ಮೂರು ದಿನಗಳ ಕಾಲ ನಡೆಯುವ ಆಟಿಕೆ ಮೇಳಕ್ಕೆ ಮೋದಿ ಚಾಲನೆ

ನವದೆಹಲಿ, ಫೆ. 27: ಮಾರ್ಚ್ 2ರವರೆಗೆ ಮೂರು ದಿನಗಳ ಕಾಲ ನಡೆಯುವ ಭಾರತ ಆಟಿಕೆ ಮೇಳವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಶನಿವಾರ ಉದ್ಘಾಟಿಸಿದರು.

ಭಾರತದಲ್ಲಿ ಆಟಿಕೆ ಉದ್ಯಮಕ್ಕೆ ಪೂರಕವಾದ ವಾತಾವರಣ ನಿರ್ಮಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಈ ಮಹಾಮೇಳದಲ್ಲಿ ಆಟಿಕೆ ತಯಾರಕರು, ಗೊಂಬೆ ಖರೀದಿದಾರರು, ವಿದ್ಯಾರ್ಥಿಗಳು, ಶಿಕ್ಷಕರು, ಆಟಿಕೆ ವಿನ್ಯಾಸಕರು ಮೊದಲಾದವರು ಪಾಲ್ಗೊಳ್ಳುತ್ತಿದ್ದಾರೆ. ದೇಶದ ಎಲ್ಲಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಒಂದು ಸಾವಿರಕ್ಕೂ ಹೆಚ್ಚು ವ್ಯಾಪಾರಿಗಳು ತಮ್ಮ ಆಟಿಕೆಗಳನ್ನ ಆನ್​ಲೈನ್ ಮೂಲಕ ಪ್ರದರ್ಶನ ಮಾಡಲಿದ್ಧಾರೆ. ಭಾರತದ ಸಾಂಪ್ರದಾಯಿಕ ಆಟಿಕೆಗಳ ಜೊತೆಗೆ ಎಲೆಕ್ಟ್ರಾನಿಕ್ ಟಾಯ್, ಗೇಮ್, ಪಜಲ್ ಮೊದಲಾದ ಆಧುನಿಕ ಆಟಿಕೆ ಸಾಮಗ್ರಿಗಳು ಪ್ರದರ್ಶನದಲ್ಲಿರಲಿವೆ. ಸಾರ್ವಜನಿಕರು ಈ ಆಟಿಕೆಗಳನ್ನ ವೀಕ್ಷಿಸುವುದರ ಜೊತೆಗೆ ಆನ್​ಲೈನ್​ನಲ್ಲೇ ಖರೀದಿ ಮಾಡುವ ಅವಕಾಶ ಇದೆ.

ಇಂದು ವಿಡಿಯೋ ಕಾನ್ಫೆರೆನ್ಸ್ ಮೂಲಕವೇ ಟಾಯ್ ಫೇರ್ ಉದ್ಘಾಟನೆ ಮಾಡಿದ ಪ್ರಧಾನಿ ಮೋದಿ, ಆಟಿಕೆಗಳಿಂದ ಮಕ್ಕಳ ಮನಸು ವಿಕಸನಗೊಳ್ಳಲು ಹೇಗೆ ಸಹಕಾರಿಯಾಗುತ್ತದೆ ಎಂಬುದನ್ನು ವಿವರಿಸಿದರು. “ಮಕ್ಕಳ ಮನಸಿನ ವಿಕಸನಕ್ಕೆ ಗೊಂಬೆಗಳು ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಮಕ್ಕಳ ಬೌದ್ಧಿಕ ಬೆಳವಣಿಗೆ ಮತ್ತು ಆಶೋತ್ತರ ಭಾವನೆಗಳಿಗೆ ಆಟಿಕೆಗಳು ಪುಷ್ಟಿ ನೀಡುತ್ತವೆ” ಎಂದು ಹೇಳಿದರು.

ಕೇಂದ್ರ ಸರ್ಕಾರವು ದೇಶದಲ್ಲಿ ಗೊಂಬೆ ಉದ್ಯಮಕ್ಕೆ ಪುಷ್ಟಿ ನೀಡುವ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ವಿಶ್ವದ ಆಟಿಕೆ ಉದ್ಯಮಕ್ಕೆ ಭಾರತ ತಯಾರಕಾ ದೇಶವಾಗಿ ರೂಪಿಸಲು ಪ್ರಯತ್ನವಾಗುತ್ತಿದೆ. ಆ ನಿಟ್ಟಿನಲ್ಲಿ ದೇಶದ ವಿವಿಧೆಡೆ ಟಾಯ್ ಕ್ಲಸ್ಟರ್​ಗಳ ನಿರ್ಮಾಣವಾಗುತ್ತಿದೆ. ಕರ್ನಾಟಕದ ಕೊಪ್ಪಳದಲ್ಲಿ ಈಗಾಗಲೇ ಇಂಥದ್ದೊಂದು ದೊಡ್ಡ ಟಾಯ್ ಕ್ಲಸ್ಟರ್ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಅಲ್ಲಿ ದೇಶದ ಮೊದಲ ಟಾಯ್ ಕ್ಲಸ್ಟರ್ ತಲೆ ಎತ್ತಲಿದೆ. ಬೊಂಬೆ ನಗರಿ ಚನ್ನಪಟ್ಟಣದಲ್ಲಿ ದೇಶದ ಅತಿದೊಡ್ಡ ಟಾಯ್ ಕ್ಲಸ್ಟರ್ ನಿರ್ಮಾಣವಾಗಲಿದೆ. ಇಂದು ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯಗಳ ಬೊಂಬೆ ತಯಾರಕರ ಜೊತೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಚನ್ನಪಟ್ಟಣದ ಬೆಂಬೆ ತಯಾರಕರ ಜೊತೆಯೂ ಅವರು ಮಾತನಾಡಿದರು.

ಜಾಗತಿಕವಾಗಿ ಅಟಿಕೆ ಉದ್ಯಮ ಸುಮಾರು 6.5 ಲಕ್ಷ ಕೋಟಿ ರೂನಷ್ಟಿದೆ. ಭಾರತದಲ್ಲೇ 12 ಸಾವಿರ ಕೋಟಿ ರೂ ಆಟಿಕೆ ಉದ್ಯಮ ಇದೆ. ಈ ಟಾಯ್ ಕ್ಷೇತ್ರದಲ್ಲಿ ಚೀನಾದ್ದೇ ಸಿಂಹಪಾಲು ಇದ್ದು, ಭಾರತ ಡ್ರಾಗನ್ ರಾಷ್ಟ್ರದ ಪ್ರಾಬಲ್ಯ ಕಡಿಮೆ ಮಾಡಿ ಉತ್ತುಂಗಕ್ಕೆ ಏರಲು ಬೇಕಾದ ಸೌಕರ್ಯಗಳನ್ನ ತಯಾರಿಸುತ್ತಿದೆ. ಏಕಸ್​ನಂಥ ಬೆಂಬೆ ತಯಾರಕ ಸಂಸ್ಥೆಗಳು ಭಾರತದಲ್ಲಿ ಘಟಕಗಳನ್ನ ಸ್ಥಾಪಿಸಿ ಅನೇಕ ರಾಷ್ಟ್ರಗಳಿಗೆ ಆಟಿಕೆ ರಫ್ತು ಮಾಡುವ ಯೋಜನೆ ಹೊಂದಿವೆ.

Exit mobile version