ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಕಳೆದ ಹತ್ತು ವರ್ಷಗಳಲ್ಲಿ ಭಾರತೀಯರಿಗೆ ಕೊಟ್ಟ ಒಂದು ಮಾತನ್ನೂ ಉಳಿಸಿಕೊಂಡಿಲ್ಲ. ಕಪ್ಪುಹಣ ವಾಪಾಸ್ ತರಲಿಲ್ಲ. ಭಾರತೀಯರ ಖಾತೆಗೆ 15 ಲಕ್ಷ ಹಾಕಲಿಲ್ಲ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡಲಿಲ್ಲ. ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂದ ಮೋದಿ ರೈತರ ಖರ್ಚು ಹೆಚ್ಚಾಗುವಂತೆ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್, ಗ್ಯಾಸ್ (Petrol, Diesel, Gas) ರಸಗೊಬ್ಬರ, ಬೇಳೆ ಕಾಳುಗಳ ಬೆಲೆ ಇಳಿಸಲಿಲ್ಲ.
ಮತ್ತೆ ಅದೇ ಮುಖ ನೋಡಿ ಮತ ಹಾಕಿದರೆ ಆ ಮತಕ್ಕೆ ಘನತೆ ಬರುತ್ತದಾ? ಎಂದು ಸಿಎಂ ಸಿದ್ದರಾಮಯ್ಯನವರು (Siddaramaiah) ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ (Congress) ಅಭ್ಯರ್ಥಿ ಸೌಮ್ಯ ರೆಡ್ಡಿ ಪರ ಪ್ರಚಾರ ನಡೆಸಿ ಮಾತನಾಡಿದ ಅವರು, ನಾವು ಬರೀ ಭಾವನಾತ್ಮಕವಾಗಿ ಜನರನ್ನು ಕೆರಳಿಸಿ ವಂಚಿಸಲ್ಲ. ನಿಮ್ಮ ಭಾವನೆಗಳನ್ನು ಗೌರವಿಸುತ್ತಲೇ ನಿಮ್ಮ ಬದುಕಿಗೆ ಸ್ಪಂದಿಸುತ್ತೇವೆ.
ಆದ್ದರಿಂದ ಕಾಂಗ್ರೆಸ್ ಗೆಲ್ಲಿಸಿ ದೇಶ ಉಳಿಸಿ. ತೇಜಸ್ವಿ ಸೂರ್ಯ (Tejaswi Surya) ಸಂಸದರಾಗಿ ರಾಜ್ಯಕ್ಕೆ ಆದ ಅನ್ಯಾಯದ ಬಗ್ಗೆ ಒಮ್ಮೆಯೂ ಧ್ವನಿ ಎತ್ತಿಲ್ಲ. ಮೋದಿ ಮುಖ ತೋರಿಸಿ ಓಟು ಕೇಳುವ ದುರ್ಗತಿ ಬಿಜೆಪಿ (BJP) ಅವರಿಗೆ ಬಂದಿದೆ. ಅಭಿವೃದ್ಧಿ ಕಾರ್ಯಗಳನ್ನು ಮುಂದಿಟ್ಟು ಮತ ಕೇಳುವ ಮುಖ ಇಲ್ಲ. ಏಕೆಂದರೆ ಇವರು ಅಭಿವೃದ್ಧಿ ಕಾರ್ಯಗಳನ್ನೇ ಮಾಡಿಲ್ಲ ಎಂದು ಟೀಕಿಸಿದರು. ಸೌಮ್ಯರೆಡ್ಡಿ (Soumya Reddy) ಗೆದ್ದರೆ ನಾನು ಗೆದ್ದಂತೆ. ನಿಮ್ಮ ಹೃದಯದ ಮಾತು ಕೇಳಿ ಮತ ಹಾಕಿ.
ಬರೀ ಭಾವನಾತ್ಮಕವಾಗಿ ಕೆರಳಿ ಮತ ಹಾಕಿದ್ದಕ್ಕೆ ಹತ್ತು ವರ್ಷದಲ್ಲಿ ದೇಶಕ್ಕೆ, ನಿಮಗೆ ಸಿಕ್ಕಿದ್ದೇನು? ಬೆಲೆಯೇರಿಕೆ, ಬಡತನ, ನಿರುದ್ಯೋಗ ಮಾತ್ರ. ಕನ್ನಡ, ಕನ್ನಡಿಗರು, ಕರ್ನಾಟಕದ (Karntaka) ಬಗ್ಗೆ ಒಮ್ಮೆಯೂ ಸಂಸತ್ತಿನಲ್ಲಿ ಧ್ವನಿಯೆತ್ತದ, ಕೇಂದ್ರದಿಂದ ರಾಜ್ಯಕ್ಕೆ ಸಾಲು ಸಾಲು ಅನ್ಯಾಯಗಳಾಗುತ್ತಿದ್ದರೂ ಅದನ್ನೇ ಸಮರ್ಥಿಸುವ ನಾಡದ್ರೋಹಿಗಳಿಗೆ ಈ ಬಾರಿ ದಕ್ಷಿಣದ ಮತದಾರರು ತಕ್ಕ ಪಾಠ ಕಲಿಸಬೇಕು. ಸೌಮ್ಯ ರೆಡ್ಡಿಯವರ ಗೆಲುವು ನ್ಯಾಯದ ಗೆಲುವು, ಕನ್ನಡದ ಗೆಲುವಾಗಲಿದೆ. ಬದಲಾವಣೆಯ ಪರ್ವಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರ ಮುನ್ನುಡಿಯಾಗಲಿ ಎಂದಿದ್ದಾರೆ.