ಹರ್ಷ ಕೊಲೆ ಪ್ರಕರಣ 8 ಮಂದಿ ವಶಕ್ಕೆ ; 2016 ರಿಂದಲೇ ಸ್ಕೆಚ್ ಹಾಕಿದ್ದ ಆರೋಪಿಗಳು!

ಬೆಂಗಳೂರು: ಶಿವಮೊಗ್ಗದ ಸೀಗೆಹಳ್ಳಿ ನಡೆದ ಘಟನೆಗೆ ಸಂಬಂಧಿಸಿದಂತೆ ಇದುವರೆಗೂ 8 ಜನರನ್ನು ಬಂಧಿಸಲಾಗಿದೆ. ಶಿವಮೊಗ್ಗದಲ್ಲಿ ಬಜರಂಗದಳ ಕಾರ್ಯಕರ್ತ ಹರ್ಷ (Bhajarangadal activist Harsha) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 8 ಜನರ ಬಂಧನ ಅಧಿಕೃತವಾಗಿದೆ. ಇನ್ನು ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ. ಆರೋಪಿಗಳ ಹಿನ್ನೆಲೆಯನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಅವರ ಮೇಲೆ ಕೆಲವು ಕೇಸುಗಳಿದ್ದು ಪೊಲೀಸರು ತನಿಖೆ ಮಾಡುತ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.


ಶುಕ್ರವಾರದವರೆಗೆ ನಿಷೇಧಾಜ್ಞೆ ಮುಂದುವರಿಕೆ: ಬೆಂಗಳೂರಿನಲ್ಲಿಂದು ಸುದ್ದಿಗಾರರಿಗೆ ಈ ಮಾಹಿತಿ ನೀಡಿದ ಅವರು ಶಿವಮೊಗ್ಗ ನಗರದಲ್ಲಿ ಶುಕ್ರವಾರದವರೆಗೆ 144 ಸೆಕ್ಷನ್ ನಿಷೇಧಾಜ್ಞೆ ಮುಂದುವರಿಸುತ್ತೇವೆ. ಅಲ್ಲಿ ಜಿಲ್ಲಾಧಿಕಾರಿಗಳು ಪರಿಸ್ಥಿತಿ ನೋಡಿಕೊಂಡು ನಿರ್ಣಯ ತೆಗೆದುಕೊಳ್ಳುತ್ತಾರೆ. ಹತ್ಯೆ ಘಟನೆಯಾದ ಬಳಿಕ ಉಂಟಾದ ಕಲ್ಲು ತೂರಾಟ, ಗಲಭೆಯಲ್ಲಿ ಆದ ಹಾನಿ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ಹೇಳಿದರು. ಪೊಲೀಸರ ತನಿಖೆಯಿಂದ ಆರೋಪಿಗಳ ಬಗ್ಗೆ ಸಂಪೂರ್ಣ ಮಾಹಿತಿ ಹೊರಗೆ ಬರಬೇಕು. ಈ ಆರೋಪಿಗಳು ಯಾವ ಸಂಘಟನೆಗೆ ಸೇರಿದ್ದಾರೆ, ಅವರಿಗೆ ಏನು ಸಂಪರ್ಕವಿದೆ? ಎಲ್ಲಾ ಆಯಾಮಗಳಿಂದ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಶಿವಮೊಗ್ಗದ(Shivamogga) ಹರ್ಷ ಕೊಲೆ ಪ್ರಕರಣ ಸಾಮಾನ್ಯವಾದ ಕೊಲೆ ಪ್ರಕರಣ ಎಂದು ಭಾವಿಸದೆ ಗಂಭೀರವಾಗಿ ಪರಿಗಣಿಸಿ ಇದರ ಹಿಂದಿರುವ ಶಕ್ತಿಗಳನ್ನು ಪತ್ತೆಹಚ್ಚಿ ತನಿಖೆ ಮೂಲಕ ಹೊರಗೆ ತರಬೇಕು. ಇದರ ಹಿಂದೆ ಸಂಘಟನೆಗಳ ಕೈವಾಡದ ಸಾಧ್ಯತೆಯಿದೆ ಎಂದರು.


