ರಮೇಶ್ ಜಾರಕಿಹೊಳಿ ಪ್ರಕರಣ: ಸಿಡಿ ವಿಚಾರ ನಮಗೆ ಮುಖ್ಯ ಅಲ್ಲ: ನಿಖಿಲ್ ಕುಮಾರಸ್ವಾಮಿ

ಕೋಲಾರ, ಮಾ. 26: ರಮೇಶ್ ಜಾರಕಿಹೊಳಿ ಅವರ ರಾಸಲೀಲೆಯ ಸಿಡಿ ಪ್ರಕರಣದ ಕುರಿತು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.
 
ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸಿಡಿ ವಿಚಾರ ನಮಗೆ ಮುಖ್ಯ ಅಲ್ಲ. ರಾಜ್ಯದಲ್ಲಿ ಜನರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಜನರ ಸಮಸ್ಯೆಗಳ ಕುರಿತು ಚರ್ಚೆ ನಡೆಸುವುದು ಅವಶ್ಯಕವಾಗಿದೆ ಎಂದರು.

ಕೊರೊನಾ ಎರಡನೇ ಅಲೆ ಪ್ರಾರಂಭವಾಗಿದ್ದು, ಈಗಾಗಲೇ ಕೊರೊನಾದಿಂದ ಸಂಕಷ್ಟಕ್ಕೆ ಗುರಿಯಾದ ಜನರು ಮತ್ತೆ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಈ ಪರಿಸ್ಥಿತಿ ಎದುರಿಸುವ ಕುರಿತು ನಾವು ಚಿಂತೆ ಮಾಡಬೇಕಾಗಿದೆ. ಅದುಬಿಟ್ಟು ವೈಯಕ್ತಿಕ ವಿಚಾರ ತೆಗೆದು ಟೀಕೆ ಟಿಪ್ಪಣಿ ಮಾಡಲು ನಾನು ಬಯಸುವುದಿಲ್ಲ ಎಂದರು.
 
ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಹಲವಾರು ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಸರ್ಕಾರದ ಈ ತೀರ್ಮಾನ ತಪ್ಪು ಎಂದು ಹೇಳಲು ಆಗುವುದಿಲ್ಲ. ಜನರ ಆರೋಗ್ಯದ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದೆ. ಹೀಗಾಗಿ ಅವರು ಕಾಲಕ್ಕೆ ತಕ್ಕಂತೆ ಸೂಕ್ತ ತೀರ್ಮಾನಗಳನ್ನು ತೆಗೆದುಕೊಳ‍್ಳುತ್ತಿದ್ದಾರೆ. ಇದೇ ವೇಳೆ ಕೋಟ್ಯಾಂತರ ರೂ. ಹಾಕಿ ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡಿದ್ದು, ಅವರಿಗೂ ನಷ್ಟ ಆಗದಂತೆ ಎಚ್ಚರ ವಹಿಸಬೇಕಾಗಿದೆ ಎಂದರು.

Exit mobile version