ಜನಪ್ರೀಯತೆಯನ್ನು ಹೆಚ್ಚಿಸುವ ದುರುದ್ದೇಶ ಮಹಾರಾಷ್ಟ್ರ ಮುಖ್ಯಮಂತ್ರಿಯದು: ಸಚಿವ ಕೆ. ಎಸ್ ಈಶ್ವರಪ್ಪ

ಬೆಂಗಳೂರು, ಜ. 28: ಈಗಾಗಲೇ ತಮ್ಮ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳಬೇಕು ಎನ್ನುವ ದುರುದ್ದೇಶದಿಂದ ಮಹರಾಷ್ಟ್ರ ಮುಖ್ಯಮಂತ್ರಿಗಳು ಇಲ್ಲಸಲ್ಲದ ಹೇಳಿಕೆಯನ್ನು ನೀಡುತ್ತಿದ್ದಾರೆ. ಅವರ ಹೇಳಿಕೆಯನ್ನು ನಾನು ಉಗ್ರವಾಗಿ ಖಂಡಿಸುತ್ತೇನೆ ಎಂದು ಗ್ರಾಮೀಣಾಭಿವೃದ್ದಿ ಸಚಿವರಾದ ಕೆ. ಎಸ್‌ ಈಶ್ವರಪ್ಪನವರು ಹೇಳಿದ್ದಾರೆ.

ಬೆಂಗಳೂರಿನಲ್ಲಿ ಹ.ನೀ ದೀಪಕ್‌ ಅವರ ನೇತೃತ್ವದ ಕರುನಾಡು ವಿಜಯಸೇನೆಯ ಕೇಂದ್ರ ಕಚೇರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮರಾಠಿಗರು ಕರ್ನಾಟಕ ರಾಜ್ಯದಲ್ಲಿ ವಾಸಿಸುತ್ತಿದ್ದಾರೋ ಆ ಪ್ರದೇಶಗಳೆಲ್ಲಾ ಮಹರಾಷ್ಟ್ರಕ್ಕೆ ಸೇರಬೇಕು ಎನ್ನುವ ಅಸಂಬದ್ದ ಹೇಳಿಕೆಯನ್ನು ಮಹರಾಷ್ಟ್ರ ಮುಖ್ಯಮಂತ್ರಿ ನೀಡಿದ್ದಾರೆ. ಇದೇ ರೀತಿ ಕರ್ನಾಟಕದ ವಿವಿಧ ಭಾಗಗಳ ಜನರು ಮಹರಾಷ್ಟ್ರ ಹಾಗೂ ವಿಶೇಷವಾಗಿ ಮುಂಬಯಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ, ಆ ಪ್ರದೇಶಗಳನ್ನು ಕರ್ನಾಟಕಕ್ಕೆ ಸೇರಿಸಿ ಎಂದು ಕೇಳುವುದು ಸರಿಯಾಗುವುದೇ ಎಂದು ಪ್ರಶ್ನಿಸಿದರು.

ಅವರು ಮಾಡುತ್ತಿರುವ ತಪ್ಪನ್ನು ನಾವು ಮಾಡುವುದಕ್ಕೆ ಆಗುವುದಿಲ್ಲ. ಮಹಾಜನ ವರದಿಯೇ ಅಂತಿಮವಾಗಿದ್ದು, ಮರಾಠಿಗರು ಹಾಗೂ ಕನ್ನಡಿಗರು ಮೊದಲಿನಿಂದಲೂ ಸಹೋದರರಂತೆ ಬಾಳುತ್ತಿದ್ದೇವೆ. ಇದು ಮುಂದುವರೆಯಬೇಕು. ರಾಜ್ಯದ ಯುವಕರಲ್ಲಿ ಗಡಿ, ನೀರು ಹಾಗೂ ಭೂಮಿ ವಿಷಯದಲ್ಲಿ ಜಾಗೃತಿ ಮೂಡಿಸಬೇಕಾದ ಅವಶ್ಯಕತೆ ಹೆಚ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಕರುನಾಡು ವಿಜಯಸೇನೆ ಸಂಘಟನೆ ಕಾರ್ಯಪ್ರವೃತ್ತರಾಗಲಿ ಎಂದು ಹಾರೈಸಿದರು.

ಕೇಂದ್ರ ಕಚೇರಿಯ ಉದ್ಘಾಟನೆಯನ್ನು ತುಮಕೂರು ಸಿದ್ದಗಂಗಾ ಕ್ಷೇತ್ರದ ಮಹಾಸ್ವಾಮೀಜಿಗಳಾದ ಸಿದ್ದಗಂಗಾ ಶ್ರೀಗಳು ನೆರವೇರಿಸಿದರು. ಉಪಮುಖ್ಯಂತ್ರಿ ಅಶ್ವಥ್‌ ನಾರಾಯಣ, ಯುವಘಟಕದ ಅಧ್ಯಕ್ಷ ಮಹೇಶ್ ಆರ್ ಎಸ್, ರಾಜ್ಯ ವಕ್ತಾರರು ರಾಮ್ ಪ್ರಸಾದ್, ಸಾಮಾಜಿಕ ಜಾಲತಾಣಗಳ ಅಧ್ಯಕ್ಷ ರೇಣುಕಾ ಪ್ರಸಾದ್, ಬೆಂಗಳೂರು ನಗರ ಅಧ್ಯಕ್ಷ ವಿಜಯ್ ಕುಮಾರ್ ಹಾಗೂ ಆಟೋ ಮತ್ತು ಮಹಿಳಾ ಘಟಕದ ಸದಸ್ಯರು ಈ ಸಮಯದಲ್ಲಿ ಉಪಸ್ಥಿತರಿದ್ದರು.

Exit mobile version