ಚೆನ್ನೈ, ಮಾ. 15: ಏಪ್ರಿಲ್ 6ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಅಧಿಕೃತವಾಗಿ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರತಿ ಕುಟುಂಬಕ್ಕೂ ಒಂದು ಸರ್ಕಾರಿ ಉದ್ಯೋಗ ನೀಡುವುದು ಪ್ರಣಾಳಿಕೆಯ ಅತಿ ಪ್ರಮುಖ ಅಂಶವಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗೆ ಉಚಿತವಾಗಿ ವಾರ್ಷಿಕ 2GB ಡೇಟಾ ಒದಗಿಸುವಂತಹ ಅತ್ಯಾಕರ್ಷಕ ಅಂಶಗಳನ್ನು ಒಳಗೊಂಡಿದೆ. ಅಲ್ಲದೇ ವಾರ್ಷಿಕ 6 ಸಿಲಿಂಡರ್ಗಳನ್ನು ಮನೆಬಳಕೆಗೆ ನೀಡುವುದಾಗಿಯೂ ಪಕ್ಷ ಘೋಷಿಸಿದೆ.
ಸಿಎಎ ಜಾರಿಗೊಳಿಸಿದ್ದ ಬಿಜೆಪಿ ಜೊತೆ ಎಐಎಡಿಎಂಕೆ ಮೈತ್ರಿ ಹೊಂದಿದ್ದರೂ ಸಿಎಎ ವಿರುದ್ಧವೂ ಹೋರಾಟ ನಡೆಸುವುದಾಗಿ ಭರವಸೆ ನೀಡಿದೆ. ಜತೆಗೆ ಶ್ರೀಲಂಕಾದ ತಮಿಳು ನಿರಾಶ್ರಿತರಿಗೆ ದ್ವಿಪೌರತ್ವ ಒದಗಿಸುವುದಾಗಿ ಆಶ್ವಾಸನೆ ನೀಡಿದೆ. ಸೋಲಾರ್ ಒಲೆ ಮತ್ತು ವಾಶಿಂಗ್ಮಶಿನ್ಗಳನ್ನು ಎಲ್ಲಾ ಮನೆಗೂ ಒದಗಿಸುವುದಾಗಿ ಎಐಡಿಎಂಕೆ ಪ್ರಣಾಳಿಕೆ ಹೇಳುತ್ತದೆ.
ತಮಿಳುನಾಡು ವಿಧಾನಸಭಾ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ ಪಕ್ಷದ ಮೊದಲ ಪಟ್ಟಿ ಬಿಡುಗಡೆಯಾಗಿದೆ. ಮೊದಲ ಪಟ್ಟಿಯಲ್ಲಿ ಆರು ಪ್ರಭಾವಿ ನಾಯಕರ ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದೆ. ಸೇಲಂ ಜಿಲ್ಲೆಯ ಎಡಪ್ಪಾಡಿ ಕ್ಷೇತ್ರದಿಂದ ಮುಖ್ಯಮಂತ್ರಿ ಪಳನಿಸ್ವಾಮಿ, ತೇನಿ ಜಿಲ್ಲೆಯ ಬೋಡಿನಯಾಕ್ಕನೂರ್ ಕ್ಷೇತ್ರದಿಂದ ಉಪಮುಖ್ಯಮಂತ್ರಿ ಓ.ಪನ್ನೀರ್ಸೆಲ್ವಂ ಸ್ಪರ್ಧಿಸಲಿದ್ದಾರೆ. ಮೀನುಗಾರಿಕೆ ಸಚಿವ ಡಿ.ಜಯಕುಮಾರ್ ರಾಯಪುರಂ ಕ್ಷೇತ್ರದಿಂದ ಮತ್ತು ಮತ್ತು ಕಾನೂನು ಸಚಿವ ಸಿ.ವಿ.ಷಣ್ಮುಗಂ ಉತ್ತರ ತಮಿಳುನಾಡಿನ ವಿಲ್ಲುಪುರಂ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಶಾಸಕರಾದ ಎಸ್.ಪಿ.ಷಣ್ಮುಗನಾಥನ್ ಮತ್ತು ಎಸ್.ತೆನ್ಮೊಳಿ ಅವರಿಗೆ ಕ್ರಮವಾಗಿ ಶ್ರೀವೈಕುಂಠಂ ಮತ್ತು ನಿಲಕ್ಕೋಟಿ (ಮೀಸಲು) ಕ್ಷೇತ್ರಗಳನ್ನು ಘೋಷಿಸಲಾಗಿದೆ.
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ 171 ಅಭ್ಯರ್ಥಿಗಳ ಪಟ್ಟಿಯನ್ನು ಎಐಎಡಿಎಂಕೆ ಈಗಾಗಲೇ ಮಾಡಿದೆ. ಈ ಬಾರಿಯ ಚುನಾವಣೆಯಲ್ಲಿ 177 ಮಂದಿಯನ್ನು ಪಕ್ಷ ಕಣಕ್ಕಿಳಿಸಲಿದೆ. ಬಿಜೆಪಿಗೆ 20 ಸೀಟುಗಳನ್ನು ಎಐಎಡಿಎಂಕೆ ನೀಡಿದೆ. ಈ ಚುನಾವಣೆಯಲ್ಲಿ ಬಿಜೆಪಿ, ಎಐಎಡಿಎಂಕೆ ಮತ್ತು ಪಾಟ್ಟಾಳಿ ಮಕ್ಕಳ್ ಕಟ್ಚಿ (PMK) ಮೈತ್ರಿಕೂಟ ಜತೆಯಾಗಿ ಸ್ಪರ್ಧಿಸಲಿದೆ. ಎನ್ಡಿಎ ಮೈತ್ರಿಕೂಟದಿಂದ ನಟ, ರಾಜಕಾರಣಿ ವಿಜಯಕಾಂತ್ ಅವರ ಡಿಎಂಡಿಕೆ ಪಕ್ಷ ಹೊರ ನಡೆದ ಕಾರಣ ಪಿಎಂಕೆಗೆ 23 ಸೀಟುಗಳು ಲಭಿಸಿವೆ. ಇಲ್ಲಿವರೆಗೆ ನಡೆದ ಸೀಟು ಹಂಚಿಕೆ ಪ್ರಕಾರ 14 ಸೀಟುಗಳು ಅನ್ನೂ ಹಂಚಿಕೆಯಾಗದೆ ಮೈತ್ರಿಕೂಟದಲ್ಲಿ ಉಳದಿದೆ. ತಮಿಳುನಾಡಿನಲ್ಲಿ ಏಪ್ರಿಲ್ 6ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.