ನಿಥಾರಿ ಹತ್ಯಾಕಾಂಡ: ಈ ಪ್ರಕರಣದ 2ನೇ ಆರೋಪಿ ಮಣಿಂದರ್ ಸಿಂಗ್ ಪಂಧೇರ್ ಜೈಲಿನಿಂದ ಬಿಡುಗಡೆ

Uttar Pradesh: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿದ್ದ 21 ಮಕ್ಕಳ ಅತ್ಯಾಚಾರವೆಸಗಿ ಹತ್ಯೆಗೈದಿದ್ದ ನಿಥಾರಿ ಹತ್ಯಾಕಾಂಡ ಪ್ರಕರಣದ 2ನೇ ಆರೋಪಿ ಮಣಿಂದರ್ ಸಿಂಗ್ ಪಂಧೇರ್ (Maninder Singh Pandher) ಜೈಲಿನಿಂದ ಬಿಡುಗಡೆ ಆಗಿದ್ದು, ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಇರುವ ಲುಕ್ಸಾರ್ ಕಾರಾಗೃಹದಿಂದ ಈ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ.

ಉತ್ತರ ಪ್ರದೇಶದ ಅಲಹಾಬಾದ್ ಹೈಕೋರ್ಟ್ (Allahabad Highcourt) ಕಳೆದ ಸೋಮವಾರವಷ್ಟೇ 65 ವರ್ಷದ ವಯಸ್ಸಿನ ಉದ್ಯಮಿ ಮಣಿಂದರ್ ಸಿಂಗ್ ಪಂಧೇರ್‌ನನ್ನು ಆರೋಪ ಮುಕ್ತಗೊಳಿಸಿದ್ದು, ಈ ಪ್ರಕರಣದ ಪ್ರಮುಖ ಆರೋಪಿ ಮಣಿಂದರ್ ಸಿಂಗ್ ಪಂಧೇರ್ ಮನೆ ಕೆಲಸದ ಆಳು ಸುರೇಂದರ್ ಕೋಲಿ (Surendar Koli) ವಿರುದ್ಧದ ದಾಖಲಾಗಿದ್ದ ಹಲವು ಪ್ರಕರಣಗಳ ಪೈಕಿ 12 ಪ್ರಕರಣಗಳಲ್ಲಿ ದೋಷ ಮುಕ್ತಗೊಳಿಸಿತ್ತು.

ಈ ಸರಣಿ ಹತ್ಯಾಕಾಂಡವು 2005 – 2006ರ ನಡುವೆ ನಡೆದಿದ್ದು, ಸರ್ಕಾರಿ ವಕೀಲರು ಆರೋಪಿಗಳ ವಿರುದ್ಧದ ದೋಷಾರೋಪವನ್ನು ಸಾಬೀತು ಮಾಡಲು ವಿಫಲರಾದ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ದಾಖಲಾಗಿದ್ದ ಪ್ರಕರಣಗಳಲ್ಲಿ ಆರೋಪಗಳನ್ನು ಖುಲಾಸೆಗೊಳಿಸಲಾಗಿತ್ತು.

ಆರೋಪಿಗಳನ್ನು ಕೇವಲ ಅನುಮಾನದ ಆರೋಪದ ಮೇಲೆ ಬಂಧಿಸಿ ಅವರ ವಿರುದ್ಧ ದೋಷಾರೋಪಪಟ್ಟಿ ದಾಖಲು ಮಾಡಲಾಗಿದ್ದು, ಪೊಲೀಸರ ತನಿಖಾ ಪ್ರಕ್ರಿಯೆ ಬಗ್ಗೆಯೇ ಅನುಮಾನಗಳು ವ್ಯಕ್ತವಾಗಿವೆ. ಆರೋಪಿಗಳ ವಿರುದ್ಧ ಆರೋಪಿಸಲಾಗಿದ್ದ ಅನುಮಾನಾಸ್ಪದ ಕೃತ್ಯವನ್ನು ಸಾಬೀತು ಮಾಡಲು ಸರ್ಕಾರಿ ವಕೀಲರು ವಿಫಲರಾಗಿದ್ದರೆ ಎಂದು ನ್ಯಾಯಾಲಯ ಅಭಿಪ್ರಾಯ ವ್ಯಕ್ತಪಡಿಸಿತ್ತು.

