ಬೆಳಗಾವಿ ಜಿಲ್ಲೆ ವಿಭಜನೆಯಾಗುತ್ತಾ? ಚುನಾವಣೆ ಹೊತ್ತಲ್ಲೇ ವಿಭಜನೆಗೆ ಆಸಕ್ತಿ ತೋರಿಸಿದ ಸರ್ಕಾರ

Belgaum: ಲೋಕಸಭೆ ಚುನಾವಣೆಗೆ (Lok Sabha Elections) ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿರುವ ಹೊತ್ತಿನಲ್ಲಿಯೇ ಬೆಳಗಾವಿ ಜಿಲ್ಲೆ ವಿಭಜನೆಗೆ ಕಾಂಗ್ರೆಸ್ ಸರ್ಕಾರ ಕೈಹಾಕುತ್ತಿರುವಂತಿದೆ. ಬೆಳಗಾವಿ ಜಿಲ್ಲೆ ರಾಜಕೀಯ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಈ ಅಸ್ತ್ರವನ್ನು ಪ್ರಯೋಗ ಮಾಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.

ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಬೆಳಗಾವಿ (Belgaum) ಜಿಲ್ಲೆ ವಿಭಜನೆ ವಿಚಾರವಾಗಿ ರಾಜ್ಯ ಕಾಂಗ್ರೆಸ್ ಸರ್ಕಾರ ಅಲರ್ಟ್ ಆಗಿದೆ. ಜಿಲ್ಲೆ ವಿಭಜನೆ ವಿಚಾರವಾಗಿ ಸಮಗ್ರ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆನ್ನವರಗೆ ಸರ್ಕಾರ ನಿರ್ದೇಶನ ನೀಡಿದೆ.

ರಾಜ್ಯದಲ್ಲಿ ಎರಡನೇ ‌ಅತಿ ದೊಡ್ಡ ‌ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಗಡಿ ವಿವಾದದ ಕಾರಣಕ್ಕೆ ಜಿಲ್ಲೆ ವಿಭಜನೆ ಪ್ರಸ್ತಾವ ನೆನೆಗುದ್ದಿಗೆ ಬಿದ್ದಿತ್ತು. ಆದರೆ ಸರ್ಕಾರ ಈಗ ಚುನಾವಣೆ ಹೊತ್ತಲ್ಲೇ ಜಿಲ್ಲೆ ವಿಭಜನೆಗೆ ಆಸಕ್ತಿ ತೋರಿದೆ.

ಹಲವು ದಕಶಗಳಿಂದ ಜಿಲ್ಲೆ ವಿಭಜನೆ ಕೂಗು‌‌ ಕೇಳಿ ಬರುತ್ತಿದ್ದು, ಈ ಮಧ್ಯೆ, ಜಿಲ್ಲಾ ವಿಭಜನೆ ಸಂಬಂಧ ಸಮಗ್ರ ವರದಿ ನೀಡುವಂತೆ ಪ್ರಾದೇಶಿಕ ಆಯುಕ್ತರಿಗೆ ಸರ್ಕಾರ ನಿರ್ದೇಶನ ನೀಡಿದೆ. ಮತ್ತೊಂದೆಡೆ ಪ್ರತ್ಯೇಕ ಜಿಲ್ಲೆಗಾಗಿ ಗೋಕಾಕ್, ಬೈಲಹೊಂಗಲ, ಚಿಕ್ಕೋಡಿ ಹಾಗೂ ಅಥಣಿ ಜನರಿಂದ ಹೋರಾಟ‌ ನಡೆಯುತ್ತಿದೆ. ಸಮಗ್ರ ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತ ಸಂಜಯ್ ಶೆಟ್ಟೆನ್ನವರಗೆ ಸರ್ಕಾರ ಪತ್ರ ಬರೆದಿದೆ.

ಸದ್ಯ ಅಸ್ತಿತ್ವದಲ್ಲಿರುವ ಉಪವಿಭಾಗ, ತಾಲೂಕು-ಹೋಬಳಿ ಮಧ್ಯೆ ಇರುವ ವ್ಯಾಪ್ತಿ ವಿವರ, ಸಾರ್ವಜನಿಕರು ನಿತ್ಯ ಎದುರಿಸುತ್ತಿರುವ ಸಮಸ್ಯೆಗಳೇನು? ಜನಸಂಖ್ಯೆ ಎಷ್ಟು? ಮೂಲಸೌಕರ್ಯ ಹಾಗೂ ಭೌಗೋಳಿಕ ವಿಸ್ತೀರ್ಣ ಒಳಗೊಂಡ ಮಾಹಿತಿ ಸಂಗ್ರಹಿಸಿ ವರದಿ ನೀಡಲು ಸೂಚನೆ ನೀಡಲಾಗಿದೆ.

ಬೆಳಗಾವಿಯ ಸುವರ್ಣಸೌಧದಲ್ಲಿ (Suvarnasoudha) ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಅಥಣಿ ಬಂದ್ ಸಹ ಆಚರಿಸಲಾಗಿತ್ತು. ಅಥಣಿಯನ್ನು ಜಿಲ್ಲೆ ಮಾಡುವಂತೆ ಹೋರಾಟ ಮಾಡುವ ಬಗ್ಗೆ ಮಠಾಧೀಶರ ನೇತೃತ್ವದಲ್ಲಿ ಹಲವು ಸುತ್ತಿನ ಸಭೆಗಳೂ ನಡೆದಿದ್ದವು. ಹಲವು ಬಾರಿ ಪ್ರತಿಭಟನೆಗಳು ಬೆಳಗಾವಿ ಜಿಲ್ಲೆ ವಿಭಜನೆಗೆ ಆಗ್ರಹಿಸಿ ನಡೆದಿದ್ದವು. ಕಳೆದ ವರ್ಷವಂತೂ ಅಥಣಿ ಜಿಲ್ಲೆ ಮಾಡುವಂತೆ ಒತ್ತಾಯಿಸಿ ಕೆಲವು ಬಾರಿ ಅಥಣಿ ಬಂದ್ (Athani Bandh) ಮಾಡಲಾಗಿತ್ತು.

Exit mobile version