ಪಡಿತರ ಚೀಟಿದಾರರಿಗೆ ಬಿಗ್ ಶಾಕ್ : ರೇಶನ್ ವಿತರಣೆ ಮುಂದುವರಿಸುವ ಯೋಜನೆಯಿಲ್ಲ: ಸುಧಾಂಶು ಪಾಂಡೆ

ಗರೀಬ್ ಕಲ್ಯಾಣ್ ಯೋಜನೆ ವಿಸ್ತರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ’

ನವದೆಹಲಿ:  ನವೆಂಬರ್ 30 ರ ನಂತರ ಉಚಿತ ಪಡಿತರ ವಿತರಣೆ ಮಾಡುವುದಿಲ್ಲವೆಂದು ಕೇಂದ್ರ ಆಹಾರ ಮತ್ತು ಸಾರ್ವಜನಿಕ ವಿತರಣ ಇಲಾಖೆಯ ಕಾರ್ಯದರ್ಶಿ ಸುಧಾಂಶು ಪಾಂಡೆ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್-19ನಿಂದ ಬಡಜನರಿಗೆ ಉಂಟಾದ ತೊಂದರೆ ನಿವಾರಿಸಲು ಈ ಯೋಜನೆಯನ್ನು ಮಾರ್ಚ್ 2020 ರಲ್ಲಿ ಘೋಷಿಸಲಾಯಿತು. ಆರಂಭದಲ್ಲಿ, ಈ ಯೋಜನೆಯನ್ನು ಏಪ್ರಿಲ್-ಜೂನ್ 2020 ಅವಧಿಗೆ ವಿಸ್ತರಿಸಲಾಯಿತು. ನಂತರ ಅದನ್ನು ನವೆಂಬರ್ 30 ರವರೆಗೆ ಮುಂದೂಡಲಾಗಿತ್ತು ಎಂದರು.

 ದೇಶದ ಆರ್ಥಿಕತೆ ಪುನರುಜ್ಜೀವನದ ಹಂತದಲ್ಲಿರುವ ಕಾರಣ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯನ್ನು ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದು ಅವರು ಹೇಳಿದ್ದಾರೆ.

ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯ ವ್ಯಾಪ್ತಿಯಲ್ಲಿ ದೇಶದ 80 ಕೋಟಿ ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಉಚಿತವಾಗಿ ಪಡಿತರ ವಿತರಿಸಲಾಗುತ್ತಿದೆ. ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ನವೆಂಬರ್ 30ರ ನಂತರ ಉಚಿತ ಪಡಿತರವನ್ನು ವಿಸ್ತರಿಸುವ ಪ್ರಸ್ತಾವನೆ ಸರ್ಕಾರದ ಮುಂದೆ ಇಲ್ಲ ಎಂದು ಹೇಳಿದ್ದಾರೆ.

ಆರ್ಥಿಕತೆಯು ಪುನಶ್ಚೇತನಗೊಳ್ಳುತ್ತಿದೆ ಮತ್ತು ನಮ್ಮ ಓಎಂಎಸ್​ಎಸ್​ (ಮುಕ್ತ ಮಾರುಕಟ್ಟೆ ಮಾರಾಟ ಯೋಜನೆ) ಆಹಾರ ಧಾನ್ಯಗಳ ವಿಲೇವಾರಿಯು ಈ ವರ್ಷ ನಿಧಾನವಾಗಿ ಪ್ರಗತಿಯತ್ತ ಸಾಗುತ್ತಿದೆ. ಆದ್ದರಿಂದ, PMGKAY ವಿಸ್ತರಿಸುವ ಯಾವುದೇ ಪ್ರಸ್ತಾಪವಿಲ್ಲ ಎಂದರು.

PMGKAY ಅಡಿಯಲ್ಲಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯಿದೆ (NFSA) ಅಡಿಯಲ್ಲಿ ಗುರುತಿಸಲಾದ 80 ಕೋಟಿ ಪಡಿತರ ಚೀಟಿದಾರರಿಗೆ ಸರ್ಕಾರವು ಉಚಿತ ಪಡಿತರವನ್ನು ಪೂರೈಸುತ್ತದೆ. ಸಬ್ಸಿಡಿ ಆಧಾರದ ಮೇಲೆ ಪಡಿತರ ಅಂಗಡಿಗಳ ಮೂಲಕ ಉಚಿತ ಪಡಿತರವನ್ನು ನೀಡಲಾಗುತ್ತದೆ.

Exit mobile version