ಇಂತಹ ಘಟನೆಗಳಾದಾಗ ಸೋಷಿಯಲ್ ಮೀಡಿಯಾ ಮೂಲಕ ಅಥವಾ ಇನ್ನಿತರ ಮಾಧ್ಯಮಗಳಲ್ಲಿ ಕೊಲೆ ಬೆದರಿಕೆ ಬರುವುದು ಸಾಮಾನ್ಯ. ಹೀಗೆ ಆದಾಗ ಸ್ಥಳೀಯ ಪೊಲೀಸರಿಗೆ ತಿಳಿಸಿದರೆ, ಅವರು ಕ್ರಮ ತೆಗೆದುಕೊಳ್ಳುತ್ತಾರೆ ಎಂದರು. ವಿಧಾನ ಪರಿಷತ್ ಸದಸ್ಯ ಅರುಣ್ ಅವರಿಗೆ ಕೊಲೆ ಬೆದರಿಕೆ ಬಂದಿರುವ ಬಗ್ಗೆ ಲಘುವಾಗಿ ತೆಗೆದುಕೊಳ್ಳದೆ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ. ಸಾಮಾನ್ಯ ಜನರಿಗೂ, ಪ್ರಮುಖ ವ್ಯಕ್ತಿಗಳಿಗೂ ಸರ್ಕಾರ ಭದ್ರತೆ ಒದಗಿಸುತ್ತದೆ ಎಂದರು.
ಶಿವಮೊಗ್ಗ ನಗರದಲ್ಲಿ ಸಮಾಜ ವಿರೋಧಿ ಶಕ್ತಿಗಳು ಬೆಳೆಯಲು ಕಾರಣವೇನೆಂದು ಪೊಲೀಸ್ ಇಲಾಖೆ ಎಷ್ಟರ ಮಟ್ಟಿಗೆ ಜವಾಬ್ದಾರಿಯಿದೆ ಎಂದು ತಿಳಿಯಲು ರಾಜ್ಯ ಡಿಜಿಗಳಿಗೆ ಪತ್ರ ನೀಡಿದ್ದು, ಶಿವಮೊಗ್ಗದ ದೊಡ್ಡಪೇಟೆ ಮತ್ತು ಕೋಟೆ ಎರಡು ಪೊಲೀಸ್ ಸ್ಟೇಷನ್ ಗಳಲ್ಲಿ ಕಳೆದ 5 ವರ್ಷಗಳಿಂದ ಯಾವ ಯಾವ ಅಧಿಕಾರಿಗಳಿದ್ದರು, ಏನೇನು ಕೇಸುಗಳು ಬಂದಿದ್ದವು, ಅವರು ಕೇಸಿನ ಮೇಲೆ, ಆರೋಪಿಗಳ ಮೇಲೆ ಎಷ್ಟು ನಿಗಾ ಇಟ್ಟಿದ್ದರು, ಯಾವ ರೀತಿ ಕ್ರಮ ವಹಿಸಿದ್ದರು ಎಂದು ತಿಳಿದುಕೊಳ್ಳಲು ಸೂಚನೆ ನೀಡಿದ್ದೇನೆ ಎಂದರು.


ಬೇಜವಾಬ್ದಾರಿತನದಿಂದ ವರ್ತಿಸಿದ ಪೊಲೀಸರನ್ನು ಕೂಡ ಬಿಡುವುದಿಲ್ಲ. ಶಿವಮೊಗ್ಗ ಹಿಂದಿನಿಂದಲೂ ಕೂಡ ಕೊಲೆ, ಅಪರಾಧಕ್ಕೆ ಕುಖ್ಯಾತಿಯಾಗಿತ್ತು. ಬೆಂಗಳೂರು ರೌಡಿಗಳಿಗೆ ತವರು ಎಂದು ಬಿಂಬಿತವಾದಂತೆ ಶಿವಮೊಗ್ಗಕ್ಕೂ ಅಂತಹ ಕುಖ್ಯಾತ ಹೆಸರು ಇದೆ. ರೌಡಿಗಳನ್ನು ಹಾಗೆಯೇ ಬಿಟ್ಟರೆ ಬೇರೆ ಜಿಲ್ಲೆಗಳಿಗೂ ವ್ಯಾಪಿಸುತ್ತದೆ. ರೌಡಿಗಳು, ಕುಕೃತ್ಯದಲ್ಲಿ ಭಾಗಿಯಾಗುವವರಿಗೆ ಪೊಲೀಸ್ ಇಲಾಖೆಯಿಂದ ಸೂಕ್ತ ಕಠಿಣ ಸಂದೇಶ ರವಾನೆ ಮಾಡುತ್ತೇವೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದರು.

Exit mobile version