ಮೃತ ಹರ್ಷನ ಕುಟುಂಬಕ್ಕೆ ತುರ್ತು 25 ಲಕ್ಷ ಪರಿಹಾರ ನೀಡಲು ಕೋವಿಡ್-19ರ ನಿಧಿ ಬಳಕೆ!

Basavaraj Bommai

`ದಿ ಫೈಲ್ಸ್’ ಪತ್ರಿಕೆಯ ವರದಿ ಅನುಸಾರ, ಶಿವಮೊಗ್ಗದಲ್ಲಿ(Shivmoga) ಕಳೆದ ಕೆಲ ತಿಂಗಳ ಹಿಂದೆಯಷ್ಟೇ ದುಷ್ಕರ್ಮಿಗಳು ಹೂಡಿದ್ದ ಸಂಚಿಗೆ ಹತ್ಯೆಯಾದ ಬಜರಂಗದಳ ಕಾರ್ಯಕರ್ತ ಹರ್ಷ(Harsha) ಎಂಬ ಯುವಕನ ಕುಟುಂಬ ಸದಸ್ಯರಿಗೆ ರಾಜ್ಯ ಸರ್ಕಾರವು(State Government) ಕೋವಿಡ್-19ರ ಅಡಿ ಲಭ್ಯವಿದ್ದ ಅನುದಾನದಲ್ಲಿಯೇ ತುರ್ತಾಗಿ 25 ಲಕ್ಷ ರೂ. ಮೊತ್ತದ ಹಣವನ್ನು ಪರಿಹಾರ ಧನವಾಗಿ ವಿತರಿಸಲು ನಿರ್ದೇಶಿಸಿತ್ತು ಎಂಬುದು ಇದೀಗ ಬೆಳಕಿಗೆ ಬಂದಿದೆ.

ಕಡು ಬಡವರಿಗೆ, ಅನಾರೋಗ್ಯ ಪೀಡಿತ ಬಿಪಿಎಲ್ ಪಡಿತರ(BPL Card Holders) ಚೀಟಿದಾರರಿಗೆ, ವಿಕಲ ಚೇತನರಿಗೆ, ಆಕಸ್ಮಿಕ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬ ಸದಸ್ಯರಿಗೆ ಸಿಎಂ ಅವರ ಪರಿಹಾರ ನಿಧಿಯಿಂದ ಆರ್ಥಿಕ ನೆರವು ನೀಡುತ್ತಿದ್ದ ರಾಜ್ಯ ಸರ್ಕಾರವು ಇದೇ ಪ್ರಥಮ ಬಾರಿಗೆ ಕ್ರಿಮಿನಲ್ ಆರೋಪಗಳ ಹಿನ್ನೆಲೆ ಹೊಂದಿದ್ದ ಹರ್ಷ ಎಂಬಾತನ ಕೊಲೆ ಪ್ರಕರಣದಲ್ಲಿ ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರವು ದುರ್ಬಳಕೆಯಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು. ಇದರ ಬೆನ್ನಲ್ಲೇ ಕೋವಿಡ್-19ರ(Covid 19 Relief Fund) ಅಡಿ ಲಭ್ಯವಿದ್ದ ಅನುದಾನವನ್ನು ಬಳಸಿಕೊಂಡು ತುರ್ತಾಗಿ 25 ಲಕ್ಷ ರೂ.ಗಳನ್ನು ಹರ್ಷನ ಕುಟುಂಬ ಸದಸ್ಯರಿಗೆ ನೀಡಲಾಗಿತ್ತು ಎಂಬ ಮಾಹಿತಿಯು ಮುನ್ನಲೆಗೆ ಬಂದಿದೆ.

ಮುಖ್ಯಮಂತ್ರಿ ಪರಿಹಾರ ನಿಧಿಯಿಂದ(CM Relief Fund) 25 ಲಕ್ಷ ರೂ. ಹರ್ಷ ಕುಟುಂಬ ಸದಸ್ಯರಿಗೆ ಮಂಜೂರಾಗಿತ್ತಾದರೂ ಈ ಹಣವು ಜಿಲ್ಲಾಧಿಕಾರಿಗಳ ಸಿಎಂ ಪರಿಹಾರ ನಿಧಿ ಬ್ಯಾಂಕ್ ಖಾತೆಗೆ ಜಮಾ ಆಗಿರಲಿಲ್ಲ ಎಂಬ ಸಂಗತಿ ತಿಳಿದುಬಂದಿದೆ. ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಛೇರಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡುವ ಮುಖೇನ ಖಚಿತಪಡಿಸಿದ್ದಾರೆ. ಅಲ್ಲದೇ ಈ ಸಂಬಂಧ ಶಿವಮೊಗ್ಗ ಜಿಲ್ಲಾಧಿಕಾರಿಗಳು 2022ರ ಮಾರ್ಚ್ 10 ರಂದು ಅಧಿಕೃತ ಜ್ಞಾಪನ ಪತ್ರ ಹೊರಡಿಸಿದ್ದರು ಎಂದು ತಿಳಿದುಬಂದಿದೆ.

