ರಾಜಭವನ ಚಲೋ ರ್ಯಾಲಿ: ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಬಂಧನ

ಬೆಂಗಳೂರು, ಜ. 20: ಇಂದು ಕಾಂಗ್ರೆಸ್​ ವತಿಯಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರಾಜಭವನ ಚಲೋ ರ್ಯಾಲಿ ನಡೆಸಲಾಯಿತು. ಬೆಂಗಳೂರು ಮೆಜೆಸ್ಟಿಕ್​ನಿಂದ ಆರಂಭವಾದ ರ್ಯಾಲಿ ರಾಜಭವನದತ್ತ ಹೊರಟಿತ್ತು. ರಾಜಭವನ ಮುತ್ತಿಗೆ ಹಾಕಲು ಹೊರಟ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು  ತಡೆದರು. ಬಳಿಕ ಕಾಂಗ್ರೆಸ್ ಕಾರ್ಯಕರ್ತರನ್ನು ವಶಕ್ಕೆ ಪಡೆದರು. ವಶಕ್ಕೆ ಪಡೆದ ಕೈ ಕಾರ್ಯಕರ್ತರನ್ನು ಬಿಎಂಟಿಸಿ ಬಸ್ ನಲ್ಲಿ ಕರೆದುಕೊಂಡು ಹೋಗಲಾಯಿತು. ಬಳಿಕ ಕಾಂಗ್ರೆಸ್ ಮುಖಂಡರಾದ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರನ್ನು ಬಂಧಿಸಲಾಯಿತು.

ಇಂದು ಬೆಳಗ್ಗೆ 10 ಗಂಟೆಗೆ ಕಾಂಗ್ರೆಸ್ ರ್ಯಾಲಿ ಮೆಜೆಸ್ಟಿಕ್​ನ ಕೆಎಸ್ಆರ್ ರೈಲು ನಿಲ್ದಾಣದಿಂದ ಆರಂಭವಾಗಯಿತು. ಕೆಎಸ್ಆರ್ ರೈಲು ನಿಲ್ದಾಣ, ಸಂಗೊಳ್ಳಿ ರಾಯಣ್ಣ ವೃತ್ತ, ಆನಂದ ರಾವ್ ಫ್ಲೈಓವರ್ ಮೂಲಕ ಫ್ರೀಡಂ ಪಾರ್ಕ್ ಬಳಿಕ ರಾಜಭವನ ಚಲೋ ಕಾರ್ಯಕ್ರಮ ನಡೆಸಲಾಯಿತು. ಮೆರವಣಿಗೆಯಲ್ಲಿ ಕಾಂಗ್ರೆಸ್ ಮುಖಂಡರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು, ರೈತರು ಭಾಗಿಯಾಗಿದ್ದಾರೆ.

ಮಹಾರಾಣಿ ಕಾಲೇಜು ಮುಂಭಾಗದ ರಸ್ತೆಯಲ್ಲಿ ರ್ಯಾಲಿ ತಡೆದ ಪೊಲೀಸರು ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಬಿಎಂಟಿಸಿ ಬಸ್ ನಲ್ಲಿ ಒತ್ತಾಯಪೂರ್ವಕವಾಗಿ ಹತ್ತಿಸಿಕೊಂಡು ಕರೆದೊಯ್ದರು. ಇನ್ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ವಶಕ್ಕೆ ಪಡೆದು ನಾಲ್ಕು ಬಿಎಂಟಿಸಿ ಬಸ್ ನಲ್ಲಿ ತುಂಬಿಸಿಕೊಂಡು ಕರೆದೊಯ್ಯುಲಾಯಿತು.

ರಾಜಭವನ ಚಲೋ ರ್ಯಾಲಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಪರಮೇಶ್ವರ್, ರಾಮಲಿಂಗಾರೆಡ್ಡಿ, ಈಶ್ವರ್ ಖಂಡ್ರೆ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಭಾಗಿಯಾಗಿದ್ದರು. ಕೇಂದ್ರ ಸರ್ಕಾರ ಹಾಗೂ ವಿವಾದಾತ್ಮಕ ಕಾಯ್ದೆ ವಿರುದ್ಧ ಬೃಹತ್ ಮಟ್ಟದ ಪ್ರತಿಭಟನೆ ನಡೆಸಿದರು.

Exit mobile version