ಮೈಸೂರು, ಜ. 12: ರಸ್ತೆ ಬದಿಯಲ್ಲಿ ನಿಂತಿದ್ದ ನಿರ್ಗತಿಕನ ಮೇಲೆ ಕಿಡಿಗೇಡಿ ಆಟೋ ಚಾಲಕನೊಬ್ಬ ಆಟೋ ಹತ್ತಿಸಿದ ಅಮಾನವೀಯ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ಗಾಂಧಿನಗರದ ೪ನೇ ಕ್ರಾಸ್ ನಲ್ಲಿ ಈ ಅಮಾನವೀಯ ಘಟನೆ ನಡೆದಿದ್ದು, ಕಿಡಿಗೇಡಿಯ ಹೀನ ಕೃತ್ಯ ಸಮೀಪದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ರಸ್ತೆ ಬದಿ ನಿಂತಿದ್ದ ನಿರ್ಗತಿಕನಿಗೆ ಏಕಾಏಕಿ ಆಟೋದಲ್ಲಿ ಡಿಕ್ಕಿ ಹೊಡೆದು ಕೆಳಗೆ ಬೀಳಿಸಿ, ನಂತರ ಮತ್ತೆ ಸ್ವಲ್ಪ ದೂರ ಹೋಗಿ ಆಟೋ ತಿರುಗಿಸಿ ಬಂದು ಬಿದ್ದಿದವರ ಮೇಲೆ ಮತ್ತೆ ಆಟೋ ಹತ್ತಿಸಿ ದರ್ಪ ಮೆರೆದಿದ್ದಾನೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರೊ ನಿರ್ಗತಿಕನನ್ನು ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಮೈಸೂರಿನ ಎನ್ ಆರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.