ಒಣದ್ರಾಕ್ಷಿ ಸೇವನೆಯಿಂದ ನಮ್ಮ ದೇಹಕ್ಕೆ ಅನೇಕ ಲಾಭಗಳಿವೆ. ಪ್ರತಿನಿತ್ಯ ಇದನ್ನು ಸೇವನೆ ಮಾಡುವುದರಿಂದ ಕಫ, ಪಿತ್ತ, ಅಜೀರ್ಣ ಹೆಚ್ಚುತ್ತಿರುವ ಕೊಲೆಸ್ಟ್ರಾಲ್, ಹೃದಯ ಸಂಬಂಧಿ ಕಾಯಿಲೆ, ಮೂಳೆಗಳ ದೌರ್ಬಲ್ಯ ಮಂದಗೊಂಡ ಕಣ್ಣಿನ ದೃಷ್ಟಿ ಮುಂತಾದ ಸಮಸ್ಯೆಗಳಿಗೆ ರಾಮಬಾಣವಾಗಿದೆ ಒಣದ್ರಾಕ್ಷಿ.
ಒಣದ್ರಾಕ್ಷಿಯನ್ನು ಚೆನ್ನಾಗಿ ತೊಳೆದು ರಾತ್ರಿ ನೀರಲ್ಲಿ ನೆನೆಸಿಟ್ಟು ಮರುದಿನ ಬೆಳಿಗ್ಗೆ ಅದನ್ನು ಜ್ಯೂಸ್ ಮಾಡಿ ಕುಡಿಯಬಹುದು, ಇಲ್ಲವೇ ಹಾಗೇ ತಿನ್ನಬಹುದು. ನೆನಸಿ ತಿನ್ನುವುದರಿಂದ ಪ್ರೋಟೀನ್ ಅಂಶ ಹೆಚ್ಚಾಗಿ ಸಿಗುತ್ತದೆ. ಬೆಳಗಿನ ತಿಂಡಿಯ ಜೊತೆಗೆ ಕೂಡಾ ಇದನ್ನು ಸೇವಿಸಬಹುದಾಗಿದೆ.
ಒಣದ್ರಾಕ್ಷಿ ಸೇವನೆಯಿಂದ ತೂಕ ನಷ್ಟವಾಗುತ್ತದೆ, ಆಯಾಸ ಪರಿಹಾರವಾಗುತ್ತದೆ. ಇದರಲ್ಲಿ ಕೊಬ್ಬಿನಂಶ ಇರುವುದಿಲ್ಲವಾದ್ದರಿಂದ ಇದನ್ನು ದಾರಾಳವಾಗಿ ಸೇವಿಸಬಹುದು. ಜೀರ್ಣಕ್ರಿಯೆ ಹೆಚ್ಚಾಗುತ್ತದೆ ಮಲಬದ್ದತೆಯನ್ನು ನಿವಾರಿಸುತ್ತದೆ. ಇದರಲ್ಲಿ ಯಥೇಷ್ಟವಾಗಿ ಕ್ಯಾಲ್ಸಿಯಂ ಇರುವುದರಿಂದ ಮೂಳೆಗಳ ಬಲವರ್ಧನೆಗೆ ಉತ್ತಮವಾಗಿದೆ. ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ.
ಒಣದ್ರಾಕ್ಷಿಯಲ್ಲಿ ನಾರಿನಾಂಶ, ಕಬ್ಬಿಣಾಂಶ ಪೊಟಾಷಿಯಂ, ಆಂಟಿ ಆಕ್ಸಿಡೆಂಟ್ ಗಳು ಇದ್ದು ಕೆಟ್ಟ ಕೊಲೆಸ್ಟ್ರಾಲ್ ನ್ನು ಕಡಿಮೆ ಮಾಡುತ್ತದೆ. ವಿಟಮಿನ್ ಎ ಇರುವುದರಿಂದ ಕಣ್ಣಿನ ಆರೋಗ್ಯ ಕಾಪಾಡುತ್ತದೆ. ವಿಟಮಿನ್ ಎ ಹಾಗೂ ಬಿ ಇದ್ದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೇಹದಲ್ಲಿ ಶಕ್ತಿಯ ವರ್ಧನೆಯಾಗುತ್ತದೆ.