ಮೀನಿನ ಸಂತತಿಯೇ ನಾಶ ಮಾಡುವ `ಬೆಳಕಿನ ಮೀನುಗಾರಿಕೆಗೆ’ ಪರವಾನಗಿ ನೀಡಿದವರಾರು?

fishing

ನಾಡದೋಣಿ ಮೀನುಗಾರರಿಗೆ ಎರಡೆರಡು ಕಡೆಯಿಂದ ಹೊಡೆತ ಬೀಳುತ್ತಿದೆ. ಮೊದಲಿಗೆ ಸರಿಯಾದ ಸಮಯದಲ್ಲಿ ಸೀಮೆಎಣ್ಣೆ ಸಿಗುತ್ತಿಲ್ಲ. ಹೀಗಾಗಿ ದೋಣಿಯನ್ನು ನಿಲ್ಲಿಸಬೇಕಾದ ಪ್ರಸಂಗ ಒದಗಿ ಬಂದಿದೆ. ಇದಕ್ಕಿಂತಲೂ ದೊಡ್ಡ ಆಪತ್ತು ಬಂದಿರುವುದು ಬೆಳಕು ಹಾಕಿ ಮೀನು ಹಿಡಿಯುವ ಪರ್ಸೀನ್‌ ದೋಣಿಯವರಿಂದ. ಈ ರೀತಿ ಮೀನು ಹಿಡಿಯುವುದನ್ನು ಕೇಂದ್ರ ಸರ್ಕಾರವೇ ನಿಷೇಧಿಸಿದೆ. ಆದರೆ ಕರ್ನಾಟಕದಲ್ಲಿ ಮಾತ್ರ ಬೆಳಕಿನ ಮೀನುಗಾರಿಕೆ ಅವ್ಯಾಹತವಾಗಿ ನಡೆದು ಬಂದಿದೆ. ಕಡಲ ತೀರದ ಅನತಿ ದೂರದಲ್ಲಿಯೇ ಪ್ರಕಾಶಮಾನವಾಗಿ ಬೆಳಕು ಹಾಕಿ ಮೀನು ಹಿಡಿಯುವುದು ನಮ್ಮ ಕರಾವಳಿ ಕಾವಲು ಪಡೆಯವರಿಗೆ ಕಾಣಿಸುತ್ತದೆ. ಆದರೆ ಅವರು ಮಾತ್ರ ಸುಮ್ಮನಿದ್ದಾರೆ. ಅಷ್ಟೊಂದು ಪ್ರಕಾಶಮಾನ ಬೆಳಕು ಹಾಕಲು ಬೇಕಾಗುವ ಜನರೇಟರ್‌, ಬಲ್ಬ್‌ ಎಲ್ಲವೂ ನಮ್ಮ ಬಂದರುಗಳಿಂದಲೇ ಹೋಗುತ್ತವೆ. ಆದರೆ ಮೀನುಗಾರಿಕೆ ಅಧಿಕಾರಿಗಳು ದಿವ್ಯ ಮೌನ ತಾಳಿದ್ದಾರೆ.

