ಆಹಾರ ಪದಾರ್ಥಗಳ ಬೆಲೆ ಏರಿಕೆಯಿಂದ ಫೆಬ್ರವರಿಯಲ್ಲಿ ಹಣದುಬ್ಬರವಾಯ್ತು ಶೇ. 5.03

ನವದೆಹಲಿ, ಮಾ. 13: ಆಹಾರ ಮತ್ತು ತೈಲ ಬೆಲೆಗಳ ಏರಿಕೆ ಆಗಿರುವುದರಿಂದ ಚಿಲ್ಲರೆ ಹಣದುಬ್ಬರ ದರವು ಶೇ 5.03ಕ್ಕೆ ತಲುಪಿದೆ. ಶುಕ್ರವಾರದಂದು ಸಾಂಖ್ಯಿಕ ಹಾಗೂ ಕಾರ್ಯಕ್ರಮ ಅನುಷ್ಠಾನ ಇಲಾಖೆಯು ಈ ಬಗ್ಗೆ ದತ್ತಾಂಶ ಬಿಡುಗಡೆ ಮಾಡಿದೆ. ಜನವರಿಯಲ್ಲಿ ಹಣದುಬ್ಬರ ಶೇ 4.06ಕ್ಕೆ ಇಳಿದಿತ್ತು. ಇದು 2019 ಅಕ್ಟೋಬರ್ ನಂತರದ ಕನಿಷ್ಠ ಮಟ್ಟ ಅದಾಗಿತ್ತು. ಆಹಾರ, ತರಕಾರಿ ಬೆಲೆಗಳ ಏರಿಕೆಯಿಂದಾಗಿ ಹಣದುಬ್ಬರ ದರ ಶೇ 5.88 ತಲುಪಿ, ಆತಂಕಕ್ಕೆ ಕಾರಣವಾಗಿದೆ. ಹೆಚ್ಚುತ್ತಿರುವ ಕಚ್ಚಾ ತೈಲ ಬೆಲೆ ಮತ್ತು ರೀಟೇಲ್ ಬೆಲೆಗಳ ಪರಿಣಾಮದಿಂದಾಗಿ ಹಣದುಬ್ಬರ ದರವು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮಿಲ್​ವುಡ್ ಕೇನ್ ಇಂಟರ್​ನ್ಯಾಷನಲ್ ಸಿಇಒ ಹಾಗೂ ಸ್ಥಾಪಕರಾದ ನಿಶ್ ಭಟ್ ಹೇಳಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.

ಸದ್ಯಕ್ಕೆ ಸಿಪಿಐ (ಗ್ರಾಹಕ ದರ ಸೂಚ್ಯಂಕ) ಆರ್​ಬಿಐ ನಿಗದಿಪಡಿಸಿದ ಗುರಿಯೊಳಗೆ ಇದೆ. ಆದರೆ ಹೆಚ್ಚುತ್ತಿರುವ ಹಣದುಬ್ಬರ, ಏರಿಕೆ ಆಗುತ್ತಿರುವ ಬೆಲೆಯಿಂದ ಭಾರತದ ಪ್ರಗತಿ ನಿಧಾನ ಆಗುವುದಕ್ಕೆ ಕಾರಣ ಆಗಬಹುದು ಎಂಬುದನ್ನು ಏಪ್ರಿಲ್ ಸಭೆಯಲ್ಲಿ ಕೇಂದ್ರ ಬ್ಯಾಂಕ್​ನಿಂದ ತಹಬದಿಗೆ ತರಬೇಕಿದೆ ವಿಶ್ಲೇಷಕರು ಅಭಿಪ್ರಾಯ ಪಡುತ್ತಾರೆ. ಸಿಪಿಐ ಹಣದುಬ್ಬರ ದರ ಶೇ 4 (ಪ್ಲಸ್ ಅಥವಾ ಮೈನಸ್ ಶೇಕಡಾ 2) ಇರಿಸಿಕೊಳ್ಳುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಕೇಳಲಾಗಿದೆ.

ಈ ಮಧ್ಯೆ, ಇಂಡೆಕ್ಸ್ ಆಫ್ ಇಂಡಸ್ಟ್ರಿಯಲ್ ಪ್ರೊಡಲ್ಷನ್ (ಐಐಪಿ) 2021ರ ಜನವರಿಯಲ್ಲಿ ಶೇ 1.6ರಷ್ಟು ಕುಸಿದಿದೆ. ತಜ್ಞರು ಹೇಳುವಂತೆ, ಉತ್ಪಾದನೆ ಚಟುವಟಿಕೆ ಈಗಲೂ ಪ್ರಬಲವಾಗಿದೆ. ಜತೆಗೆ ಬೇಡಿಕೆ ಕೂಡ ಉತ್ತಮವಿದೆ. ಆದ್ದರಿಂದ ಬೆಳವಣಿಗೆ ಮುಂದುವರಿಯಲಿದೆ. ಇನ್ನು ಫೆಬ್ರವರಿಯಲ್ಲಿ ನಡೆದ ಆರ್​ಬಿಐ ಹಣಕಾಸು ನೀತಿ ಸಭೆಯಲ್ಲಿ ಸಮಿತಿಯ ಸದಸ್ಯರು ಏರುತ್ತಿರುವ ಹಣದುಬ್ಬರದ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಆದರೆ ರೆಪೋ ದರವನ್ನು ಶೇ 4ಕ್ಕೇ ಉಳಿಸಿಕೊಳ್ಳಲಾಯಿತು. ಇದರಿಂದ ವ್ಯವಸ್ಥೆಯೊಳಗೆ ನಗದು ಹೆಚ್ಚಿನ ಪ್ರಮಾಣದಲ್ಲಿ ಇರುತ್ತದೆ ಎನ್ನಲಾಗಿತ್ತು. ಈ ನಗದು ಲಭ್ಯತೆ ಬಗ್ಗೆ ಭರವಸೆ ಹೊರತಾಗಿಯೂ ಭಾರತದ ಬಾಂಡ್ ಯೀಲ್ಡ್ ಹೆಚ್ಚಾಗಿತ್ತು. ಜಾಗತಿಕ ಮಟ್ಟದಲ್ಲಿ ಚೇತರಿಕೆ ಭರವಸೆ ಕಂಡುಬಂದಿದ್ದರಿಂದ ಅಲ್ಲಿಯದೇ ಹಣದುಬ್ಬರ ಹೆಚ್ಚಳದ ಆತಂಕದ ಪರಿಣಾಮ ಭಾರತದಲ್ಲೂ ಪ್ರತಿಫಲಿಸಿತು.

Exit mobile version