ಮೈಸೂರು, ಜ. 16: ಕಡಿಮೆ ಬೆಲೆಗೆ ಚಿನ್ನ ಕೊಡಿಸುವುದಾಗಿ ಹಣ ಪಡೆದು ವಂಚಿಸುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ನರಸಿಂಹರಾಜ ಪೊಲೀಸರು ಬಂಧಿಸಿದ್ದಾರೆ.
ಮುಸ್ತಫಾ ಅಲಿಯಾಸ್ ಯೂಸುಫ್ ಹಾಜಿ (೫೭), ಕುನ್ಹಿರಾಮನ್ ಅಲಿಯಾಸ್ ರಾಮ್ ಜಿ (೫೯), ಅಬ್ದುಲ್ ಹಕೀಂ ಅಲಿಯಾಸ್ ಮೊಹಮ್ಮದ್ (೪೪), ಮೊಹಮ್ಮದ್ ಶಾಫಿ (೪೨), ಗುರುಚರಣ್ ಬಿ.ಪಿ (೩೪), ಕಾರ್ತಿಕ್ ಕೆ.ಎ (೨೯), ಸಮೀವುಲ್ಲಾ ಅಲಿಯಾಸ್ ಸಮೀರ್ (೪೭) ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರ ಪೈಕಿ ಮೂವರು ಕೊಡಗು, ಓರ್ವ ಮೈಸೂರು, ಇನ್ನುಳಿದ ಮೂವರು ಕೇರಳ ರಾಜ್ಯದವರಾಗಿದ್ದಾರೆ.
ನರಸಿಂಹರಾಜ ಮತ್ತು ವಿ.ವಿ.ಪುರಂ ಪೊಲೀಸರು ಡಿಸಿಪಿ ಗೀತಾಪ್ರಸನ್ನ ನೇತೃತ್ವದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಪೊಲೀಸರು, 7 ಮಂದಿ ಅಂತರಾರಾಜ್ಯ ವಂಚಕರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ೧೫ ಲಕ್ಷ ನಗದು ಹಾಗೂ ಕೃತ್ಯಕ್ಕೆ ಬಳಸಿದ್ದ ಗೋಲ್ಡ್ ಬಿಸ್ಕೆಟ್, ೨ ಕಾರು, ೧ ದ್ವಿಚಕ್ರ ವಾಹನ ಸೇರಿದಂತೆ ೫ ಮೊಬೈಲ್ ಫೋನ್ ಗಳ ವಶಪಡಿಸಿಕೊಳ್ಳಲಾಗಿದೆ. ಈ ಆರೋಪಿಗಳು ೨ ಪ್ರತ್ಯೇಕ ಪ್ರಕರಣಗಳಲ್ಲಿ ಬೇಕಾಗಿದ್ದ ಖತರ್ನಾಕ್ ವಂಚಕರಾಗಿದ್ದು, ಸಾರ್ವಜನಿಕರಿಗೆ ತಾವು ಚಿನ್ನದ ಮರ್ಚೆಂಟ್, ಆರ್.ಬಿ.ಐ ಡೀಲರ್ ಗಳೆಂದು ಪರಿಚಯಿಸಿಕೊಂಡು ವಂಚಿಸುತ್ತಿದ್ದರು ಎಂದು ಡಿಸಿಪಿ ಗೀತಾ ಪ್ರಸನ್ನ ಮಾಹಿತಿ ನೀಡಿದ್ದಾರೆ.