ಚಿನ್ನದ ಚಮಚ ಇಟ್ಕೊಂಡು ಹುಟ್ಟಿರೋ ರಾಹುಲ್ಗೆ ಬಡತನದ ಬಗ್ಗೆ ಏನು ಗೊತ್ತಿದೆ..?: ಅರುಣ್ ಸಿಂಗ್

ಹಾಸನ, ಫೆ. 18: ವಿಶ್ವದ ಅತಿ ದೊಡ್ಡ ಪಕ್ಷ ನಮ್ಮ ಬಿಜೆಪಿ ಪಕ್ಷ, ವಿಶ್ವದಲ್ಲಿ ಅತಿ ದೊಡ್ಡ ಜನಪ್ರಿಯ ನಾಯಕ ಮೋದಿ. 2019ರಲ್ಲಿ ಮೋದಿಯ ಜನಪ್ರಿಯತೆಯಿಂದಲೇ ಅತ್ಯಧಿಕ ಸ್ಥಾನಗಳನ್ನು ನಾವು ಗೆಲ್ಲಲು ಸಾಧ್ಯವಾಯಿತು ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ.

ಹಾಸನ ಹೊರವಲಯದ ಎಚ್.ಕೆ.ಎಸ್ ಶಾಲೆಯಲ್ಲಿ ನಡೆಯುತ್ತಿರುವ ರಾಜ್ಯ ಪ್ರಕೋಷ್ಠಗಳ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ತೆಗೆದುಕೊಳ್ಳುವ ನಿರ್ಣಯಗಳು ದೇಶದ ಅಭಿವೃದ್ಧಿಗೆ ಪ್ರಮುಖವಾದ ಪಾತ್ರವಹಿಸುತ್ತಿವೆ. ಬಡವರ ಬಗ್ಗೆ ನಮ್ಮ ಪ್ರಧಾನಿಮಂತ್ರಿಗೆ ಬಹಳ ಕಾಳಜಿಯಿದೆ, ಬಡವರಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಅವರು ಕಲ್ಪಿಸುತ್ತಿದ್ದಾರೆ ಎಂದರು.

ಈ ಹಿಂದಿನ ಕಾಂಗ್ರೆಸ್ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇರಲಿಲ್ಲ. ಆದರೆ ಮೋದಿ ಸರ್ಕಾರ ಬಂದಾಗಿನಿಂದಲೂ ಬಡವರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಡತನದ ಬಗ್ಗೆ ಮೋದಿಜೀ ಅವರಿಗೆ ಗೊತ್ತಿದೆ, ಚಿನ್ನದ ಚಮಚ ಇಟ್ಟುಕೊಂಡು ಹುಟ್ಟಿರುವ ರಾಹುಲ್ ಗಾಂಧಿಗೆ ಏನು ಗೊತ್ತಿದೆ ಎಂದು ಪ್ರಶ್ನಿಸಿದರು.

ಮೋದಿಯವರು ತ್ಯಾಗಿ ಮತ್ತು ತಪಸ್ವಿ, ನಮ್ಮ ಪ್ರಧಾನಿ ಅಂತ ನಾಯಕ ನೂರು ವರ್ಷಕ್ಕೊಮ್ಮೆ ಹುಟ್ಟಿ ಬರುತ್ತಾರೆ. ಮೋದಿ ಬಗ್ಗೆ ಮಾತನಾಡಲು ಹೋದ್ರೆ ಎರಡು ದಿನಬೇಕಾಗುತ್ತದೆ. ಹೊರ ದೇಶದಲ್ಲಿ ಭಾರತ ದೇಶದ ಸ್ಥಾನಮಾನ ಹೆಚ್ಚಾಗಲು ನಮ್ಮ ಪ್ರಧಾನಮಂತ್ರಿ ಮೋದಿ ಅವರು ಕಾರಣ. ವಿರೋಧ ಪಕ್ಷಗಳು ಜನಪ್ರಿಯ ಯೋಜನೆಗಳನ್ನು ವಿರೋಧ ಮಾಡುತ್ತಿದ್ದಾರೆ. ಏಕೆಂದರೆ ಅವರಲ್ಲಿ ಕಮ್ಯೂನಿಷ್ಟ್ ಗಳಿದ್ದಾರೆ. ದೇಶದ ಅಭಿವೃದ್ಧಿಯನ್ನು ಅವರು ಸಹಿಸುತ್ತಿಲ್ಲ ಎಂದರು.

ಗ್ರಾ.ಪಂ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಜಯಗಳಿಸಿದ್ದಾರೆ. ಹಾಸನ ಮತ್ತು ಮಂಡ್ಯದ ಜಿಲ್ಲೆಯಲ್ಲೂ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಜೆಡಿಎಸ್ ಪಕ್ಷಕ್ಕಿಂತ ನಮ್ಮ ಪಕ್ಷ ಪ್ರಬಲವಾಗಲಿದೆ, ಕಾಂಗ್ರೆಸ್ ಗೆ ಲೀಡರ್ ಶಿಪ್ ಕ್ವಾಲಿಟಿ ಇಲ್ಲ ಎಂದು ಹೇಳಿದರು.

Exit mobile version