ಎಚ್‌ಡಿಕೆ-ಸುಮಲತಾ ಟಾಕ್ ವಾರ್: ಮಧ್ಯ ಪ್ರವೇಶಿಸಿದ ರಾಕ್‌ಲೈನ್‌ ವೆಂಕಟೇಶ್: ಅಂಬರೀಶ್ ಕುರಿತ ಕುಮಾರಸ್ವಾಮಿ ಹೇಳಿಕೆಗೆ ಟಾಂಗ್

ಬೆಂಗಳೂರು, ಜು. 09: ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹಾಗೂ ಸಂಸದೆ ಸುಮಲತಾ ನಡುವಿನ ಜಗಳ ತಾರಕಕ್ಕೇರಿದೆ. ಇಬ್ಬರು ನಡುವಿನ ಮಾತಿನ ಸಮರದಲ್ಲಿ ಮಧ್ಯ ಪ್ರವೇಶಿಸಿರುವ ಅಂಬರೀಶ್ ಕುಟುಂಬದ ಆಪ್ತ ರಾಕ್‌ಲೈನ್‌ ವೆಂಕಟೇಶ್‌, ಎಚ್‌ಡಿಕೆ ವಿರುದ್ಧ ಹರಿಹಾಯ್ದರು.

ಮಂಡ್ಯಕ್ಕೆ ಅಂಬರೀಷ್ ಅವರ ಪಾರ್ಥಿವ ಶರೀರವನ್ನು ಸೇನಾ ಹೆಲಿಕಾಪ್ಟರ್​​ನಲ್ಲಿ ತೆಗೆದುಕೊಂಡು ಹೋಗಲು ಮುಖ್ಯಮಂತ್ರಿಯಾಗಿ ನಾನೇ ಸಹಾಯ ಮಾಡಿದ್ದೆʼ ಎಂಬ ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ರಾಕ್‌ ಲೈನ್‌ ವೆಂಕಟೇಶ್‌, ದಾರಿಯಲ್ಲಿ ಹೋಗುತ್ತಿದ್ದ ದಾಸಪ್ಪ ಸಿಎಂ ಆಗಿದ್ದರೂ ಅದೇ ಕೆಲಸವನ್ನೇ ಮಾಡುತ್ತಿದ್ದರು ಎಂದು ಕಿಡಿಕಾರಿದರು.

ಅಂಬರೀಶ್ ವಿಚಾರ ಮಾತನಾಡುವಾಗ ಪ್ರಜ್ಞೆ ಇರಲಿ. ಒಂದು ಕಡೆ ಭ್ರಷ್ಟಾಚಾರ ಅಂತಾರೆ, ಮತ್ತೊಂದು ಕಡೆ ಸ್ನೇಹಿತ ಅಂತಾ ಹೇಳುತ್ತಾರೆ. ಚಿತ್ರರಂಗದ ಬಗ್ಗೆ ಮಾತನಾಡುತ್ತೀರಾ ಅಲ್ವಾ? ಚಿತ್ರರಂಗದಿಂದ ನೀವೂ ಲಾಭ ಮಾಡಿಕೊಂಡಿದ್ದೀರಾ. ನೀವು ಸಿಎಂ ಆಗಿದ್ದಾಗ ಚಿತ್ರರಂಗಕ್ಕೆ ಏನ್ ಮಾಡಿದ್ದೀರಾ? ಅಭಿಷೇಕ್​ ಒತ್ತಾಯ ಮಾಡಿ ತಮ್ಮ ತಂದೆ ಅಂಬರೀಷ್​ರ ಮೃತದೇಹವನ್ನು ಮಂಡ್ಯಕ್ಕೆ ಕೊಂಡೊಯ್ಯಲು ಹೇಳಿದ್ದರು. ಅಂಥದ್ದರಲ್ಲಿ ಸಾವಿನ ರಾಜಕಾರಣ ಯಾಕೆ ಮಾಡಲು ಹೋಗುತ್ತಿದ್ದೀರಾ? ನಿಮ್ಮ ಮಾತಿನಿಂದ ಮನಸ್ಸಿಗೆ ತುಂಬಾ ನೋವಾಗಿದೆ ಎಂದು ತರಾಟೆಗೆ ತೆಗೆದುಕೊಂಡರು.

ಒಬ್ಬರಿಗೆ ಗೌರವ ಕೊಡುವುದು ತಪ್ಪಲ್ಲ ಸ್ವಾಮಿ. ಕುಮಾರಸ್ವಾಮಿ ಅವರೇ ನನ್ನ ಮುಂದೆ ಬಂದರೂ ನಮಸ್ಕಾರ ಹೇಳ್ತೀನಿ. ಅಂಬಿ ಇದ್ದಾಗ ನೀವು ಯಾವ ಟೋನ್‌ನಲ್ಲಿ ಮಾತನಾಡುತ್ತಿದ್ದಿರಿ. ಈಗ ವಾಲ್ಯೂಮ್ ರೈಸ್ ಮಾಡಿ ಮಾತನಾಡಬೇಡಿ. ನಿಮ್ಮ ಪಕ್ಷದವರ ಕೈಯಲ್ಲಿ ಅಂಬರೀಶ್​ನ ಬೈಯಿಸುತ್ತೀರಾ? ಅಂಬರೀಷ್​ ಅಣ್ಣನನ್ನು ಸ್ನೇಹಿತ ಅಂತ ಹೇಳುತ್ತೀರಾ? ನಿಮ್ಮ ಪಕ್ಷದ ವಕ್ತಾರರಿಂದ ಬೈಯುಸುತ್ತೀರಾ? ಹಾಗೆಲ್ಲಾ ಮಾತನಾಡಬಾರದು ಅಂತಾ ಅವರಿಗೆ ಹೇಳೋಕೆ ಅಗೋಲ್ಲವಾ ನಿಮಗೆ ಎಂದು ಪ್ರಶ್ನಿಸಿದರು.

Exit mobile version