ತೌಖ್ತೆ ಚಂಡಮಾರುತ: ಹಾನಿಗೊಳಗಾದ ಮೀನುಗಾರರಿಗೆ ₹105 ಕೋಟಿ ಪರಿಹಾರ ಘೋಷಿಸಿದ ಗುರಜಾತ್ ಸರ್ಕಾರ

ಅಹಮದಾಬಾದ್‌, ಜೂ. 02: ಕಳೆದ ತಿಂಗಳು ಗುಜರಾತ್‌ನ ಕರಾವಳಿ ತೀರದಲ್ಲಿ ‘ತೌಖ್ತೆ’ ಚಂಡಮಾರುತವು ಭಾರಿ ಹಾನಿಯನ್ನುಂಟು ಮಾಡಿದ್ದು, ತೊಂದರೆಗೊಳಗಾದ ಮೀನುಗಾರರಿಗೆ ಗುಜರಾತ್‌ ಸರ್ಕಾರವು ₹105 ಕೋಟಿ ಪರಿಹಾರ ಘೋಷಿಸಿದೆ. ಈ ಬಗ್ಗೆ ಮುಖ್ಯಮಂತ್ರಿ ವಿಜಯ್‌ ರೂಪಾಣಿ ಅವರು ಮಂಗಳವಾರ ಸಂಜೆ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದ್ದಾರೆ.

ಈ ಚಂಡಮಾರುತದಿಂದ ಜಾಫರಾಬಾದ್, ರಜುಲಾ, ಸೈಯದ್‌ ರಾಜ್‌ಪಾರಾ, ಶಹಿಯಾಲ್ ಬೆಟ್‌ ಮತ್ತು ನವಾ ಬಂದರ್ಗಳ ಮೂಲಸೌಕರ್ಯಗಳು, ಆ್ಯಂಕರ್ ಬೋಟ್‌ಗಳು, ಮೀನು ಹಿಡಿಯುವ ಬಲೆ, ಟ್ರಾಲರ್‌ಗಳಿಗೆ ಹಾನಿಗಳಾಗಿವೆ. ಈ ಪರಿಹಾರ ಪ್ಯಾಕೆಜ್ ಭಾಗವಾಗಿ ಹಾನಿಗೊಳಗಾಗಿರುವ 100 ಕ್ಕೂ ಹೆಚ್ಚು ಸಣ್ಣ ಮತ್ತು ದೊಡ್ಡ ದೋಣಿಗಳ ಮೀನುಗಾರರಿಗೆ ಒಟ್ಟು ₹25 ಕೋಟಿ ಪರಿಹಾರ ನೀಡಲಾಗುವುದು ಎಂಬ ಮಾಹಿತಿ ಇದೆ.

ಪೂರ್ಣ ಪ್ರಮಾಣದಲ್ಲಿ ಹಾನಿಗೊಳಗಾಗಿರುವ ಸಣ್ಣ ದೋಣಿಯ ಮೌಲ್ಯದ ಶೇಕಡ 50ರಷ್ಟು ಅಥವಾ ₹75,000 ಹಣವನ್ನು ಸರ್ಕಾರ ಭರಿಸಲಿದೆ. ಭಾಗಶಃ ಹಾನಿಗೊಳಗಾಗಿರುವ ದೋಣಿಗೆ ಶೇಕಡ 50ರಷ್ಟು ಅಥವಾ ₹35,000 ಸರ್ಕಾರ ನೀಡಲಿದೆ. ಇನ್ನೂ ಸಂಪೂರ್ಣ ಹಾನಿಗೊಳಗಾದ ಟ್ರಾಲರ್ಗೆ ₹ 5 ಲಕ್ಷ ಅಥವಾ ಅದರ ಶೇಕಡ 50ರಷ್ಟು ಪಾಲನ್ನು ಸರ್ಕಾರವೇ ನೀಡಲಿದೆ. ಅಲ್ಲದೆ ಹಾನಿಗೊಳಗಾಗಿರುವ ಸಣ್ಣ ಮತ್ತು ದೊಡ್ಡ ದೋಣಿಯ ಮೀನುಗಾರರ ಖಾತೆಗೆ ಸರ್ಕಾರ ₹2000 ವರ್ಗಾಯಿಸಲಿದೆ ಎಂದು ಪ್ರಕಟಣೆ ಹೇಳಿದೆ.

ಸಂಪೂರ್ಣ ಹಾನಿಗೊಳಗಾದ ದೋಣಿಯ ರಿಪೇರಿಗಾಗಿ ₹10 ಲಕ್ಷ ಸಾಲ ತೆಗೆದುಕೊಂಡರೆ, ಅದರ ಶೇಕಡ 10ರಷ್ಟು ಬಡ್ಡಿಯನ್ನು ಸರ್ಕಾರವೇ ಭರಿಸಲಿದೆ. ಚಂಡಮಾರಯತದಿಂದ ಹಾನಿಗೊಳಗಾದ ನವಾ, ಸೈಯದ್‌ ರಾಜ್‌ಪಾರಾ ಮತ್ತು ಶಿಯಾಲ್‌ ಬೆಟ್‌ ದ್ವೀಪದಲ್ಲಿ ಮರು ನಿರ್ಮಾಣ ಕಾರ್ಯಗಳನ್ನು ನಡೆಸಲಾಗುವುದು. ಬಂದರು ಮರು ನಿರ್ಮಾಣ ಕಾರ್ಯಕ್ಕಾಗಿ ಸರ್ಕಾರ ₹80 ಕೋಟಿ ವೆಚ್ಚ ಮಾಡಲಿದೆ ಎಂದು ತಿಳಿಸಲಾಗಿದೆ.

Exit mobile version