ಬೆಲೆ‌ಏರಿಕೆ ವಿರುದ್ಧ ಜೆಡಿಎಸ್ ಪ್ರತಿಭಟನೆಗೆ ಅನುಮತಿ ನಿರಾಕರಣೆ: ನಮ್ಮ ಹೋರಾಟ ಹತ್ತಿಕ್ಕುವ ಪ್ರಯತ್ನ; ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ಕಿಡಿ

ಬೆಂಗಳೂರು,ಜೂ.28: ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಗೆ ಅನುಮತಿ ನೀಡದ ಸರ್ಕಾರದ ವಿರುದ್ಧ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಲೆ ಏರಿಕೆ ವಿರೋಧಿಸಿ ಜೆಡಿಎಸ್ ವತಿಯಿಂದ ಇಂದು (ಜೂನ್‌ 28) ಪ್ರತಿಭಟನೆ ಹಮ್ಮಿಕೊಂಡಿತ್ತು. ಆದರೆ, ಕೋವಿಡ್‌ ನಿಯಮಾವಳಿ ಮುಂದಿಟ್ಟು ಸರ್ಕಾರ ಪ್ರತಿಭಟನೆಗೆ ಅನುಮತಿ ನಿರಾಕರಿಸಿದೆ. ಕೋವಿಡ್‌ ಸಂದರ್ಭದ ಸರ್ಕಾರದ ಈ ನಿರ್ಧಾರ ಒಪ್ಪುತ್ತೇವೆ. ಆದರೆ, ಬಿಜೆಪಿ, ಕಾಂಗ್ರೆಸ್ ಪಕ್ಷದಲ್ಲಿನ ಸಮಾರಂಭಗಳಿಗೆ ಇಲ್ಲದ ನಿಬಂಧನೆ ಜನತಾದಳದಕ್ಕೆ ಮಾತ್ರ ಏಕೆ? ಎಂದು ಪ್ರಶ್ನಿಸಿದ್ದಾರೆ.

ಸಮಾವೇಶ, ಹೋರಾಟಗಳಂಥ ಜನರನ್ನು ಒಟ್ಟುಗೂಡಿಸುವ ಕೆಲಸಗಳಿಂದ ಜೆಡಿಎಸ್‌ ಈ ಕೋವಿಡ್‌ ಕಾಲದಲ್ಲಿ ದೂರವೇ ಉಳಿದಿತ್ತು. ಜನರನ್ನು ರಕ್ಷಣೆ ಮಾಡುವುದು ನಮ್ಮ ನಿಲುವಾಗಿತ್ತು. ಅಲ್ಲದೇ ಈಗ ಲಾಕ್‌ಡೌನ್‌, ಕೋವಿಡ್‌ ನಿಯಮಗಳನ್ನು ಸರ್ಕಾರವೇ ಸಡಿಲಗೊಳಿಸಿದೆ. ಹೀಗಾಗಿಯೇ, ಬೆಲೆ ಏರಿಕೆ ಸಮಸ್ಯೆಯಿಂದ ಪರಿಹಾರ ಕೊಡಿಸಲು ಜೆಡಿಎಸ್‌ ಹೋರಾಟ ಹಮ್ಮಿಕೊಂಡಿತ್ತು.

ಜೊತೆಗೆ, ಕೋವಿಡ್‌ ನಿಯಮಕ್ಕೆ ಬದ್ಧವಾಗಿ ಪ್ರತಿಭಟನೆ ನಡೆಸಲು ಪಕ್ಷದ ಪೂರ್ವಭಾವಿ ಸಭೆಯಲ್ಲಿ ಕಾರ್ಯಕರ್ತರಿಗೆ ತಿಳಿಸಿದ್ದೆ. ಸಭೆ ನಂತರ ಮಾಧ್ಯಮಗಳಿಗೂ ಇದನ್ನೇ ಹೇಳಿದ್ದೆ. ಅನುಮತಿ ಕೋರಿ ಸಲ್ಲಿಸಿದ್ದ ಪತ್ರದಲ್ಲೂ ಅದನ್ನೇ ಉಲ್ಲೇಖಿಸಲಾಗಿತ್ತು. ಆದರೂ, ಅನುಮತಿ ಸಿಕ್ಕಿಲ್ಲ. ಈ ಮೂಲಕ ಸರ್ಕಾರ ಹೋರಾಟ ಹತ್ತಿಕ್ಕುವ ಪ್ರಯತ್ನ ಮಾಡಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕೋವಿಡ್‌ ನಿಯಮಾವಳಿಗಳು ಕಠಿಣವಾಗಿದ್ದಾಗ, ಲಾಕ್‌ಡೌನ್‌ ಜಾರಿಯಲ್ಲಿದ್ದಾಗಲೂ ಬಿಜೆಪಿ, ಕಾಂಗ್ರೆಸ್‌ ಹಲವು ಸಭೆ ಸಮಾರಂಭಗಳನ್ನು ನಡೆಸಿವೆ. ತೈಲ ದರ ಏರಿಕೆ ವಿರೋಧಿಸಿ, ಪೆಟ್ರೋಲಿಯಂ ಉತ್ಪನ್ನಗಳನ್ನು GSTಗೆ ತರಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಲಾಕ್‌ಡೌನ್‌ ವೇಳೆ ಪ್ರತಿಭಟನೆ ನಡೆಸಿತ್ತು. ಆಗ ಕಾಂಗ್ರೆಸ್‌ಗಿದ್ದ ಅನುಮತಿ ಈಗ ನಮಗೇಕಿಲ್ಲ ಎಂದು ಪ್ರಶ್ನಿಸಿದ್ದಾರೆ.

ಪೆಟ್ರೋಲಿಯಂ ಅನ್ನು GSTಗೆ ತಂದು ರಾಜ್ಯಗಳ ಆದಾಯವನ್ನು ಕೇಂದ್ರಕ್ಕೆ ತಿರುಗಿಸುವುದು ಬಿಜೆಪಿ ಕಾಂಗ್ರೆಸ್‌ ವಾದ. ಇದಕ್ಕೆ ಪೂರಕವಾದ ಕಾಂಗ್ರೆಸ್‌ ಪ್ರತಿಭಟನೆಗೆ ಅನುಮತಿ ನೀಡಲಾಯಿತು. ಪೆಟ್ರೋಲಿಯಂ ಅನ್ನು GSTಗೆ ತರಬಾರದೆಂಬ ನಿಲುವುಳ್ಳ ನಮ್ಮ ಹೋರಾಟವನ್ನು ತಡೆಯಲಾಗಿದೆ. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕತೆ ವಿರೋಧಿಗಳೆಂಬುದು ಸಾಬೀತಾಗಿದೆ ಎಂದು ಸರಣಿ ಟ್ವೀಟ್ ಮೂಲಕ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

Exit mobile version