ಮೀನಿನ ಬಲೆಗೆ ಸಿಲುಕಿದ‌ ಕಾಡಾನೆ: ದಡ ಸೇರಿಸಲು ಅರಣ್ಯ ಸಿಬ್ಬಂದಿ ಹರಸಾಹಸ

ಮೈಸೂರು, ಜ. 19: ಮೀನಿಗಾಗಿ ಹಾಕಿದ್ದ ಬಲೆಗೆ ಕಾಡಾನೆ ಸಿಲುಕಿಕೊಂಡು ಪರದಾಡಿದ ಘಟನೆ ಸರಗೂರು ತಾಲ್ಲೂಕಿನ ನುಗು ಜಲಾಶಯದಲ್ಲಿ ನಡೆದಿದೆ.

ಆಹಾರ ಅರಸಿ ಬಂದ ಕಾಡಾನೆ ನೀರಿಗೆ ಇಳಿದಿದೆ. ಈ ವೇಳೆ ಮೀನಿಗೆ ಹಾಕಿದ್ದ ಬಲೆಯಲ್ಲಿ ಸಿಲುಕಿಕೊಂಡು ಮೇಲಕ್ಕೆ ಬರಲಾಗದೇ ಪರದಾಡಿತು. ಈ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಆನೆಯನ್ನು ನೀರಿನಿಂದ ದಡಕ್ಕೆ ಕರೆತರಲು ಅರಣ್ಯ ಹರಸಾಹಸಪಟ್ಟರು.

ಬೋಟ್‌ ಮೂಲಕ ಬಲೆ ಬಿಡಿಸಲು ಯತ್ನಿಸಿದ ಸಿಬ್ಬಂದಿ ಇದಕ್ಕಾಗಿ ಹಲವು ಗಂಟೆಗಳ ಕಾರ್ಯಾಚರಣೆ ನಡೆಸಿದರು. ಬಳಿಕ ಬಲೆಯಿಂದ ಬಿಡಿಸಿಕೊಂಡು ದಡ ಸೇರಿದ ಆನೆ ಯಾವುದೇ ಅಪಾಯವಿಲ್ಲದೆ ಕಾಡು ಸೇರಿದ ಬಳಿಕ ಅರಣ್ಯ ಸಿಬ್ಬಂದಿ, ನಿಟ್ಟುಸಿರು ಬಿಟ್ಟರು.

Exit mobile version