ಲುಕ್ಸಾರ್ ಕಾರಾಗೃಹದ ವರಿಷ್ಠಾಧಿಕಾರಿ ಅರುಣ್ ಪ್ರತಾಪ್ ಸಿಂಗ್ (Arun Pratap Singh) ಅವರು, ನಿಥಾರಿ ಹತ್ಯಾಕಾಂಡ ಪ್ರಕರಣದಲ್ಲಿ ಮಣಿಂದರ್ ಸಿಂಗ್ ಪಂಧೇರ್ ದೋಷ ಮುಕ್ತ ಎಂದು ಹೇಳಿತ್ತು. ಇದೀಗ ಆರೋಪಿಯ ಬಿಡುಗಡೆಗೆ ಎರಡನೇ ಆದೇಶವೂ ನ್ಯಾಯಾಲಯದಿಂದ ಸಿಕ್ಕಿದೆ. ಹಾಗಾಗಿ ಆತನನ್ನು ಬಿಡುಗಡೆ ಮಾಡಲಾಗುತ್ತಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಜೈಲಿನ ವರಿಷ್ಠಾಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ ಒಂದು ಗಂಟೆ ಬಳಿಕ ಕಾರಾಗೃಹದ ಎಲ್ಲಾ ಪ್ರಕ್ರಿಯೆಗಳನ್ನೂ ಮುಕ್ತಾಯಗೊಳಿಸಿ ಆರೋಪಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪ್ರಕರಣದ ಪ್ರಮುಖ ಆರೋಪಿ ಸುರೇಂದರ್ ಕೋಲಿ ಇನ್ನೂ ಕೂಡಾ ಜೈಲಿನಲ್ಲೇ ಇದ್ದಾನೆ. ಈತನನ್ನು ಉತ್ತರ ಪ್ರದೇಶದ ಗಾಜಿಯಾಬಾದ್‌ನ (Ghaziabad) ದಸ್ನಾ ಕಾರಾಗೃಹದಲ್ಲಿ ಇರಿಸಲಾಗಿದ್ದು, ಆರೋಪಿಗಳಿಗೆ ಈ ಹಿಂದೆ ಕೆಳ ನ್ಯಾಯಾಲಯ ವಿಧಿಸಿದ್ದ ಮರಣ ದಂಡನೆ ಶಿಕ್ಷೆಯನ್ನು ರದ್ದು ಮಾಡಲಾಗಿದೆ.

ಒಟ್ಟು 18 ಪ್ರಕರಣಗಳ ಪೈಕಿ 12 ಪ್ರಕರಣಗಳಲ್ಲಿ ಸುರೇಂದರ್ ಕೋಲಿ ಖುಲಾಸೆ ಆಗಿದ್ದಾನೆ. ಇನ್ನೂ 4 ಪ್ರಕರಣಗಳು ಆತನ ಮೇಲಿವೆ. ಈ ಪ್ರಕರಣಗಳ ಅಡಿ ಆರೋಪಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. 14 ವರ್ಷದ ಬಾಲಕಿಯ ಹತ್ಯೆ ಪ್ರಕರಣದ ಅಡಿ ಆರೋಪಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದಾನೆ.

ಮಕ್ಕಳ ಅಸ್ಥಿ ಪಂಜರವು ನೋಯ್ಡಾದ ಚರಂಡಿಗಳಲ್ಲಿ ಪತ್ತೆಯಾಗುವ ಮೂಲಕ ಈ ಪ್ರಕರಣ ಬೆಳಕಿಗೆ ಬಂದಿತ್ತು. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಭೀಕರ ಕೊಲೆ, ನರ ಮಾಂಸ ಭಕ್ಷಣೆ ಸೇರಿದಂತೆ ಹಲವು ಆರೋಪಗಳು ಇಬ್ಬರೂ ಆರೋಪಿಗಳ ಮೇಲಿವೆ. ಪೊಲೀಸರ ತನಿಖೆ ಮುಂದುವರೆದಂತೆ ಹಲವು ಅಸ್ಥಿ ಪಂಜರಗಳು ಪತ್ತೆಯಾದವು. ಈ ಮೂಲಕ ಈ ಪ್ರಕರಣ ದೇಶಾದ್ಯಂತ ಸುದ್ದಿಯಾಗಿತ್ತು.

ಭವ್ಯಶ್ರೀ ಆರ್.ಜೆ

Exit mobile version