ಹರ್ಷನ ಕುಟುಂಬಕ್ಕೆ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿ ಖಾತೆ( ಸಂಖ್ಯೆ : 38587794605) ಇಂದ 25 ಲಕ್ಷ ರೂ. ಪರಿಹಾರ ವಿತರಿಸಿ ಸ್ವೀಕೃತಿ ಪಡೆದು ಮುಖ್ಯಮಂತ್ರಿಗಳ ಪರಿಹಾರ ನಿಧಿ ಶಾಖೆಗೆ ಒದಗಿಸಬೇಕು ಎಂದು ಮುಖ್ಯಮಂತ್ರಿಯ ಜಂಟಿ ಕಾರ್ಯದರ್ಶಿ ಅವರು ಸೂಚಿಸಿದ್ದರು. ಆದ್ರೆ ಈ ಪರಿಹಾರದ ಮೊತ್ತವು ಶಿವಮೊಗ್ಗ ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿ ಬ್ಯಾಂಕ್ ಖಾತೆಗೆ ಜಮಾ ಆಗಿರಲಿಲ್ಲ ಎಂಬುದು ತಿಳಿದುಬಂದಿದೆ.

ಮೃತರ ಕುಟುಂಬಕ್ಕೆ ತುರ್ತಾಗಿ ಪರಿಹಾರ ಹಣ ವಿತರಣೆ ಮಾಡಬೇಕಾಗಿರುವುದರಿಂದ ಕೋವಿಡ್-19ರ ಅಡಿ ತಹಶೀಲ್ದಾರ್ ಶಿವಮೊಗ್ಗ ಇವರಲ್ಲಿ ಲಭ್ಯವಿರುವ ಅನುದಾನದಲ್ಲಿ ಮೃತ ಹರ್ಷ ಕುಟುಂಬ ವಾರಸುದಾರರಿಗೆ 25 ಲಕ್ಷ ರೂ. ಪರಿಹಾರ ವಿತರಿಸಬೇಕು. ಈ ಪರಿಹಾರ ಮೊತ್ತವು ಜಿಲ್ಲಾಧಿಕಾರಿಗಳ ಮುಖ್ಯಮಂತ್ರಿಗಳ ಪರಿಹಾರ ನಿಧಿ ಬ್ಯಾಂಕ್ ಖಾತೆಗೆ ಜಮಾ ಆದ ಕೂಡಲೇ ಈ ಮೊತ್ತವನ್ನು ಮರು ಹಂಚಿಕೆ ಮಾಡಬೇಕು ಎಂದು ನಿರ್ದೇಶನ ನೀಡಲಾಗಿತ್ತು ಎಂಬುದು ಗೊತ್ತಾಗಿದೆ. ಈ ಪ್ರಕ್ರಿಯೇ ಆದ ನಂತರ ಮುಖ್ಯಮಂತ್ರಿಯವರ ಪರಿಹಾರ ನಿಧಿಯಿಂದ 25 ಲಕ್ಷ ರೂ. ಅನುದಾನವು,

ಜಿಲ್ಲಾಧಿಕಾರಿಗಳ ಉಳಿತಾಯ ಖಾತೆಗೆ ಜಮಾ ಆಗಿದ್ದರಿಂದ 25 ಲಕ್ಷ ರೂ.ಗಳನ್ನು ಶಿವಮೊಗ್ಗ ತಹಶೀಲ್ದಾರ್ ಅವರಿಗೆ ಬಿಡುಗಡೆ ಮಾಡಲು ಅನುಮೋದಿಸಲಾಗಿತ್ತು ಎಂಬುದು ತಿಳಿದುಬಂದಿದೆ. ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿರುವ ಮೊತ್ತವನ್ನು ಬಾಧಿತರಿಗೆ ಮಂಜೂರು ಮಾಡುವ ಅಧಿಕಾರ ಮುಖ್ಯಮಂತ್ರಿಗಳ ವಿವೇಚನೆಗೆ ಬಿಡಲಾಗಿದ್ದರೂ ಹಿಂದಿನ ಯಾವ ಮುಖ್ಯಮಂತ್ರಿಗಳೂ ಹತ್ಯೆಗೀಡಾಗಿರುವ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಹಣ ಮಂಜೂರು ಮಾಡಿರಲಿಲ್ಲ.

ಆದ್ರೆ ರಾಜ್ಯ ಬಿಜೆಪಿ ಸರ್ಕಾರವು ಮುಖ್ಯಮಂತ್ರಿಗಳ ವಿವೇಚನಾ ಅಧಿಕಾರ ಬಳಸಿಕೊಂಡು 25 ಲಕ್ಷ ರೂ. ಮೊತ್ತದ ಚೆಕ್ ಅನ್ನು ನೀಡುವ ಮೂಲಕ ಹೊಸ ಪರಂಪರೆಗೆ ನಾಂದಿ ಹಾಡಿರುವುದು ಚರ್ಚೆಗೆ ಗ್ರಾಸವಾಗಿತ್ತು.

Exit mobile version