ಮೈಸೂರಿನಲ್ಲಿ ಮಿನಿ ಲಾಕ್‌ಡೌನ್‌? ಸುಳಿವು ಕೊಟ್ಟ ಡಿಸಿ ರೋಹಿಣಿ ಸಿಂಧೂರಿ

ಮೈಸೂರು, ಮಾ. 22: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕೊರೊನಾ 2ನೇ ಅಲೆಯ ಅಬ್ಬರ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಮಿನಿ ಲಾಕ್​ಡೌನ್​ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯಕ್ಕೆ ಕೊರೊನಾ ಎರಡನೇ ಅಲೆ ಬಂದಿದೆ ಅಂತ ಆರೋಗ್ಯ ಸಚಿವರೇ ಘೋಷಣೆ ಮಾಡಿದ್ದಾರೆ. ಸರ್ಕಾರ ಯಾವ ಗೈಡ್‌ಲೈನ್ ಹೊರಡಿಸಿದೆ ಅದರ ಪ್ರಕಾರವೇ ನಾವು ಕ್ರಮ ಕೈಗೊಂಡಿದ್ದೇವೆ. 500 ಜನರಿಗಿಂತ ಹೆಚ್ಚಾಗಿ ಎಲ್ಲಿಯೂ ಜನ ಸೇರಬಾರದು. ಇದೇ ಕಾರಣಕ್ಕೆ ನಾವು ಎಲ್ಲ ಜಾತ್ರೆ, ಉತ್ಸವಗಳನ್ನ ರದ್ದು ಮಾಡಿದ್ದೇವೆ. ಅಲ್ಲದೇ ಜನರು ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.

ಲಕ್ಷಾಂತರ ಜನ ಬಂದು ಜಾತ್ರೆ ಮಾಡೋಕೆ ಆಗೋಲ್ಲ. ಅದರ ನಂತರದ ಪರಿಸ್ಥಿತಿ ನಿಭಾಯಿಸಲು ನಮಗೂ ಕಷ್ಟ ಆಗುತ್ತೆ. ಹೀಗಾಗಿ ನಂಜನಗೂಡು ಜಾತ್ರೆಗೆ 500 ಮಂದಿ ಭಾಗಿಯಾಗಲು ಅನುಮತಿ ನೀಡಿದ್ದೇವೆ. ಜಾತ್ರೆಯನ್ನ ಮುಂದಿನ ವರ್ಷ ಮಾಡಬಹುದು. ಆದ್ರೆ ಜೀವನ ಉಳಿಸಿಕೊಳ್ಳುದು ಮುಖ್ಯ ಆಗಿದೆ ಎಂದರು.

ಇದೇ ವೇಳೆ ಮೈಸೂರಿಗೆ ಆಗಮಿಸುವ ಪ್ರವಾಸಿಗರ ಮೇಲೆ ನಿಗಾವಹಿಸುವ ಬಗ್ಗೆ ಮಾಹಿತಿ ನೀಡಿದ ಅವರು, ಮೈಸೂರು ಅರಮನೆಯಲ್ಲಿ ಮತ್ತೆ RTPCR ಹಾಗೂ ಆಂಟಿಜೆನ್ ಟೆಸ್ಟ್ ಆರಂಭಿಸುತ್ತೇವೆ. ಜತೆಗೆ ಬಾವಲಿ ಗಡಿಯಲ್ಲಿ ಪ್ರತಿಯೊಬ್ಬರಿಗು RTPCR ಟೆಸ್ಟ್ ಕಡ್ಡಾಯವಾಗಿದ್ದು, ತರಕಾರಿ ವಾಹನ ಸೇರಿದಂತೆ ಎಲ್ಲಾ ವಾಹನದಲ್ಲಿ ಪ್ರಯಾಣಿಸುವವರಿಗೆ ಟೆಸ್ಟ್ ಇಲ್ಲದೆ ಪ್ರವೇಶವಿಲ್ಲ.

ಇನ್ನೂ ಶಾಲಾ ಕಾಲೇಜುಗಳಲ್ಲಿ ಮತ್ತೆ ರ್ಯಾಂಡಮ್ ಟೆಸ್ಟ್ ಮಾಡುತ್ತಿದ್ದೇವೆ. ಎಲ್ಲಿಂದ ಹರಡುತ್ತಿದ್ದೆ ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ಈ ಎಲ್ಲಾ ಕಾರಣದಿಂದ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ಅಗತ್ಯಬಿದ್ದರೆ ಎಲ್ಲಿ ಸೋಂಕು ಹೆಚ್ಚಿದೆ ಅಲ್ಲಿ ಮಿನಿ ಲಾಕ್‌ಡೌನ್ ಮಾಡುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.

Exit mobile version