ಒಡಿಶಾದಲ್ಲಿ ಆಘಾತಕಾರಿ ಘಟನೆ ; ಹಾಡಹಗಲೇ ವೃದ್ಧನನ್ನು ಕಂಬಕ್ಕೆ ಕಟ್ಟಿ, ಥಳಿಸಿ ಕೊಂದ ಕುಟುಂಬಸ್ಥರು!

ಹಿರಿಯರು ದೇವರಿದ್ದ ಹಾಗೆ. ಅವರ ಅನುಭವ, ಮಾರ್ಗದರ್ಶನ, ಆಶೀರ್ವಾದ ನಮಗೆ ಶ್ರೀರಕ್ಷೆ. ‘ಹಿರಿಯರು ಮನೆಯ ಲಕ್ಷಣ, ಅವರಿಲ್ಲದ ಮನೆ ಭಣ ಭಣ’ ಎನ್ನುವ ಮಾತುಗಳಿವೆ. ನಮಗಾಗಿ ಸಾಕಷ್ಟು ತ್ಯಾಗ ಮಾಡಿರುವ ಹಿರಿಯರನ್ನು ಗೌರವಿಸುವುದು ನಮ್ಮ ಕರ್ತವ್ಯ ಹಾಗೂ ಜವಾಬ್ದಾರಿ ಕೂಡ. ಆದರೆ ಇತ್ತೀಚಿಗೆ ಹಿರಿಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೇನೂ ಕಡಿಮೆಯಿಲ್ಲ, ಅಂತಹ ಒಂದು ಘಟನೆ ಇತ್ತೀಚಿಗೆ ಒರಿಸ್ಸಾದಲ್ಲಿ(Odisha) ನಡೆದಿದೆ.


ಕೊರಾಪುಟ್ ಜಿಲ್ಲೆಯ ಬುಡಕಟ್ಟು ಪ್ರದೇಶದಲ್ಲಿ ಹಾಡಹಗಲೇ ವೃದ್ಧನನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ತಮ್ಮ ಕುಟುಂಬಸ್ಥರೇ ಥಳಿಸಿ ಕೊಂದಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ! ಮೃತಪಟ್ಟ ವ್ಯಕ್ತಿಯನ್ನು ಕುರ್ಶಾ ಮಣಿಯಕ ಎಂದು ಗುರುತಿಸಲಾಗಿದ್ದು, ವೈಯಕ್ತಿಕ ವಿವಾದದ ಹಿನ್ನೆಲೆಯಲ್ಲಿ ತನ್ನ ಮಗನ ಮನೆಯ ಮೇಲಿದ್ದ ಅಸ್ಬೆಸ್ಟಾಸ್ ಶೀಟನ್ನು ಮುರಿದ ನಂತರ ತನ್ನ ಕುಟುಂಬದ ಸದಸ್ಯರೊಂದಿಗೆ ತೀವ್ರ ವಾಗ್ವಾದಕ್ಕೆ ಇಳಿದಿದ್ದಾರೆ.

ಆಗ, ಮಣಿಯಕನ ಸಹೋದರ, ಮಗ ಮತ್ತು ಸೊಸೆ ಅವರನ್ನು ವಿದ್ಯುತ್ ಕಂಬಕ್ಕೆ ಕಟ್ಟಿ ಮರದ ದೊಣ್ಣೆಗಳಿಂದ ಹಲ್ಲೆ(Murder) ಮಾಡಿದಾಗ ಜಗಳವು ತಿರುವು ಪಡೆಯಿತು. ವೀಡಿಯೊಗಳಲ್ಲಿ ಮಹಿಳೆ ಮತ್ತು ಯುವಕ ವಯಸ್ಸಾದ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಹೊಡೆಯುವುದು ಸ್ಪಷ್ಟವಾಗಿ ಕಾಣಿಸುತ್ತಿದೆ. ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಾಧ್ಯವಾಗದೆ, ದಾಳಿಯಿಂದ ಗಂಭೀರವಾಗಿ ಗಾಯಗೊಂಡು ವೃದ್ಧ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ, ಆರೋಪಿಯು ಸ್ಥಳೀಯರ ಸಹಾಯದಿಂದ ದೇಹವನ್ನು ದಹನ ಮಾಡಿದ್ದಾನೆ.


ನಂತರ, ಕೆಲವು ಗ್ರಾಮಸ್ಥರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು. ಅಪರಾಧ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸ್ ತಂಡವು ಒಬ್ಬ ವ್ಯಕ್ತಿಯನ್ನು ಬಂಧಿಸಿದೆ. ಇನ್ನಿಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. “ಈ ಘಟನೆಯ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಮತ್ತು ಪರಾರಿಯಾಗಿರುವ ಇಬ್ಬರು ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

Exit mobile version