ಬೆಂಗಳೂರು, ಜ. 18: ಭದ್ರಾವತಿಯಲ್ಲಿ ನಡೆದ RAF ಘಟಕ ಉದ್ಘಾಟನಾ ಸಮಾರಂಭದಲ್ಲಿ ಕನ್ನಡ ಭಾಷೆ ಬಳಸದ ಸರ್ಕಾರದ ನಡೆಗೆ ಪ್ರತಿಪಕ್ಷ ಕಾಂಗ್ರೆಸ್ ನಾಯಕರ ಆಕ್ರೋಶಕ್ಕೆ ಕಾರಣವಾಗಿದ್ದು, ಸರ್ಕಾರದ ಭಾಷಾ ವಿರೋಧಿ ನೀತಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಪ್ರಾದೇಶಿಕ ಸಂಸ್ಕೃತಿ ಹಾಗೂ ಭಾಷೆಗಳ ಮೇಲೆ ಕೇಂದ್ರ ಸರ್ಕಾರಕ್ಕೆ ಗೌರವವಿಲ್ಲ. ಪ್ರಾದೇಶಿಕ ಸಂಸ್ಕೃತಿ ಹಾಗೂ ಭಾಷೆಗಳ ಮೇಲೆ ಕೇಂದ್ರ ಸರ್ಕಾರಕ್ಕೆ ಗೌರವವಿಲ್ಲ. ಅಧಿಕಾರಕ್ಕಾಗಿ ನಮ್ಮ ಸಂಸದರೂ ಕೂಡಾ ಬಾಯಿ ಮುಚ್ಚಿಕುಳಿತಿದ್ದಾರೆ ಎಂದರು.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಸಾರ್ವಜನಿಕರ ಅಭಿಪ್ರಾಯದಂತೆ ನಡೆಯುತ್ತಿಲ್ಲ. ಬದಲಾಗಿ ವೈಯುಕ್ತಿಕವಾದ ಅಜೆಂಡಾದ ಮೇಲೆ ನಡೆಯುತ್ತಿವೆ ಎಂದು ಟೀಕಿಸಿದ್ದರು.
ಇದೇ ವಿಷಯದ ಬಗ್ಗೆ ತಮ್ಮ ಅನಿಸಿಕೆ ಹಂಚಿಕೊಂಡಿರುವ ಮಾಜಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಭಾಷಾವಾರು ಪ್ರಾಂತ್ಯಗಳ ಭಾರತ ಗಣರಾಜ್ಯ ಒಕ್ಕೂಟದ ಪರಿಕಲ್ಪನೆಯನ್ನೇ ಬುಡಮೇಲು ಮಾಡಲು ಹೊರಟಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರವು ಕುವೆಂಪು ಅವರ ನಾಡಿನಲ್ಲಿ ಕನ್ನಡವನ್ನೇ ಬದಿಗಿಡುವಂತಹ ಅಹಂಕಾರವನ್ನು ಪ್ರದರ್ಶನ ಮಾಡಿರುವುದು ಸರಿಯಲ್ಲ.
ಭಾಷಾ ಸೌಹಾರ್ದತೆ ಎಂದರೆ ಎಲ್ಲ ಭಾಷೆಗಳನ್ನೂ ಒಪ್ಪಿಕೊಳ್ಳುವುದೇ ಹೊರತು ಹೇರಿಕೆ ಮಾಡುವುದಲ್ಲ.
ಅದರಲ್ಲೂ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಉಳ್ಳ ಕನ್ನಡ ಭಾಷೆಯನ್ನು ಆಡಳಿತಾತ್ಮಕ ಭಾಷೆಯಾಗಿ ಮಾಡಿದ ಮೇಲೂ ಕನ್ನಡಕ್ಕೆ ಮಾನ್ಯತೆ ನೀಡದೇ ವರ್ತಿಸುತ್ತಿರುವ ಮುಖ್ಯಮಂತ್ರಿಗಳ ನಡೆ ನಿಜಕ್ಕೂ ಖಂಡನೀಯ. ನಿಜಕ್ಕೂ ನೆಲದ ಅಸ್ಮಿತೆಯನ್ನು ಬಲಿಕೊಟ್ಟು ಮನುವಾದಿಗಳ ಗುಲಾಮಗಿರಿಗೆ ಒಳಗಾಗಿರುವ ರಾಜ್ಯ ಬಿಜೆಪಿ ನಾಯಕರಿಗೆ ಬುದ್ಧಿ ಕಲಿಸಬೇಕಿದೆ ಎಂದಿದ್ದಾರೆ.