್ ಗಾಂಧಿ ಅವರ ಡಿಎನ್ಎ ಪ್ರಶ್ನಿಸಿ ಸಿಪಿಎಂ ಬೆಂಬಲಿತ ಪಕ್ಷೇತರ ಶಾಸಕ ಅನ್ವರ್ ವಿವಾದಾತ್ಮಕ ಹೇಳಿಕೆ ನೀಡಿರುವುದು ತೀವ್ರ ವಿವಾದಕ್ಕೆ ಕಾರಣವಾಗಿದೆ.

ಕೇರಳದ (Kerala) ಮಲಪ್ಪುರಂನ ಸಿಪಿಎಂ ಪಕ್ಷದ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿರುವ ಶಾಸಕ ಅನ್ವರ್, ಕಾಂಗ್ರೆಸ್ ನಾಯಕ ರಾಹುಲ್ ಅವರಿಗೆ ಗಾಂಧಿ ಹೆಸರನ್ನು ಬಳಸುವ ಹಕ್ಕು ಇಲ್ಲ. ಜವಾಹರಲಾಲ್ ನೆಹರೂ ಅವರ ಕುಟುಂಬದಲ್ಲಿ ರಾಹುಲ್ ಗಾಂಧಿ ಜನಿಸಿದ್ದಾರಾ ಎಂಬುದರ ಬಗ್ಗೆ ಅನುಮಾನವಿದೆ. ಹೀಗಾಗಿ ರಾಹುಲ್ ಗಾಂಧಿ ಅವರ ಡಿಎನ್ಎ (DNA) ಪರೀಕ್ಷಿಸಬೇಕು ಎಂದಿದ್ದಾರೆ. ಅನ್ವರ್ ನೀಡಿರುವ ಹೇಳಿಕೆ ಕುರಿತು ಕಿಡಿಕಾರಿರುವ ಕಾಂಗ್ರೆಸ್, ಈ ಹೇಳಿಕೆ ಹಿಂದೆ ಮುಖ್ಯಮಂತ್ರಿ ಪಿಣರಾಯ್ ಅವರ ಪಾತ್ರವಿದೆ ಎಂದು ಆರೋಪಿಸಿದೆ. ಕೂಡಲೇ ಅನ್ವರ್ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಕೋರಿ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

ಇನ್ನು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ (Pinarayi Vijayan) ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ವ್ಯಂಗ್ಯವಾಡಿದ ಬಳಿಕ ಈ ಹೇಳಿಕೆ ಬಂದಿದೆ. ಇನ್ನು ಪಿಣರಾಯಿ ವಿಜಯನ್ ಅವರು ಅನ್ವರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ದೇಶದ ಉದ್ದಗಲಕ್ಕೂ ಯಾತ್ರೆ ನಡೆಸಿ, ನಡೆದಾಡಿದ್ದರಿಂದ ರಾಹುಲ್ ಗಾಂಧಿ ಜ್ಞಾನ ಸಂಪಾದಿಸಿರಬಹುದೆಂದು ನಾನು ಭಾವಿಸಿದ್ದೆ. ಆದರೆ ಕೇರಳದಲ್ಲಿ ನೀಡಿದ ಅವರ ಹೇಳಿಕೆ ರಾಜಕೀಯ ನಾಯಕನಿಗೆ ಶೋಭೆ ತರುವುದಿಲ್ಲ. ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್ ಗಾಂಧಿ ಅವರು ಬಿಜೆಪಿಗೆ ಅವರು ಸಹಾಯ ಮಾಡಬಾರದು ಎಂದು ಟೀಕಿಸಿದ್ದರು.

ಇಂಡಿಯಾ ಒಕ್ಕೂಟದ ಮಿತ್ರಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಸಿಪಿಐಂ (CPM) ಕೇರಳದಲ್ಲಿ ಪರಸ್ಪರ ವಾಗ್ದಾಳಿ ನಡೆಸುತ್ತಿವೆ. ಕಳೆದ ವಾರ ಕೇರಳದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಕೇರಳದ ಮುಖ್ಯಮಂತ್ರಿ ಜೈಲಿಗೆ ಹೋಗಿಲ್ಲ ಅಂದರೆ ಅರ್ಥ ಏನು? ನಾನು ಬಿಜೆಪಿ ಮೇಲೆ 24×7 ದಾಳಿ ಮಾಡುತ್ತಿದ್ದೇನೆ. ಆದರೆ ಕೇರಳದ ಸಿಎಂ ನನ್ನ ಮೇಲೆ 24×7 ದಾಳಿ ನಡೆಸುತ್ತಿದ್ದಾರೆ ಎಂದು ಕಿಡಿಕಾರಿದ್ದರು.

ಈ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಎಲ್ಡಿಎಫ್ (LDF) ಸಮನ್ವಯಕಾರ ಇಪಿ ಜಯರಾಜನ್, ನಮ್ಮ ನಾಯಕ ಪಿಣರಾಯಿ ವಿಜಯನ್ ಅವರು ಬೆಳ್ಳಿಯ ಚಮಚದೊಂದಿಗೆ ಹುಟ್ಟಿದ ವ್ಯಕ್ತಿಯಲ್ಲ, ವಿದೇಶದಿಂದ ಆಮದು ಮಾಡಿದ ಹಾಲು ಕುಡಿದು ಬೆಳೆದ ವ್ಯಕ್ತಿಯೂ ಅಲ್ಲ. ಎಸಿ ಬಸ್ಸಿನಲ್ಲಿ ಯಾತ್ರೆ ನಡೆಸಿದರೆ ಜನರ ಸಮಸ್ಯೆ ಅರ್ಥವಾಗುವುದಿಲ್ಲ. ಇನ್ನು ನ್ಯಾಷನಲ್ ಹೆರಾಲ್ಡ್ ಕೇಸ್ನಲ್ಲಿ (National Herald Case) ರಾಹುಲ್ ಗಾಂಧಿ ಬಂಧನ ಯಾಕೆ ಆಗಲಿಲ್ಲ? ಎಂದು ಪ್ರಶ್ನಿಸಿ ತಿರುಗೇಟು ನೀಡಿದ್ದರು.

Exit mobile version