ಮೈಸೂರು,ಫೆ.26 : ಮೈಸೂರಿನ ಹೆಚ್ ಡಿ ಕೋಟೆ ತಾಲೂಕಿನ ಎಲೆಗುಂಡಿ ಗ್ರಾಮದಲ್ಲಿ ರೈತನಾಗಿದ್ದಂತ ಹರೀಶ್ ಟ್ರ್ಯಾಕ್ಟರ್ ಚಾಲಕನಾಗಿಯೂ ಕೆಲಸ ಮಾಡ್ತಾ ಇದ್ದ. ಆದ್ರೇ ಟ್ರ್ಯಾಕ್ಟರ್ ಅನ್ನು ಅಜಾಗರೂಕತೆಯಿಂದ ಓಡಿಸ್ತಾ ಇದ್ದ ಕಾರಣ, ಅಣ್ಣ ವೆಂಕಟೇಶ್ ಬೈದು ಬುದ್ದಿ ಹೇಳಿದ್ದರು. ಹಾಗೆಲ್ಲಾ ಓಡಿಸಬೇಡ. ಏನಾದ್ರೂ ಅನಾಹುತ ಆದ್ರೇ ಗತಿಯೇನು ಎಂಬುದಾಗಿ ಬುದ್ಧಿ ಮಾತು ಹೇಳಿದ್ದರು. ತಂದೆ ಕೂಡ ಬೈದು ಬುದ್ಧಿ ಹೇಳಿದ್ದರಿಂದ ಮನನೊಂದು, ಹರೀಶ್ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದನು.
ಹರೀಶ್ ಆತ್ಮಹತ್ಯೆ ಮಾಡಿಕೊಂಡಿರುವ ವೀಡಿಯೋವನ್ನು ಆತನ ಅಣ್ಣ ವೆಂಕಟೇಶ್ ಗೆ ಸ್ನೇಹಿತರು ವಾಟ್ಸ್ ಆಪ್ ಮಾಡಿದ್ದರು. ಇಂತಹ ವೀಡಿಯೋ ನೋಡಿದಂತ ವೆಂಕಟೇಶ್, ತಮ್ಮನ ಸಾವಿಗೆ ನಾನೇ ಕಾರಣವಾಗಿಬಿಟ್ಟೆ ಎಂಬುದಾಗಿ ಮನನೊಂದು ಆತ್ಮಹತ್ಯೆಗೆ ದಾರಿ ಹಿಡಿದರು. ಮಾನಸಿಕವಾಗಿ ಕುಗ್ಗಿ ಹೋಗಿದ್ದ ಅಣ್ಣ ರಸ್ತೆ ಬದಿಯ ಮರವೊಂದಕ್ಕೆ ತಾನೂ ನೇಣುಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಹೀಗೆ ಅಣ್ಣ ಬೈದ ಅಂತ ತಮ್ಮ ಹರೀಶ್ ಆತ್ಮಹತ್ಯೆಗೆ ಶರಣಾಗಿದ್ದರೇ, ತಮ್ಮ ನನ್ನ ಮಾತಿನಿಂದಲೇ ಹೀಗೆ ಮಾಡಿಕೊಂಡ, ಅಣ್ಣ ವೆಂಕಟೇಶ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಇಬ್ಬರು ಅಣ್ಣ-ತಮ್ಮಂದಿರ ಮೃತದೇಹಗಳನ್ನು ಅಕ್ಕ ಪಕ್ಕದಲ್ಲಿ ಚಿತೆಯ ಮೇಲಿಟ್ಟು, ಅಂತಿಮ ಸಂಸ್ಕಾರ ನೆರವೇರಿಸಿದ್ಧನ್ನು ಕಂಡು ಇಡೀ ಊರಿಗೆ ಊರೇ ಕಣ್ಣೀರನ್ನು ಸುರಿಸಿತು. ಬಾಳಿ ಬದುಕಬೇಕಾದ ಎರಡು ಜೀವಗಳು ಹೀಗೆ ಅವಸರದ ನಿರ್ಧಾರ ತೆಗೆದುಕೊಂಡದ್ದು ನಿಜಕ್ಕೂ ವಿಷಾದನೀಯ.