ಏನಾದರೂ ಕ್ರಮ ಕೈಗೊಳ್ಳಲು ಮುಂದಾದರೆ ಕಾಣದ ಕೈಗಳು ಈ ಅಧಿಕಾರಿಗಳಿಗೆ ಫೋನ್‌ ಮಾಡಿ ಸುಮ್ಮನಿರುವಂತೆ ಆದೇಶ ನೀಡುತ್ತವೆ. ಈ ಆದೇಶ ಮೀರಿದರೆ ಎಲ್ಲೋ ನೀರಿಲ್ಲದ ಜಾಗಕ್ಕೆ ಎತ್ತಂಗಡಿಯಾಗುತ್ತದೆ. ಈ ಬೆಳಕಿನ ಮೀನುಗಾರಿಕೆಯಿಂದ ಆಗುವ ಅನಾಹುತ ಒಂದೆರಡಲ್ಲ. ದೊಡ್ಡ ಮೀನುಗಳಿಂದ ಹಿಡಿದು ಮೊನ್ನೆ ಹೊರಬಂದ ಸಣ್ಣ ಮರಿಗಳು ಸಹ ಈ ಬೆಳಕಿಗೆ ಆಕರ್ಷಿತರಾಗಿ ಬೆಳಕಿರುವ ಕಡೆಗೆ ಬರುತ್ತವೆ. ಪರ್ಸೀನ್‌ ದೋಣಿಯವರು ಇವುಗಳನ್ನು ಸುತ್ತುವರಿದು ಎಲ್ಲವನ್ನೂ ಬಾಚಿ ಬಿಡುತ್ತಾರೆ. ಅದರ ಅಕ್ಕಪಕ್ಕ ಇರುವ ಉಳಿದ ಯಾವುದೇ ದೋಣಿಗಳಿಗೆ ಮೀನು ಸಿಗುವುದಿಲ್ಲ. ನಾಡದೋಣಿಯವರ ಪಾಡಂತೂ ದೇವರೇ ಬಲ್ಲ.ಅಷ್ಟೇ ಅಲ್ಲ. ಅದಕ್ಕಿಂತಲೂ ಮಿಗಿಲಾದ ದೀರ್ಘಕಾಲೀನ ಅಪಾಯಕ್ಕೆ ಇಡೀ ಮೀನುಗಾರ ಸಮುದಾಯ ತಲೆ ನೀಡಬೇಕಾಗುತ್ತದೆ. ಎಲ್ಲಾ ಸಣ್ಣಪುಟ್ಟ ಮೀನುಗಳು ಪರ್ಸೀನ್‌ ಬಲೆಗೆ ಬೀಳುವುದರಿಂದ ಮೀನಿನ ಸಂತತಿಯೇ ನಾಶವಾಗುತ್ತದೆ. ಇದೇ ಕಾರಣಕ್ಕಾಗಿ ಕಳೆದ ವರ್ಷ ಮಾರ್ಚ್‌ ಆರಂಭದಲ್ಲಿಯೇ ಮೀನುಗಾರಿಕೆಗೆ ಬ್ರೇಕ್‌ ಬಿದ್ದಿತ್ತು. ಪರ್ಸೀನ್‌ನವರ ಅತಿಯಾಸೆಗೆ ಇಡೀ ಮೀನುಗಾರ ಸಮುದಾಯ ಬೆಲೆ ತೆತ್ತಿತ್ತು.

ಈ ಬಾರಿಯೂ ಬೆಳಕಿನ ಮೀನುಗಾರಿಕೆ ಎಗ್ಗಿಲ್ಲದೆ ಸಾಗಿದೆ. ಕಾನೂನು ಕ್ರಮ ಕೈಗೊಳ್ಳಬೇಕಾದವರು ʻಯಾರೋ ಮೇಲಿನವರ ಆದೇಶ ಇದೆʼ ಅಂತ ಹೇಳಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಪರ್ಸೀನ್‌ ದೋಣಿಯವರು ಉಂಟು ಮಾಡುವ ವಿಪತ್ತನ್ನು ಅರಿತುಕೊಂಡು ನೆರೆಯ ತಮಿಳುನಾಡು ಸರ್ಕಾರವು ಪರ್ಸೀನ್‌ ಮೀನುಗಾರಿಕೆಯನ್ನೇ ನಿಷೇಧಿಸಿದೆ. ಯಾವ ಪ್ರತಿಭಟನೆಯೂ ಈ ಸರ್ಕಾರ ಜಗ್ಗಲಿಲ್ಲ. ಆದರೆ ಕರ್ನಾಟಕದಲ್ಲಿ ಹಾಗಲ್ಲ. ಪರ್ಸೀನ್‌ ಮೀನುಗಾರಿಕೆಯ ಜೊತೆಗೆ ಕೇಂದ್ರ ಸರ್ಕಾರವು ಈಗಾಗಲೇ ನಿಷೇಧಿಸಿದ ಬೆಳಕಿನ ಮೀನುಗಾರಿಕೆಗೂ ಮುಕ್ತ ಅನುಮತಿ ನೀಡಲಾಗಿದೆ. ಅಲ್ಲದೆ ಈ ಪ್ರಕಾಶಮಾನ ಬೆಳಕಿನಿಂದಾಗಿ ಪರ್ಸೀನ್‌ ಮೀನುಗಾರಿಕೆಯಲ್ಲಿ ದುಡಿಯುವ ಎಲ್ಲಾ ಮೀನುಗಾರರ ಕಣ್ಣಿನ ದೃಷ್ಟಿಗೂ ವಿಪರೀತ ಪೆಟ್ಟು ಇದೆ ಎಂದು ಸ್ವತಃ ಮೀನುಗಾರರೇ ಅಲವತ್ತು ತೋಡಿಕೊಳ್ಳುತ್ತಿದ್ದಾರೆ. ಆದರೆ ಇದನ್ನೆಲ್ಲಾ ತಡೆಯುವವರು ಯಾರು ಎಂಬ ಪ್ರಶ್ನೆ `ಯಕ್ಷಪ್ರಶ್ನೆ’ಯಂತೆ ಕಾಡುತ್ತಿದೆ ಎಂದು ಹೇಳುತ್ತಾರೆ.

Exit mobile version