ಮೋದಿ ಸಚಿವ ಸಂಪುಟ ಪುನರ್ ರಚನೆ: ರಾಜ್ಯದ ರಾಜ್ಯ ಖಾತೆ ಸಚಿವರಾಗಿ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಅವರು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

ನವದೆಹಲಿ, ಜು. 07: ಬಹು ನಿರೀಕ್ಷೀತವಾಗಿದ್ದಂತಹ ಕೇಂದ್ರ ಸಚಿವ ಸಂಪುಟ ವಿಸ್ತರಣೆಯು ನಡೆದಿದ್ದು ಸಚಿವ ಸ್ಥಾನ ಪಡೆದವರಿಗೆ ರಾಷ್ಟ್ರಪತಿ ಭವನದಲ್ಲಿ ಪ್ರಮಾಣವಚನ ಬೋಧಿಸಲಾಗುತ್ತಿದೆ.

ಪ್ರಧಾನಿ ನರೇಂದ್ರ ಮೋದಿ ತಮ್ಮ ಎರಡನೇ ಅಧಿಕಾರ ಅವಧಿಯಲ್ಲಿ ಮೊದಲ ಬಾರಿಗೆ ಸಚಿವ ಸಂಪುಟದಲ್ಲಿ ಮಹತ್ತರ ಬದಲಾವಣೆ ಮಾಡಿದ್ದು, 43 ನೂತನ ಸಚಿವರು ಪದಗ್ರಹಣ ಮಾಡಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ಬುಧವಾರ( ಜು.7) ರಂದು ಸಂಜೆ ನಡೆದ ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕದ ರಾಜ್ಯದ ರಾಜ್ಯ ಖಾತೆ ಸಚಿವರಾಗಿ ಶೋಭಾ ಕರಂದ್ಲಾಜೆ, ರಾಜೀವ್ ಚಂದ್ರಶೇಖರ್ ಅವರು ರಾಜ್ಯ ಖಾತೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ, ಬೀದರ್​ ಸಂಸದ ಭಗವಂತ್ ಖೂಬಾ ಪ್ರಮಾಣ ವಚನ ಸ್ವೀಕರಿಸಿದರು.

ಬಹು ನಿರೀಕ್ಷಿತ ಎಂಬಂತೆ ಯುವ ಮುಖ ಹಾಗು ಕಳೆದ ವರ್ಷ ಕಾಂಗ್ರೆಸ್ ನಿಂದ ಬಿಜೆಪಿ ಸೇರ್ಪಡೆಗೊಂಡು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರ ಬೀಳಲು ಕಾರಣರಾಗಿದ್ದ ಸಂಸದ ಜ್ಯೋತಿರಾದಿತ್ಯ ಸಿಂಧಿಯಾಗೂ ಸಚಿವ ಸ್ಥಾನ ನೀಡಲಾಗಿದೆ.

ಈ ಬಾರಿ ಶೋಷಿತ, ಪೀಡಿತ, ಹಾಗೂ ಆದಿವಾಸಿ, ಮಹಿಳೆ ಎನ್ನುವ ಘೋಷವಾಕ್ಯವನ್ನು ಇಟ್ಟುಕೊಂಡು ಸಚಿವ ಸಂಪುಟ ವಿಸ್ತರಣೆ ಮಾಡುವುದಾಗಿ ಹೇಳಲಾಗಿತ್ತು. ಅಲ್ಲದೇ ಇದುವರೆಗೂ ಮುನ್ನೆಲೆಗೆ ಬರದ ಹಾಗೂ ಹಿಂದುಳಿದ ವರ್ಗಗಳಿಗೆ ಸಚಿವ ಸ್ಥಾನ ಎಂಬುದಾಗಿ ಬಿಜೆಪಿಯ ಮೂಲಗಳು ತಿಳಿಸಿದ್ದವು. ಅದರಂತೆ ಸಚಿವ ಸ್ಥಾನ ಪಡೆದವರ ಪಟ್ಟಿಯನ್ನು ವೀಕ್ಷಿಸಿದರೆ ಅದರಂತೆ ಬಿಜೆಪಿ ನಡೆದಿದೆ ಎನ್ನಬಹುದು. ಮುಂಬರುವ ಅನೇಕ ರಾಜ್ಯಗಳ ವಿಧಾನಸಭಾ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈ ತಂತ್ರ ಹೀಡಿದೆ ಎನ್ನಬಹುದು.

