ಸರ್ಕಾರದ ಅನಿಶ್ಚಿತ ನಿಲುವುಗಳು ಮತ್ತು ಹೊಂದಾಣಿಕೆ ರಾಜಕೀಯಕ್ಕೆ ಅಮಾಯಕ ವಿದ್ಯಾರ್ಥಿಗಳು ಬಲಿ: ಸಿದ್ದರಾಮಯ್ಯ ಕಿಡಿ

ಬೆಂಗಳೂರು, ಫೆ. 24: ರಾಜ್ಯ ಸರ್ಕಾರದ ಅನಿಶ್ಚಿತ ನಿಲುವುಗಳು ಮತ್ತು ಹೊಂದಾಣಿಕೆಯ ರಾಜಕೀಯಕ್ಕೆ ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಕೊರೊನಾ ಕಾಲದಲ್ಲಿ ರಾಜ್ಯದ ಶಿಕ್ಷಣ ವ್ಯವಸ್ಥೆ ಹದಗೆಟ್ಟು ಹೋಗಿದೆ. ರಾಜ್ಯ ಸರ್ಕಾರದ ಅನಿಶ್ಚಿತ ನಿಲುವುಗಳು ಮತ್ತು ಹೊಂದಾಣಿಕೆಯ ರಾಜಕೀಯಕ್ಕೆ
ಅಮಾಯಕ ವಿದ್ಯಾರ್ಥಿಗಳು ಬಲಿಯಾಗುತ್ತಿದ್ದಾರೆ. ಆದರೆ, ಶುಲ್ಕ ಕಡಿತದ ಸರ್ಕಾರಿ ಆದೇಶವನ್ನು ಧಿಕ್ಕರಿಸಿರುವ ಖಾಸಗಿ ಶಾಲೆಗಳ ನಿಲುವಿನ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅಸಹಾಯಕತೆ ವ್ಯಕ್ತಪಡಿಸಿರುವುದು ಅವರ ಅಸಾಮರ್ಥ್ಯವನ್ನಷ್ಟೇ ತೋರಿಸುತ್ತದೆ ಎಂದು ಟೀಕಿಸಿದ್ದಾರೆ.

ಅಲ್ಲದೇ, ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಖಾಸಗಿ ಶಾಲಾ ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳ ಪೋಷಕರ ಸಭೆ ಕರೆದು ಈಗಿನ ಬಿಕ್ಕಟ್ಟನ್ನು ಶೀಘ್ರವಾಗಿ ಇತ್ಯರ್ಥಗೊಳಿಸಿ ವಿದ್ಯಾರ್ಥಿಗಳನ್ನು ಈಗಿನ ಅತಂತ್ರ ಸ್ಥಿತಿಯಿಂದ ಮುಕ್ತಗೊಳಿಸಬೇಕು. ಜತೆಗೆ ಕೊರೊನಾ ಹಾವಳಿಯಿಂದಾಗಿ ಶಾಲೆಗಳ ಆಡಳಿತ ಮಂಡಳಿ, ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳೆಲ್ಲರೂ ಕಷ್ಟ-ನಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ಕೊಡು-ಕೊಳ್ಳುವಿಕೆಯ ಮೂಲಕ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬೇಕು. ಮುಖ್ಯಮಂತ್ರಿ ಮತ್ತು ಸಚಿವ ಸುರೇಶ್ ಕುಮಾರ್ ಒಂದು ವರ್ಗದ ಹಿತೈಷಿಯಂತೆ ವರ್ತಿಸಬಾರದು ಎಂದರು.

Exit mobile version