ಈ ಬಾರಿ ಹೆಚ್ಚಿನ ಸಂಖ್ಯೆಯ ಪರಿಶಿಷ್ಟ ಜಾತಿ, ಪರಿಶಿಷ್ಟ ಜನಾಂಗ ಪ್ರತಿನಿಧಿಸುವ ಸಂಸದರು ಸೇರಿದಂತೆ 43 ಹೊಸ ಮುಖಗಳು ಇಂದು ಪ್ರಧಾನಿ ನರೇಂದ್ರ ಮೋದಿ ಅವರ ಹೊಸ ಸಂಪುಟ ಸೇರಿದ್ದಾರೆ. ಇದನ್ನು ಈ ಮೊದಲಿಗಿಂಲೂ ಅತ್ಯಂತ ಯುವ ಹಾಗೂ ಉತ್ಸಾಹಿ, ಹೊಸಾ ಮುಖಗಳನ್ನು ಹೊಂದಿದ ಸಂಪುಟ ಎಂದು ಕರೆಯಲಾಗಿದೆ.

ಸಂಪುಟ ಪುನರ್ ರಚನೆ ನಂತರ ಪರಿಶಿಷ್ಟ ಸಮುದಾಯದಿಂದ 12 ಸದಸ್ಯರು ಮತ್ತು ಪರಿಶಿಷ್ಟ ಪಂಗಡದಿಂದ 8 ಸದಸ್ಯರು ಸಂಪುಟ ಸೇರಲಿದ್ದಾರೆ. ಕ್ಯಾಬಿನೆಟ್ ವಿಸ್ತರಣೆಯ ನಂತರ, ಮೋದಿ ಸರ್ಕಾರ 27 ಒಬಿಸಿ ನಾಯಕರು ಇದ್ದಾರೆ ಎನ್ನಲಾಗಿದೆ. ಅದರಲ್ಲಿ ಐವರು ಕ್ಯಾಬಿನೆಟ್ ನಲ್ಲಿರುತ್ತಾರೆ. ಮಿಕ್ಕ ಸಚಿವರ ಕಾರ್ಯವೈಖರಿ,ಸಾಮರ್ಥ್ಯ ಆಧರಿಸಿ ಮುಂಬಡ್ತಿ ಅಥವಾ ಹಿಂಬಡ್ತಿ ನೀಡಲಾಗಿದೆ.

ಸಾಕಷ್ಟು ಬೆಳವಣಿಗೆಗಳ ನಂತರ ಒಂದಷ್ಟು ಹಿರಿಯ ನಾಯಕರು ನೂತನ ಸಚಿವ ಸಂಪುಟದ ವಿಸ್ತರಣೆಗೂ ಮುಂಚೆ ರಾಜಿನಾಮೆ ನೀಡಿದ್ದರು. ಅದರಲ್ಲಿ ಡಿ.ವಿ.ಸದಾನಂದ ಗೌಡ, ಡಾ. ಹರ್ಷವರ್ಧನ್, ರಾವು ಸಾಹೇಬ್ ದಾನ್ವೆ ಪಾಟೀಲ್, ಬಾಬುಲ್ ಸುಪ್ರಿಯೋ, ಪ್ರತಾಪ್ ಸಾರಂಗಿ, ರಮೇಶ್ ಪೋಖ್ರಿಯಾಲ್, ದೇಬಾಶ್ರೀ ಚೌಧುರಿ, ಸಂತೋಷ್ ಗಂಗ್ವಾರ್, ಥಾವರ್ ಚಂದ್ ಗೆಹ್ಲೋಟ್, ಸಂಜಯ್ ಶಮರಾವ್ ಧೋತ್ರೆ ಮತ್ತು ರತ್ತನ್ ಲಾಲ್ ಕಟಾರಿಯಾ ಸೇರಿದಂತೆ 11 ಮಂದಿ ಇದ್ದರು.

Exit mobile version